ದಾವಣಗೆರೆ : ಸಮಾಜಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಸಂಯುಕ್ತ ಆಶ್ರಯದಲ್ಲಿ ಸಂತ ಸೇವಾಲಾಲ್ ಅವರ 281ನೇ ಜಯಂತ್ಯುತ್ಸವ ನ್ಯಾಮತಿ ತಾಲೂಕು ಸೂರಗೊಂಡನಕೊಪ್ಪದಲ್ಲಿ ಫೆ. 13ರಿಂದ 15ರ ವರೆಗೆ ನಡೆಯಲಿದೆ.
ಮಾಜಿ ಸಚಿವ ರುದ್ರಪ್ಪ ಎಂ. ಲಮಾಣಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಡಿನ ವಿವಿಧ ಭಾಗಗಳಿಂದ, ಹೊರ ರಾಜ್ಯಗಳಿಂದ ಸುಮಾರು 2 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಫೆ. 13ರಂದು ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣವನ್ನು ತಾವೇ ನೆರವೇರಿಸಲಿದ್ದು, ಮಾತಾ ಮರಿಯಮ್ಮ ದೇವಿಯಮ್ಮ ದೇವಿಯ ಕಾಟಿ ಆರೋಹಣವನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಪಿ. ರಾಜೀವ್ ನೆರವೇರಿಸುವರು. ಧಾರ್ಮಿಕ ವಿಧಿ ವಿಧಾನಗಳ ಪ್ರಾರಂಭೋತ್ಸವವನ್ನು ನಿಗಮದ ವ್ಯವಸ್ಥಾಪ ನಿರ್ದೇಶಕ ಶಿವಶಂಕರ ನಾಯ್ಕ ಮಾಡುವರು. ಮಧ್ಯಾಹ್ನ 12 ಗಂಟೆಗೆ ವಾಲಿಬಾಲ್ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಫೆ. 14ರಂದು ಬೆಳಗ್ಗೆ ಉಭಯ ದೇಗುಲಗಳಲ್ಲಿ ಮಾಲಾಧಾರಿಗಳ ದರ್ಶನ, ಗಂಗಾಪೂಜೆ, ಅಭಿಷೇಕ, ಅಲಂಕಾರ, ಮಹಾ ಮಂಗಳಾರತಿ, ಉತ್ಸವ ಮೂರ್ತಿಗಳ ಪಲ್ಲಕ್ಕಿ ಮೆರವಣಿಗೆ, ಇರುಮುಡಿಗಳ ಸಮರ್ಪಣ ಕಾರ್ಯ, ಮಾಲಾ ವಿಸರ್ಜನೆ ನಡೆಯಲಿವೆ. ಮಧ್ಯಾಹ್ನ 2 ಗಂಟೆಗೆ ಸಂತ ಸೇವಾಲಾಲ್ ಅವರ ಜಯಂತ್ಯುತ್ಸವವನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸುವರು. ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ, ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್, ಲಕ್ಷ್ಮಣ ಸವದಿ ಸೇರಿದಂತೆ ಅನೇಕ ಸಚಿವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾಗವಹಿಸುವರು. ಸಂಜೆ 6.30ಕ್ಕೆ ಸಾಧು ಸಂತರು ಮತ್ತು ಜನಪ್ರತಿನಿಧಿಗಳ ಚಿಂತನಾ ಸಭೆ ನಡೆಯಲಿದೆ. ಫೆ. 15ರಂದು ಬೆಳಗ್ಗೆ 9 ಕ್ಕೆ ಮಹಾಭೋಗ್ ನೆರವೇರಲಿದೆ.