ಸಂಡೂರು: ತಾಲೂಕಿನ ಸಿ.ಕೆ.ಹಳ್ಳಿ (ಚಿಕ್ಕ ಕೆರೆಯಾಗಿನಹಳ್ಳಿ) ಕೆರೆಯ ಒತ್ತುವರಿ ತೆರವು ಕಾರ್ಯ ಸೋಮವಾರ ಪೊಲೀಸರ ಬಂದೋಬಸ್ತ್ನಲ್ಲಿ ನಡೆಯಿತು. ತಹಸೀಲ್ದಾರ್ ಎಚ್.ಜೆ.ರಶ್ಮಿ ನೇತೃತ್ವದಲ್ಲಿ ತೆರವುಗೊಳಿಸಿ ಸಣ್ಣ ನೀರಾವರಿ ಇಲಾಖೆಯಿಂದ ಟ್ರಂಚ್ಗಳನ್ನು ತೋಡಲಾಯಿತು.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಗ್ರಾಮದ ಸರ್ವೇ ನಂ.113ರ ಪೈಕಿ 249.10 ಎಕರೆ ವಿಸ್ತೀರ್ಣವಿದೆ. ಇಲಾಖೆ ಅಧಿಕಾರಿಗಳು ಜೆಸಿಬಿ ಮೂಲಕ ಕೆರೆಯ ಒತ್ತುವರಿ ಪ್ರದೇಶದಲ್ಲಿ ಟ್ರಂಚ್ ಹೊಡೆಯಲು ಮುಂದಾದಾಗ ಒತ್ತುವರಿದಾರರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಷಯ ತಹಸೀಲ್ದಾರ್ ಗಮನಕ್ಕೆ ತರುತ್ತಿದ್ದಂತೆ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರ ಮನವೊಲಿಸಲಾಗಿದೆ. ಸುಪ್ರೀಂಕೋರ್ಟ್ ನಿರ್ದೇಶದ ಮೇರೆಗೆ ಕೆರೆಗಳ ಹದ್ದುಬಸ್ತು ಮಾಡಲಾಗುತ್ತಿದ್ದು, ಅಡ್ಡಿಪಡಿಸಿದರೆ ಕಾನೂನು ಕ್ರಮಕೈಗೊಳ್ಳುವುದಾಗಿ ತಹಸೀಲ್ದಾರ್ ರಶ್ಮಿ ಎಚ್ಚರಿಕೆ ನೀಡಿದರು.