ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನವ ಯುವಕರಲ್ಲಿ ದಿಢೀರನೇ ಹೃದಯಾಘಾತವಾಗುತ್ತಿರುವುದು ಹೆಚ್ಚಿದೆ. ಈ ಹಾರ್ಟ್ ಅಟ್ಯಾಕ್ನಿಂದಾಗಿ ಕನ್ನಡ ಚಿತ್ರರಂಗದ ಅನೇಕ ನಟರು ಇಹಲೋಕ ತ್ಯಜಿಸಿದ್ದಾರೆ. ಹೃದಯಾಘಾತ ಬಿಟ್ಟು ಖಿನ್ನತೆ, ಇತರ ಅಂಗಾಂಗಗಳ ಸಮಸ್ಯೆ, ಅನಾರೋಗ್ಯಗಳ ಕಾರಣ ಸಾವಿಗೀಡಾದವರೂ ಇದ್ದಾರೆ. ಇದೀಗ ಆ ಸಾಲಿಗೆ ದೊಡ್ಮನೆ ಸೊಸೆ ಸ್ಪಂದನಾ ಕೂಡ ಸೇರಿದ್ದಾರೆ ಎನ್ನುವುದು ನಿಜಕ್ಕೂ ಖೇದಕರ.
ಈಗಾಗಲೇ ಸ್ಯಾಂಡಲ್ವುಡ್, ಚಿರಂಜೀವಿ ಸರ್ಜಾ, ಜನರ ಪ್ರೀತಿಯ ಅಪ್ಪು ಅಥವಾ ಪುನೀತ್ ರಾಜ್ಕುಮಾರ್, ಸಂಚಾರಿ ವಿಜಯ್, ಹಾಸ್ಯ ನಟ ಬುಲೆಟ್ ಪ್ರಕಾಶ್, ಸ್ಪಂದನಾ ವಿಜಯರಾಘವೇಂದ್ರ ಮುಂತಾದವರು ಸಾವಿಗೀಡಾಗಿದ್ದಾರೆ.
ಹೃದಯಾಘಾತ ಬಲಿ ತೆಗೆದುಕೊಂಡ ಸ್ಯಾಂಡಲ್ವುಡ್ ತಾರೆಗಳು ಯಾರ್ಯಾರು?
ಅಪ್ಪು, ಪುನೀತ್ ರಾಜಕುಮಾರ್
ಸ್ಪಂದನಾ ವಿಜಯರಾಘವೇಂದ್ರ ಅವರ ಸಾವಿನ ಜತೆಗೆ ನೆನಪಾಗುವುದು ಪುನೀತ್ ರಾಜ್ಕುಮಾರ್ ದುರ್ಮರಣ. ಏಕೆಂದರೆ ಇಬ್ಬರೂ ದೊಡ್ಮನೆಯವರು.
ಅಪ್ಪು ನಮ್ಮೆಲ್ಲರನ್ನು ತೊರೆದು ಸುಮಾರು ಎರಡು ವರ್ಷಗಳೇ ಕಳೆಯುತ್ತಾ ಬಂದರೂ ಅವರ ನೆನಪು ಮಾತ್ರ ಸದಾ ಕಾಡುತ್ತಲೇ ಇರುತ್ತದೆ. ಅವರು, 2021ರ ಅಕ್ಟೋಬರ್ 29ರಂದು ಮೃತಪಟ್ಟಿದ್ದು ಇಡೀ ರಾಜ್ಯಕ್ಕೇ ಕರಾಳ ದಿನವಾಗಿತ್ತು. ಅಂದು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ೊಮ್ಮೆಲೆ ಎದೆ ನೋವು ಕಾಣಿಸಿಕೊಂಡಿದ್ದರು ಆಸ್ಪತ್ರೆಗೆ ಧಾವಿಸಿದರೂ ವೈದ್ಯರಿಂದ ಕನ್ನಡದ ಕಂದಮ್ಮನನ್ನು ರಕ್ಷಿಸಲು ಸಾಧ್ಯ ಆಗಿರಲಿಲ್ಲ. ಅವರು ಕನ್ನಡಿಗರನ್ನು ಅಗಲಿದಾಗ ಅವರ ವಯಸ್ಸು ಕೇವಲ 46. ಅಂದು ಇನ್ನೂ ಬಾಳಿ ಬದುಕಬೇಕಾಗಿದ್ದ ಜೀವ ಕೊನೆಗೊಂಡಿತ್ತು. ಅವರ ಅಂತಿಮದರ್ಶನಕ್ಕೆ ಸೇರಿದ ಜನಸಂದಣಿಯೇ ಒಂದು ದಾಖಲೆಯಾಗಿ ಹೋಗಿದೆ. ಅವರು ಬಾರದ ಲೋಕಕ್ಕೆ ತೆರಳುವಾಗ ಸಾಲು ಸಾಲು ಸಿನಿಮಾಗಳ ಕೆಲಸ ಕೈಯಲ್ಲಿ ಹಿಡಿದುಕೊಂಡೇ ಇದ್ದರು.
ಚಿರಂಜೀವಿ ಸರ್ಜಾ
ಇವರೂ ಹಾರ್ಟ್ ಅಟ್ಯಾಕ್ ಅಸುರನ ಕೆಂಗಣ್ಣಿಗೆ ಗುರಿಯಾಗಿ ಮೃತಪಟ್ಟವರು. ವಾಯುಪುತ್ರ ಸಿನಿಮಾ ಮೂಲಕ ಚಿತ್ರಲೋಕಕ್ಕೆ ಕಾಲಿಟ್ಟ ಚಿರು, 2018ರಲ್ಲಿ ತಮ್ಮ ಬಹುಕಾಲದ ಗೆಳತಿ ಮೇಘನಾ ರಾಜ್ರನ್ನು ಮದುವೆಯಾಗಿದ್ದರು. 2020ರಲ್ಲಿ ಗರ್ಭಿಣಿಯಾಗಿದ್ದ ಮೇಘನಾ ರಾಜ್ ತಮ್ಮ ಮೊದಲ ಮಗುವಿಗಾಗಿ ಕಾಯುತ್ತಿದ್ದರು. ಆದರೆ ವಿಧಿ ಲಿಖಿತ ಬೇರೆಯದೇ ಇತ್ತು. ಮಗು ಗರ್ಭದಲ್ಲಿದ್ದಾಗಲೇ, ಜೂನ್ 7 2020ರಲ್ಲಿ ಚಿರಂಜೀವಿ ಸರ್ಜಾ ತೀವ್ರ ಹೃದಯಸ್ತಂಭನದಿಂದಾಗಿ ಮೃತಪಟ್ಟಿದ್ದರು. ಅವರು ಮೃತಪಟ್ಟಾಗ ಅವರಿಗೆ ಕೇಲವ 39 ವರ್ಷ…
ನಾನಾ ರೀತಿಯ ಅನಾರೋಗ್ಯದಿಂದ, ಅಪಘಾತಗಳಿಂದ ಮೃತಪಟ್ಟವರು…
ಬುಲೆಟ್ ಪ್ರಕಾಶ್
ಕನ್ನಡ ಸಿನಿಮಾರಂಗದಲ್ಲಿ ಹಾಸ್ಯನಟನಾಗಿ ಹಾಗೂ ಪೋಷಕ ನಟನಾಗಿ ಮನೆ ಮನೆ ಮಾತಾಗಿದ್ದ ಬುಲೆಟ್ ಪ್ರಕಾಶ್ ಚಿರು ನಮ್ಮನ್ನು ಅಗಲುವ ಒಂದು ತಿಂಗಳ ಹಿಂದಷ್ಟೇ ಮೃತಪಟ್ಟವರು. ಅವರು, ಏ.6 2020ರಂದು ಕನ್ನಡ ಸಿನಿಮಾ ಪ್ರಪಂಚಕ್ಕೆ ವಿದಾಯ ಹೇಳಿದ್ದರು. 44ನೇ ವಯಸ್ಸಿನಲ್ಲಿ ನಿಧನರಾದ ಬುಲೆಟ್ ಪ್ರಕಾಶ್, ಕೊನೆಗಾಲದಲ್ಲಿ ಯಕೃತ್ತಿನ ತೊಂದರೆಯಿಂದ ಬಳಲುತ್ತಿದ್ದು ಆಸ್ಪತ್ರೆ ಸೇರಿದ್ದರು.
ಜಯಶ್ರೀ ರಾಮಯ್ಯ
ಬಿಗ್ಬಾಸ್ನ ಮಾಜಿ ಸ್ಪರ್ಧಿ ಹಾಗೂ ಕನ್ನಡ ನಟಿ ಜಯಶ್ರೀ ರಾಮಯ್ಯ, ಕೊನೆಗಾಲದಲ್ಲಿ ಖಿನ್ನತೆಯಿಂದ ಬಳಲುತ್ತಿದ್ದ ಕಾರಣ, ರಿಹ್ಯಾಬಿಲಿಟೇಶನ್ ಸೆಂಟರ್ ಸೇರಿದ್ದರು. ಅಲ್ಲಿ ಅವರು ಶವವಾಗಿ ಪತ್ತೆಯಾಗಿದ್ದರು. ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಜಯಶ್ರೀಗೆ ಸಾಯುವಾಗ ಕೇವಲ 30 ವಯಸ್ಸಾಗಿತ್ತು…
ಸಂಚಾರಿ ವಿಜಯ್
ನಾನು ಅವನಲ್ಲ ಅವಳು ಸಿನಿಮಾ ಮೂಲಕ ರಾಷ್ಟ್ರೀಯ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡು ಕನ್ನಡಿಗರ ಮನಸ್ಸನ್ನು ಗೆದ್ದಿದ್ದ ಸಂಚಾರಿ ವಿಜಯ್ ಸಾವು ಸ್ಯಾಂಡಲ್ವುಡ್ಅನ್ನು ಖಿನ್ನತೆಗೆ ದೂಡಿತ್ತು ಎಂದರೆ ತಪ್ಪಾಗಲಾರದು. ರಸ್ತೆ ಅಪಘಾತಕ್ಕೆ ಬಲಿಯಾಗಿದ್ದ ಅವರು ಅಂಗಾಂಗಗಳ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು.