ಸಂಡೂರು: ಕೇಂದ್ರ ಸರ್ಕಾರ ಹೊಸದಾಗಿ ರೂಪಿಸಿರುವ ಮೋಟಾರ್ ವಾಹನ ಕಾಯ್ದೆ ವಿರೋಧಿಸಿ ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್, ಕರ್ನಾಟಕ ರಾಜ್ಯ ವಾಹನ ಚಾಲಕರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಡ್ರೈವರ್ಸ್ ಮತ್ತು ಓನರ್ಸ್ ವೆಲ್ಫೇರ್ ಅಸೋಸಿಯೇಷನ್ ತಾಲೂಕು ಘಟಕಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದವು.
ಮೋಟಾರ್ ವಾಹನ ಕಾಯ್ದೆಗೆ ವಿರೋಧ
ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ನ ರಾಜ್ಯ ಪ್ರ.ಕಾರ್ಯದರ್ಶಿ ಎಸ್ಆರ್ಪಿ ಬಸವರಾಜ ಮಾತನಾಡಿ, ಭಾರತೀಯ ನ್ಯಾಯ ಸಂಹಿತೆಯ ಕಲಂ 106 ಕಾಯ್ದೆ ಪ್ರಕಾರ 10 ವರ್ಷ ಜೈಲು ಶಿಕ್ಷೆ ಹಾಗೂ 7ಲಕ್ಷ ದಂಡವನ್ನು ವಿಧಿಸುವ ಪ್ರಸ್ತಾವಿತ ಹೊಸ ಕಾಯ್ದೆ ಜಾರಿಗೊಳಿಸಬಾರದು. ಆಕಸ್ಮಿಕವಾಗಿ ಅಪಘಾತಗಳು ಸಂಭವಿಸುತ್ತವೆ. ಆ ಸ್ಥಳದಲ್ಲಿ ಚಾಲಕರು ಇದ್ದರೆ ಜನರು ದಾಳಿ ಮಾಡಲಿದ್ದಾರೆ. ಈಗಾಗಲೇ ಹೊಡೆದು ಸಾಯಿಸಿರುವ ಘಟನೆಗಳು ತುಂಬಾ ಇದಾವೆ. 7ಲಕ್ಷ ರೂ. ದಂಡ ಕಟ್ಟುವ ಶಕ್ತಿ ಚಾಲಕರಿಗೆ ಇರುವುದಿಲ್ಲ. ಆದ್ದರಿಂದ ಹೊಸ ಕಾಯ್ದೆ ಜಾರಿಗೆ ತರಬಾರದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಇದನ್ನೂ ಓದಿ: ‘ಆತ್ಮರಕ್ಷಣೆ ಕ್ರಮಗಳು ಅರ್ಥವಾಗ್ತವೆ’: ಪಾಕ್ ಮೇಲೆ ಇರಾನ್ ದಾಳಿ ಕುರಿತು ಭಾರತ ಪ್ರತಿಕ್ರಿಯೆ
ನಂತರ ತಹಸೀಲ್ದಾರ್ ಜೆ.ಅನಿಲ್ ಕುಮಾರ್ಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಆರ್.ಶಿವಮೂರ್ತಿ, ನಾಗರಾಜ್, ಮಂಜುನಾಥ ಮೇಟಿ, ಅಕ್ಬರ್, ತಬಲಾ ಕುಮಾರಸ್ವಾಮಿ, ಕೆ.ಕೋಟ್ರೇಶ್, ಮಂಜುನಾಥ, ಭೀಮೇಶ್, ವಿ.ಲಕ್ಷ್ಮಣ, ಎಚ್.ಹುಸೇನಿ, ಶಾಂತಕುಮಾರ್ ಸುಬ್ರಹ್ಮಣ್ಯ, ಶ್ರೀನಿವಾಸ, ಪ್ರಭು, ಅಲೇಶಿ, ರಾಜಾಬಕ್ಷಿ, ಶಫಿವುಲ್ಲಾ, ಎಂ.ವಲಿಬಾಷಾ, ನವಾಜ್ ಅಬ್ದುಲ್ ರೆಹಮಾನ್, ಗೋಪಾಲ್, ಕುಮಾರಸ್ವಾಮಿ ಇತರರಿದ್ದರು.