ಸಂಡೂರು: ಅದಿರು ಲಾರಿಗಳಿಂದ ಉಂಟಾಗುವ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಅಧಿಕಾರಿಗಳಿಗೆ ಎಂದು ಶಾಸಕ ಈ.ತುಕಾರಾಮ್ ಸೂಚಿಸಿದರು. ಪಟ್ಟಣದ ತಹಸಿಲ್ ಕಚೇರಿಯಲ್ಲಿ ಮಂಗಳವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಹೊಸಪೇಟೆ ರಸ್ತೆಯಲ್ಲಿ ನಮ್ಮ ವಾಹನಕ್ಕೆ ಅದಿರು ಲಾರಿ ಡಿಕ್ಕಿ ಹೊಡೆಯಲು ಬಂದಿತ್ತು. ಲಾರಿ ಚಾಲಕರು ತೀರಾ ಅನಾಗರಿಕರಂತೆ ವರ್ತಿಸುತ್ತಿದ್ದಾರೆ. ಈ ಕುರಿತು ಫೋಟೊ ಮತ್ತು ವಿಡಿಯೋಗಳಿವೆ. ಚಿತ್ರದುರ್ಗ ಮಾದರಿಯಲ್ಲಿ ಅದಿರು ಲಾರಿಗಳಿಗೆ ಜಿಪಿಎಸ್ ಅಳವಡಿಸಬೇಕು. ಪೊಲೀಸ್ ಹಾಗೂ ಆರ್ಟಿಒ ಇಲಾಖೆಗಳು ಜಂಟಿಯಾಗಿ 40 ಕಿಮೀಗೂ ಹೆಚ್ಚು ವೇಗದಲ್ಲಿ ಚಲಿಸುವ ಲಾರಿಗಳಿಗೆ ದಂಡ ವಿಧಿಸಬೇಕು. ವೇಗ ನಿಯಂತ್ರಣ ಮಾಡದ ಲಾರಿಗಳಿಗೆ ಅದಿರು ಸಾಗಣೆ ಪರ್ಮಿಟ್ ರದ್ದುಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಟ್ರಾಫಿಕ್ ಸಮಸ್ಯೆ ನಿಯಂತ್ರಿಸಿ
ಲಾರಿಗಳು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಟ್ರಾಫಿಕ್ ಜಾಮ್ ಮಾಡಿದರೆ ಶಾಸಕರಿಗೆ ಜನ ಬೈಯುತ್ತಾರೆ. ಕೆಲವರು ಗಣಿಗಳಿಂದ ಹಣ ಗಳಿಸಲು ಲಕ್ಷಾಂತರ ಜನರು ಬಯದಲ್ಲಿ ಯಾಕೆ ಬದುಕಬೇಕು. ಜ.31ರೊಳಗೆ ಟ್ರಾಫಿಕ್ ಜಾಮ್ ನಿಯಂತ್ರಣವಾಗಬೇಕು. ಇಲ್ಲವಾದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಎಚ್ಚರಿಸಿದರು. ತಾಲೂಕಿನ ಎಲ್ಲ ಗಣಿಗಳಿಂದ ಶೇ.50 ಅದಿರು, ಲಾರಿಗಳಲ್ಲಿ ರಸ್ತೆ ಮೂಲಕ ಸಾಗಿಸಬೇಕು. ಉಳಿದ ಶೇ.50 ಅದಿರನ್ನು ರೈಲ್ವೆ ಲೈನ್, ಕನ್ವೇಯರ್ ಬೆಲ್ಟ್ ಮೂಲಕ ಹೋಗಬೇಕು. ತಾಲೂಕಿನ ಗಣಿಗಳ ಸಮೀಪದಲ್ಲೆ ಸಾಕಷ್ಟು ರೈಲ್ವೆ ಲೈನ್ಗಳಿವೆ ಅವುಗಳನ್ನು ಬಳಕೆ ಮಾಡಿದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ. ಅದಿರು ಲಾರಿಗಳು ಸಾರ್ವಜನಿಕ ರಸ್ತೆ ಅತಿಕ್ರಮಿಸಿಕೊಂಡು ನಿಲ್ಲುವುದನ್ನು ತಪ್ಪಿಸಬೇಕು. ಸಂಬಂಧಿಸಿ ಗಣಿ ಕಂಪನಿ, ಟ್ರಾನ್ಸ್ಪೋರ್ಟ್ಗಳು ಲಾರಿಗಳು ಜಾಗ ಗುರುತಿಸಿಕೊಂಡು ಸಾರ್ವಜನಿಕ ವಾಹನಗಳು ನಿರುಮ್ಮಳವಾಗಿ ಚಲಿಸುವ ವಾತಾವರಣ ನಿರ್ಮಿಸಬೇಕು ಎಂದು ಶಾಸಕ ಸೂಚಿಸಿದರು.
ಇದನ್ನೂ ಓದಿ: ಬೀದಿ ದೀಪ ನಿರ್ವಹಣೆ ಟೆಂಡರ್ ಅಕ್ರಮ! ಪ್ರಭಾವಕ್ಕೆ ಒಳಗಾಯಿತೆ ಜಿಲ್ಲಾಡಳಿತ?
ಸಂಡೂರು-ಹೊಸಪೇಟೆ, ತೋರಣಗಲ್, ಕೂಡ್ಲಿಗಿ ರಸ್ತೆಯಲ್ಲಿ ಸಂಚರಿಸುವ ಅದಿರು ಲಾರಿಗಳು ಹಾಗೂ ಸಾರ್ವಜನಿಕ ವಾಹನಗಳ ಸಮೀಕ್ಷೆ ನಡೆಸಿ ವರದಿ ನೀಡಬೇಕು ಎಂದು ಆರ್ಟಿಒ ಅಧಿಕಾರಿ ಶೇಖರ್ಗೆ ಸೂಚಿಸಿದರು. ಪಟ್ಟಣದಲ್ಲಿ ಬೈಕ್ಗಳಲ್ಲಿ ತ್ರಿಬಲ್ ರೈಡಿಂಗ್ ಮಾಡುವ ಹಾಗೂ ಕರ್ಕಶವಾಗಿ ಶಬ್ದ ಮಾಡುವ ವಾಹನ ಸವಾರರಿಗೆ ದಂಡ ವಿಧಿಸಬೇಕು. ಕಾಲೇಜು ರಸ್ತೆಗಳಲ್ಲಿ ವಿದ್ಯಾರ್ಥಿನಿಯರನ್ನು ಚುಡಾಯಿಸುವ ಪುಂಡರನ್ನು ಕೂಡಲೇ ಹತೋಟಿಗೆ ತರಬೇಕೆಂದು ಪಿಎಸ್ಐಗೆ ಸೂಚಿಸಿದರು. ಡಿವೈಎಸ್ಪಿ ಪ್ರಸಾದ್ ಗೋಖಲೆ, ತಹಸೀಲ್ದಾರ್ ಜೆ.ಅನಿಲ್ ಕುಮಾರ್, ತಾಪಂ ಇಒ ಎಚ್.ಷಡಾಕ್ಷರಯ್ಯ, ಪಿಡಬ್ಲುೃಡಿ ಎಇಇ ಕೃಷ್ಣಾನಾಯ್ಕ, ಆರ್ಎಫ್ಒಗಳಾದ ದಾದಾ ಖಲಂದರ್, ಡಿ.ಕೆ.ಗಿರೀಶಕುಮಾರ್, ಡಿಎಂಜಿ ಅಧಿಕಾರಿ ಸಾಧಿಕ್, ಬಿಇಒ ಡಾ.ಐ.ಆರ್.ಅಕ್ಕಿ, ಉಪ ತಹಸೀಲ್ದಾರ್ ಕೆ.ಎಂ.ಶಿವಕುಮಾರ್ ಇತರರಿದ್ದರು.