ಬೆಂಗಳೂರು: ಪಾಪದ ಹಣದಲ್ಲಿ ಚಿತ್ರರಂಗ ನಡೆಯುತ್ತಿದೆ ಎಂದಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಯನ್ನು ನಿರ್ಮಾಪಕ ಕೆ.ಮಂಜು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಸಂಬರಗಿ ನಿಮ್ಮ ಬಟ್ಟೆ ವೈಟ್ ಆ್ಯಂಡ್ ವೈಟ್. ಬಟ್ಟೆ ಒಳಗೆ ತುತೂ ಬಿದ್ದಿದೆ.. ಅದನ್ನು ನೋಡಿ’ ಎಂದು ಲೇವಡಿ ಮಾಡಿದ ಮಂಜು, ಸಂಬರಗಿ ಅವ್ರನ್ನ ವಿಚಾರಣೆ ಮಾಡಿದ್ರೆ ಡ್ರಗ್ಸ್ ಲಿಂಕ್ ಹೊರ ಬೀಳುತ್ತೆ ಎಂದು ತಿರುಗೇಟು ಕೊಟ್ಟರು. ‘ಪ್ರಶಾಂತ್ ಸಂಬರಗಿ ಜೊತೆ ನಾನೂ ಪೇಜ್ 3 ಪಾರ್ಟಿ ಮಾಡಿದ್ದೆ. ಸಂಬರಗಿ ನಟಿಯೊಬ್ಬರ ಜೊತೆ ತುಂಬಾ ಕ್ಲೋಸ್ ಇದ್ರು. ಆಗಾಗ್ಗೆ ಪೇಜ್ 3 ಪಾರ್ಟಿಗಳಿಗೆ ಅವರನ್ನು ಕರೆದುಕೊಂಡು ಬರ್ತಿದ್ರು. ಆ ನಟಿ ಯಾರೆಂದು ನಾನು ಹೇಳಲ್ಲ. ಅದು ಆ ಹೆಣ್ಣುಮಗುವಿಗೆ ಮಾಡುವ ಅನ್ಯಾಯ. ಈ ಬಗ್ಗೆ ಸಂಬರಗಿ ಪತ್ನಿಯೇ ವಿಚಾರಿಸಿಕೊಳ್ಳಲಿ’ ಎಂದು ಮತ್ತೊಂದು ಕಿಡಿಹೊತ್ತಿಸಿದರು.
ಇದನ್ನೂ ಓದಿರಿ ರಾಹುಲ್ ಒಳ್ಳೆಯ ಸ್ನೇಹಿತ ಅಂದ್ರು ನಿರ್ಮಾಪಕ ಕೆ.ಮಂಜು
‘ಸಮಾಜ ಕ್ಲೀನ್ ಮಾಡ್ತೀನಿ ಅಂದ್ರಲ್ಲ ಸಂಬರಗಿ ಅವರೇ, ಇಷ್ಟು ದಿವಸ ಏನ್ ಮಾಡ್ತಿದ್ರಿ? ನೀವು ಯಾವ ಹೋರಾಟಗಾರ? ಡಬ್ಬಿಂಗ್ ವಿಚಾರದಲ್ಲಿ ರೋಲ್ ಕಾಲ್
ಮಾಡಿದ್ರಾ?’ ಎಂದು ತರಾಟೆಗೆ ತೆಗೆದುಕೊಂಡ ಮಂಜು, ‘ಚಿತ್ರರಂಗ ಬೆವರಿನ ಹನಿಯಿಂದ ನಡೆಯುತ್ತಿದೆ. ಸಂಬರಗಿಯ ದೇಶ ದ್ರೋಹದ ಹಣದಿಂದ ನಡೆಯುತ್ತಿಲ್ಲ. ನಿಮ್ಮ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಕ್ರಮ ಕೈಗೊಳ್ಳಲಿದೆ’ ಎಂದು ಎಚ್ಚರಿಸಿದರು.
‘ಪ್ರಶಾಂತ್ ಸಂಬರಗಿಯೊಬ್ಬ ದೊಡ್ಡ ಅವಿವೇಕಿ, ಬುದ್ಧಿವಂತ ಕ್ರಿಮಿನಲ್’ ಎಂದು ಆರೋಪಿಸಿದ ಕೆ.ಮಂಜು, ‘ಚಿತ್ರರಂಗ ಪವಿತ್ರ ದೇವಸ್ಥಾನ ಇದ್ದಂತೆ. ಸ್ವಂತ ಹಣದಿಂದ ಸಿನಿಮಾ ಮಾಡ್ತಿದ್ದೀವಿ. ನಿಮ್ಮ ಬುಡಬುಡಕೆ ಆಟವನ್ನ ಚಿತ್ರರಂಗದ ಮೇಲ್ಯಾಕೆ ಮಾಡೋಕೆ ಬರ್ತೀರಿ? ಫೋಟೋ ರಿಲೀಸ್ ಮಾಡಿದ ಕೂಡಲೇ ಅದರಲ್ಲಿರೋರು ತಪ್ಪಿತಸ್ಥರು ಎಂದಲ್ಲ. ಸತ್ಯಕ್ಕೆ ಸಾವಿಲ್ಲ. ಕಾನೂನಿದೆ ಎನ್ನುವ ಮೂಲಕ ಆರೋಪಿಗಳೆಲ್ಲ ಅಪರಾಧಿಗಳಲ್ಲ. ಕೋರ್ಟಿನಲ್ಲಿ ಸಾಬೀತಾಗಬೇಕು ಎಂದರು.
‘ಸಂಬರಗಿಗೆ ಬೇರೆ ಬೇರೆ ವ್ಯವಹಾರ ಇದೆ. ಆತ ಅಶೋಕ ಹೋಟೆಲ್ನಲ್ಲಿ ಒಂದೂವರೆ ವರ್ಷದಿಂದ ಏನ್ ಮಾಡ್ತಿದ್ದ? ಚಿತ್ರರಂಗದವರ ಮೇಲೆ ಬೆರಳು ಮಾಡಿ ತೋರಿಸಿದಾಗ ನೋವು ಆಗುತ್ತೆ. ಇಂದ್ರಜಿತ್ ಲಂಕೇಶ್ ಕೂಡ ಪೇಜ್ 3 ಪಾರ್ಟಿ ಮಾಡಿದ್ದಾರೆ. ಪ್ರಶಾಂತ್ ಸಂಬರಗಿ ಕೂಡ ಪಾರ್ಟಿ ಮಾಡ್ತಾರೆ’ ಎಂದರು. (ದಿಗ್ವಿಜಯ ನ್ಯೂಸ್)