ಮಂಗಳೂರು: ಕೊಡುಗೈ ದಾನಿಯೆಂದೇ ಹೆಸರಾಗಿರುವ ಕಾಸರಗೋಡಿನ ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ (85) ಶನಿವಾರ ನಿಧನರಾಗಿದ್ದಾರೆ.
ಇದುವರೆಗೆ 250ಕ್ಕೂ ಅಧಿಕ ಮನೆಗಳನ್ನು ಬಡವರಿಗೆ ನಿರ್ಮಿಸಿಕೊಟ್ಟಿರುವ ಅವರು ಹಲವು ಬಡ ಕುಟುಂಬಗಳಿಗೆ ಆಸರೆಯಾಗಿದ್ದರು. ಮಳೆಯಿಂದ ನಾಶವಾಗಿದ್ದ ಸೀತಾಂಗೋಳಿಯ ಅಬ್ಬಾಸ್ ಎಂಬವರಿಗೆ 1995ರಲ್ಲಿ ಮನೆ ನಿರ್ಮಿಸುವ ಮೂಲಕ ಈ ಸೇವೆಯನ್ನು ಆರಂಭಿಸಿ ನಂತರ ನಿರಂತರವಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ನೆರವಿಗೆ ಧಾವಿಸುತ್ತಿದ್ದರು.
ಶ್ರೀ ಸತ್ಯ ಸಾಯಿಬಾಬಾರ ಭಕ್ತರಾಗಿ ಕಿಳಿಂಗಾರಿನಲ್ಲಿ ಸಾಯಿ ಮಂದಿರ ಸ್ಥಾಪಿಸಿದ್ದ ಅವರು ನಿಸ್ವಾರ್ಥ ಸೇವೆ ಮೂಲಕ ಜನಾನುರಾಗಿಯಾಗಿದ್ದರು.