ಆಂಧ್ರಪ್ರದೇಶ: ಈಶ ಫೌಂಡೇಷನ್ ಸಂಸ್ಥಾಪಕ ಸದ್ಗುರು ಮಣ್ಣು ರಕ್ಷಣೆ ನಿಟ್ಟಿನಲ್ಲಿ ಜಾಗತಿಕವಾಗಿ ಅಭಿಯಾನ ಕೈಗೊಂಡಿದ್ದು, ಈಗಾಗಲೇ 26 ದೇಶಗಳನ್ನು ಸುತ್ತಿ ಬಂದಿರುವ ಅವರು ಇದೀಗ ಪಕ್ಕದ ಆಂಧ್ರಪ್ರದೇಶದಲ್ಲಿ ಮಣ್ಣು ರಕ್ಷಣೆ ಕುರಿತ ಜಾಗೃತಿ ಮೂಡಿಸಿದ್ದಾರೆ. ಏಕಾಂಗಿಯಾಗಿ ಬೈಕ್ನಲ್ಲಿ ಸಂಚರಿಸುತ್ತ ದೇಶ-ವಿದೇಶಗಳಲ್ಲಿ ಮಣ್ಣು ರಕ್ಷಣೆಯ ಅಭಿಯಾನ ಕೈಗೊಂಡಿರುವ ಸದ್ಗುರು, ಆಂಧ್ರಪ್ರದೇಶ ತಲುಪಿದ್ದು, ಅಲ್ಲಿನ ಸರ್ಕಾರ ಇಂದು ಈಶ ಔಟ್ರೀಚ್ನೊಂದಿಗೆ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ಮಣ್ಣು ಉಳಿಸಿ ಜಾಗತಿಕ ಅಭಿಯಾನಕ್ಕೆ ಕೈಜೋಡಿಸಿದೆ. ಈ ಮೂಲಕ ಅಭಿಯಾನಕ್ಕೆ ಅಧಿಕೃತವಾಗಿ ಸೇರಿದ ಏಳನೇ ಭಾರತೀಯ ರಾಜ್ಯ ಇದಾಗಿದೆ.
ಆಂಧ್ರಪ್ರದೇಶದ ಕೃಷಿ ಸಚಿವ ಕಾಕಣಿ ಗೋವರ್ಧನ್ ರೆಡ್ಡಿ ಮತ್ತು ಸದ್ಗುರು ಆಂಧ್ರಪ್ರದೇಶದ ಕರ್ನೂಲ್ನಲ್ಲಿ ನಡೆದ ಮಣ್ಣು ಉಳಿಸಿ ಕಾರ್ಯಕ್ರಮದಲ್ಲಿ ಸಹಿ ಮಾಡಿದ ಎಂಒಯುಗಳನ್ನು ವಿನಿಮಯ ಮಾಡಿಕೊಂಡರು. ಮಣ್ಣಿನ ಪ್ರಕಾರ, ಅಕ್ಷಾಂಶ ಸ್ಥಾನಗಳು ಮತ್ತು ನಿರ್ದಿಷ್ಟ ರಾಷ್ಟ್ರದ ಕೃಷಿ ಸಂಪ್ರದಾಯಗಳ ಆಧಾರದ ಮೇಲೆ ಸರ್ಕಾರಗಳು ಕಾರ್ಯರೂಪಕ್ಕೆ ತರಬಹುದಾದ ಪ್ರಾಯೋಗಿಕ, ವೈಜ್ಞಾನಿಕ ಪರಿಹಾರಗಳನ್ನು ನೀಡುವ ಮಣ್ಣಿನ ಕಾರ್ಯನೀತಿ ಕೈಪಿಡಿಯನ್ನು ಸಹ ಸಚಿವರಿಗೆ ಸದ್ಗುರು ನೀಡಿದರು.
ನಟ ಅಡಿವಿ ಶೇಷ್, ಆಂಧ್ರಪ್ರದೇಶ ಸರ್ಕಾರದ ವಿಶೇಷ ಮುಖ್ಯ ಕಾರ್ಯದರ್ಶಿ ವಿಜಯ್ ಕುಮಾರ್, ಸಂಸದ ಅಬ್ದುಲ್ ಹಫೀಜ್ ಖಾನ್, ತಾಡಿಕೊಂಡ ಶಾಸಕ ಡಾ. ವುಂಡವಳ್ಳಿ ಶ್ರೀದೇವಿ, ಮಂತ್ರಾಲಯ ಶಾಸಕ ವೈ.ಬಾಲನಾಗಿ ರೆಡ್ಡಿ, ಟಿಡಿಪಿ ನಾಯಕ ರಾಮ್ ಗೋಪಾಲ್ ರೆಡ್ಡಿ, ಕರ್ನೂಲ್ ಮೇಯರ್ ಬಿ.ವೈ. ರಾಮಯ್ಯ ಮತ್ತಿತರ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆಂಧ್ರಪ್ರದೇಶದ ಮುಖ್ಯಮಂತ್ರಿಯವರ ಪರವಾಗಿ ಸಂದೇಶವನ್ನು ರವಾನಿಸಿದ ಕೃಷಿ ಸಚಿವ ಕಾಕಣಿ ಗೋವರ್ಧನ ರೆಡ್ಡಿ, ಆಂಧ್ರಪ್ರದೇಶ ಸರ್ಕಾರವು ಎಲ್ಲಾ ರೀತಿಯಲ್ಲೂ ಅಭಿಯಾನಕ್ಕೆ ತನ್ನ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದರು. ಸದ್ಗುರು 27 ದೇಶಗಳಲ್ಲಿ ಏಕಾಂಗಿ ಪ್ರಯಾಣ ಮಾಡಿದ್ದು ನಂಬಲಾಗದ ಅದ್ಭುತ ಸಾಧನೆ ಎಂದು ಬಣ್ಣಿಸಿದ ಸಚಿವರು, ಅಭಿಯಾನವನ್ನು ಪ್ರಾರಂಭಿಸಿದ್ದಕ್ಕಾಗಿ ಸದ್ಗುರುಗೆ ಕೃತಜ್ಞತೆ ಸಲ್ಲಿಸಿದರು. ನಾವು ನಮ್ಮ ತಂದೆ-ತಾಯಿಗಳ ಆಸ್ತಿಗೆ ವಾರಸುದಾರನ ಸ್ಥಾನವನ್ನು ಪಡೆದುಕೊಳ್ಳುವ ರೀತಿಯಲ್ಲಿಯೇ, ನೈಸರ್ಗಿಕ ಸಂಪನ್ಮೂಲಗಳನ್ನೂ ಪ್ರತಿಯೊಬ್ಬರೂ ತಮಗೆ ಸಿಕ್ಕ ಪರಂಪರೆಯಂತೆ ಭಾವಿಸಬೇಕು ಎಂದು ಅಭಿಪ್ರಾಯಪಟ್ಟರು.
ರಾಜ್ಯದ ರೈತರು ಈಗ ಕೈಗೊಂಡಿರುವ ಸರ್ಕಾರದ ವಿವಿಧ ಸುಸ್ಥಿರ ಉಪಕ್ರಮಗಳನ್ನು ವಿವರಿಸಿದ ಸಚಿವರು, ಸದ್ಗುರು ಅವರ ಮಣ್ಣು ಉಳಿಸಿ ಸಂದೇಶವನ್ನು ಕೇವಲ ಕೇಳಿಸಿಕೊಳ್ಳದೇ, ಅದನ್ನು ಎಲ್ಲ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದೇಶವನ್ನು 60 ಲಕ್ಷಕ್ಕೂ ಹೆಚ್ಚು ರೈತರಿಗೆ ತಲುಪಿಸಲಾಗುತ್ತದೆ ಮತ್ತು ಇದು ಉಳಿದ ರೈತರನ್ನೂ ಈ ಪರಿವರ್ತನೆಗೆ ಸೇರಲು ಪ್ರೇರೇಪಿಸುತ್ತದೆ ಎಂದೂ ಹೇಳಿದರು.
ಆಂಧ್ರಪ್ರದೇಶ ಸರ್ಕಾರದ ವಿಶೇಷ ಮುಖ್ಯ ಕಾರ್ಯದರ್ಶಿ ವಿಜಯ್ ಕುಮಾರ್, ಜನರು ಕೇವಲ ‘ಅಪಾಯವಿದೆ’ ಎಂದು ಹೇಳುತ್ತಿರುತ್ತಾರೆ. ಆದರೆ ಪರಿಹಾರವನ್ನು ತೋರಿಸುವವರು ಬಹಳ ಕಡಿಮೆ. ಇದಕ್ಕಾಗಿ ನಾನು ಸದ್ಗುರು ಅವರಿಗೆ ನನ್ನ ವಿಶೇಷ ಧನ್ಯವಾದಗಳನ್ನು ತಿಳಿಸುತ್ತೇನೆ. ಅವರು ಪರಿಹಾರದ ಬಗ್ಗೆ ನಮಗೆ ಭರವಸೆ ನೀಡಿದ್ದಾರೆ, ವಿಶೇಷವಾಗಿ ಯುವಕರು ಮತ್ತು ವಿದ್ಯಾರ್ಥಿಗಳಿಗೆ. ಏಕೆಂದರೆ ಇದು ಅವರ ಭವಿಷ್ಯದ ಕುರಿತಾಗಿದೆ ಎಂದರು.
ನಟ ಅಡಿವಿ ಶೇಷ್ ಅವರೊಂದಿಗಿನ ಸಂವಾದದಲ್ಲಿ, ಸದ್ಗುರು ಅಭಿಯಾನದ ಪ್ರಗತಿಯ ಬಗ್ಗೆ ಹಂಚಿಕೊಳ್ಳುತ್ತ, ಇಡೀ ಪ್ರಪಂಚವೇ ಮಣ್ಣಿನ ಬಗ್ಗೆ ಮಾತನಾಡಬೇಕು. ಮಣ್ಣು ಪ್ರಪಂಚದ ಜನರ ಸಂಭಾಷಣೆಯಾಗಬೇಕು. ಕಳೆದ 90 ದಿನಗಳಲ್ಲಿ ಸುಮಾರು 300 ಕೋಟಿ ಜನರು ಮಣ್ಣಿನ ಬಗ್ಗೆ ಮಾತನಾಡಿದ್ದಾರೆ ಎಂದು ವಿವರಿಸಿದರು. ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿನ ಸರ್ಕಾರಗಳು ಅದ್ಭುತ ಕೆಲಸಗಳನ್ನು ಮಾಡಲು ಚುನಾಯಿತವಾಗಿಲ್ಲ, ಆದರೆ ಜನಾದೇಶವನ್ನು ಪೂರೈಸಲು ಆಯ್ಕೆ ಮಾಡಲಾಗುತ್ತದೆ. ಜನಾದೇಶವೆಂದರೆ ಏನು? ಇದೇ ಜನಾದೇಶ. ಆ ಜನಾದೇಶವನ್ನು ಪಡೆಯಲು ಇರುವುದೇ ‘ಮಣ್ಣು ಉಳಿಸಿ’ ಅಭಿಯಾನ ಎಂದು ಸದ್ಗುರು ಹೇಳಿದರು.
ವಿಶ್ವ ಆರ್ಥಿಕ ವೇದಿಕೆ, ದಾವೋಸ್ನಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರೊಂದಿಗಿನ ಸಂವಾದ ಮತ್ತು ಅಭಿಯಾನಕ್ಕೆ ಅವರ ಬೆಂಬಲದ ಕುರಿತು ಮಾತನಾಡಿದ ಸದ್ಗುರು, ಮಣ್ಣಿನ ಅವನತಿಯನ್ನು ನಿಭಾಯಿಸಲು ಕೈಗೊಂಡ ಸರ್ಕಾರದ ಸಕಾರಾತ್ಮಕ ಕ್ರಮಗಳನ್ನು ಶ್ಲಾಘಿಸಿದರು ಮತ್ತು ಅದನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲು ಸರ್ಕಾರದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಹೇಳಿದರು.
ಈ ಅಭಿಯಾನಕ್ಕೆ ಸಹಾಯ ಮಾಡಲು ಜನರು ಏನು ಮಾಡಬಹುದು, ವಿಶೇಷವಾಗಿ ಕೃಷಿಯೇತರ ಹಿನ್ನೆಲೆಯಿಂದ ಬಂದವರು ಈ ಅಭಿಯಾನಕ್ಕೆ ಹೇಗೆ ಬೆಂಬಲ ನೀಡಬಹುದು ಎಂಬ ನಟರ ಪ್ರಶ್ನೆಗೆ ಉತ್ತರಿಸಿದ ಸದ್ಗುರು, “ನಿಮ್ಮ ಧ್ವನಿಯನ್ನು ಏರಿಸಿ! ನಿಮ್ಮ ಧ್ವನಿಯನ್ನು ಹೆಚ್ಚಿಸಿ! ಮತ್ತು ನಿಮ್ಮ ಧ್ವನಿಯನ್ನು ಮುಂದುವರೆಸಿ!” ಎಂದು ಆಗ್ರಹಪಡಿಸಿದರು. ಮಣ್ಣನ್ನು ಉಳಿಸಲು ತುರ್ತು ಕಾರ್ಯನೀತಿಗಳ ಅನುಷ್ಠಾನಕ್ಕಾಗಿ ಜನರು ತಮ್ಮ ಧ್ವನಿಯನ್ನು ಕೊಡುವ ಅಗತ್ಯವನ್ನು ಒತ್ತಿಹೇಳಿದರು.
ಸದ್ಗುರುಗಳು ಈಗ ತಮ್ಮ ಒಬ್ಬಂಟಿ ಬೈಕ್ ಪ್ರಯಾಣದಲ್ಲಿ 26,000 ಕಿ.ಮೀ. ಗಿಂತಲೂ ಹೆಚ್ಚು ದೂರವನ್ನು ಪೂರೈಸಿದ್ದಾರೆ ಮತ್ತು ಬೆಂಗಳೂರು ಮತ್ತು ಮೈಸೂರಿಗೆ ತೆರಳಲಿದ್ದಾರೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಅವರ 100 ದಿನಗಳ ಪಯಣವನ್ನು ಮುಕ್ತಾಯಗೊಳಿಸಲಿದ್ದಾರೆ.
ನವದೆಹಲಿಯಲ್ಲಿ ನಡೆದ ಮಣ್ಣು ಉಳಿಸಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸದ್ಗುರು ಜತೆ ಸೇರಿ ಈ ಅಭಿಯಾನದ ಮೌಲ್ಯ ಮತ್ತು ತುರ್ತು ಅಗತ್ಯವನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ವ್ಯಕ್ತಪಡಿಸಿದ್ದರು. ಸದ್ಗುರು ಭಾರತಕ್ಕೆ ಬಂದ ನಂತರ ಗುಜರಾತ್, ರಾಜಸ್ಥಾನ, ಉತ್ತರಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣ ಸರಕಾರಗಳು ಅಭಿಯಾನಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದು ಅಭಿಯಾನದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದ್ದಾರೆ.
ಮಾರ್ಚ್ 21, 2022ರಂದು ಯುರೋಪ್, ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯದಾದ್ಯಂತ ಒಬ್ಬಂಟಿ ಮೋಟಾರ್ ಬೈಕ್ ಪ್ರಯಾಣವನ್ನು ಪ್ರಾರಂಭಿಸಿದ ಸದ್ಗುರುಗಳು ಮೇ 29 ರಂದು ಗುಜರಾತ್ನ ಪಶ್ಚಿಮ ಭಾಗದ ಬಂದರು ನಗರ ಜಾಮ್ನಗರವನ್ನು ತಲುಪಿದರು. 9 ಭಾರತೀಯ ರಾಜ್ಯಗಳಲ್ಲಿ ತಮ್ಮ ಪ್ರಯಾಣವನ್ನು ಮುಂದುವರೆಸಿದ ಅವರು ಗುಜರಾತ್, ರಾಜಸ್ಥಾನ, ಹರಿಯಾಣ, ನವದೆಹಲಿ, ಉತ್ತರಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿದರು.
ಇಲ್ಲಿಯವರೆಗೆ ಅಭಿಯಾನವು ಕೋಟ್ಯಂತರ ಜನರನ್ನು ತಲುಪಿದ್ದು 74 ದೇಶಗಳು ತಮ್ಮ ದೇಶಗಳಲ್ಲಿ ಮಣ್ಣನ್ನು ಉಳಿಸಲು ಒಪ್ಪಿವೆ. ಸಾರ್ವಜನಿಕರ ಮನಸ್ಸಿನಲ್ಲಿ ಇಲ್ಲದ ಒಂದು ವಿಷಯಕ್ಕಾಗಿ, ಸದ್ಗುರು 27 ದೇಶಗಳ ಪ್ರಯಾಣದ ಪ್ರಾರಂಭದಿಂದ ಇಲ್ಲಿಯವರೆಗೆ 300 ಕೋಟಿ ಜನರು ಮಣ್ಣಿನ ಬಗ್ಗೆ ಮಾತನಾಡಿದ್ದಾರೆ. ಭಾರತದಲ್ಲಿ ಸುಮಾರು 15 ಲಕ್ಷ ಮಕ್ಕಳು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ದೇಶದ ಮಣ್ಣನ್ನು ಉಳಿಸುವ ಮೂಲಕ ತಮ್ಮ ಭವಿಷ್ಯವನ್ನು ಉಳಿಸುವಂತೆ ಕೋರಿದ್ದಾರೆ.
ಕಾಶಿಯಾತ್ರೆಗೆ ತೆರಳಿದ್ದ ಕನ್ನಡಿಗರು ಅತಂತ್ರ; ರಾಜ್ಯ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಯಾತ್ರಾರ್ಥಿಗಳು..