More

    ಸದ್ಗುರು ಅಂಕಣ: ಅಮೃತಧಾರೆ: ಶೂನ್ಯತೆಯಷ್ಟೇ ಅಂಧಕಾರವನ್ನು ಓಡಿಸಬಲ್ಲದು…

    ಲೇಖಕರು: ಸದ್ಗುರು

    ಕೆಲ ಸಮಯದ ಹಿಂದೆ ಯಾರೋ ನನ್ನನ್ನು, ‘ಬ್ರಹ್ಮಚಾರಿಗಳು ಮಾತ್ರ ನಿಮ್ಮ ಶಿಷ್ಯಂದಿರೆ?’ ಎಂದು ಕೇಳಿದರು. ಹೌದು, ಅವರು ಮಾತ್ರ ನನ್ನ ಶಿಷ್ಯಂದಿರು. ಇಲ್ಲಿ ‘ಬ್ರಹ್ಮಚಾರಿಗಳು’ ಎಂದಾಗ, ಅಗತ್ಯವಾಗಿ ಅಧಿಕೃತ ದೀಕ್ಷೆಯನ್ನು ಪಡೆದ ಜನರು ಮಾತ್ರ ಎಂದೇನಲ್ಲ. ಅವರು ಬ್ರಹ್ಮಚಾರಿ ದೀಕ್ಷೆಯ ಔಪಚಾರಿಕ ಪ್ರಕ್ರಿಯೆಗೆ ಒಳಗಾಗಿದ್ದಾರೋ ಇಲ್ಲವೋ ಎನ್ನುವುದು ಇಲ್ಲಿ ಮುಖ್ಯವಲ್ಲ. ಯಾವುದೋ ಒಂದು ರೀತಿಯಲ್ಲಿ ಅವರು ಆಧ್ಯಾತ್ಮಿಕ ಪಥದಲ್ಲಿದ್ದಾರೆ ಎನ್ನುವುದೇ ಮುಖ್ಯ.

    ‘ಬ್ರಹ್ಮಚಾರಿಗಳು’ ಮಾತ್ರ ನನ್ನ ಶಿಷ್ಯಂದಿರು. ಅವರು ‘ಬ್ರಹ್ಮಚಾರಿ’ಗಳಲ್ಲದಿದ್ದರೆ, ಹೇಗಿದ್ದರೂ ನನ್ನ ಶಿಷ್ಯರಲ್ಲ. ಅವರ ಆಸಕ್ತಿ ಬೇರಿನ್ನೇನೋ ಆಗಿದ್ದರೆ, ಶಿಷ್ಯರಾಗುವ ಪ್ರಶ್ನೆ ಎಲ್ಲಿದೆ? ಅವರು ಯಾರ ಶಿಷ್ಯಂದಿರಾಗಲೂ ಸಾಧ್ಯವಿಲ್ಲ. ಶಿಷ್ಯನಾಗಿರುವುದು ಯಾರೊಬ್ಬರ ಬಗ್ಗೆಯೂ ಆಗಿರುವುದಿಲ್ಲ. ನೀವು ಆ ವ್ಯಕ್ತಿ ಅಥವಾ ಈ ವ್ಯಕ್ತಿಯ ಶಿಷ್ಯನಲ್ಲ. ನೀವೊಬ್ಬ ಶಿಷ್ಯನಾಗಿದ್ದರೆ, ಶಿಷ್ಯ, ಅಷ್ಟೆ. ನೀವೊಬ್ಬ ಭಕ್ತನಾಗಿದ್ದರೆ, ಭಕ್ತ, ಅಷ್ಟೆ. ನೀವು ಈ ದೇವರ ಅಥವಾ ಆ ದೇವರ ಭಕ್ತನಾಗಿರುವ ಪ್ರಶ್ನೆಯೇ ಬರುವುದಿಲ್ಲ. ಅದು ಕೇವಲ ಮುಟ್ಠಾಳತನ. ನೀವೊಬ್ಬ ಭಕ್ತ ಅಷ್ಟೆ. ಅದೊಂದು ಗುಣವೈಶಿಷ್ಟ್ಯ.

    ಅಂಧಕಾರವಾಗಿಬಿಡುವುದು: ನನ್ನ ಮೇಲೆ ದೃಷ್ಟಿ ಹರಿಸಿಯೂ, ನನ್ನನ್ನು ತಮ್ಮ ಗುರುವನ್ನಾಗಿ ಸ್ವೀಕರಿಸದೇ ಇರುವಂತಹ ಬಹಳಷ್ಟು ಜನರಿದ್ದಾರೆ. ಅವರು ಮತ್ತೊಂದು ಸಲ ಈ ಭೂಮಿಯ ಮೇಲೆ ಹುಟ್ಟಿಬರಬಹುದು. ನಾನಿಲ್ಲಿರದೇ ಹೋಗಬಹುದು, ಆದರೆ ಅವರಿಲ್ಲೇ ಅಲೆದಾಡುತ್ತಿರುತ್ತಾರೆ, ಏಕೆಂದರೆ ಅವರು ಕೇವಲ ಗುರುವಿನ ವಾಸನೆಯನ್ನು ಹಿಡಿದಿದ್ದಾರಷ್ಟೆ, ಈಗವರಿಗೆ ಅದರ ರುಚಿಯನ್ನು ನೋಡಬೇಕಿದೆ. ‘ಗುರು’ ಎಂದಾಗ, ‘ಗು’ ಎಂದರೆ ಕತ್ತಲು, ‘ರು’ ಎಂದರೆ ದೂರವಾಗಿಸುವವನು. ನಿಮಗೆ ಒಬ್ಬ ಗುರುವಿದ್ದಾನೆ ಎಂದು ನೀವು ಹೇಳಿದಾಗ, ನಿಮ್ಮ ಅಂಧಕಾರ ದೂರವಾಗುತ್ತದೆ. ಹಾಗಿದ್ದಾಗ ನೀವು ಮತ್ತೊಮ್ಮೆ ಈ ಭೂಮಿಯಲ್ಲಿ ಏಕೆ ಬರುತ್ತೀರಿ? ನಿಮ್ಮ ಕತ್ತಲು ಕಳೆದಿದ್ದು ನೀವು ಬೆಳಕಿನ ಕಡೆಗೆ ಬಂದಿರಿ ಎಂಬ ಕಾರಣಕ್ಕಲ್ಲ. ಅದು ಕಳೆದಿದ್ದು ನೀವು ಶೂನ್ಯವಾಗಿ ಹೋದಿರಿ ಎಂಬ ಕಾರಣಕ್ಕೆ. ನೀವು ಅಂಧಕಾರದೊಂದಿಗೆ ಬೆರೆತು ಹೋದಿರಿ, ಆದ್ದರಿಂದ ಏನನ್ನೂ ಓಡಿಸುವ ಅವಶ್ಯಕತೆಯೇ ಇಲ್ಲ. ಕತ್ತಲೆಯಿಂದ ದೂರ ಉಳಿದರೆ, ಅದು ಒಂದು ಭಯಾನಕವಾದ ವಿಷಯವಾಗಿರುತ್ತದೆ. ಆದರೆ ನೀವು ಕತ್ತಲೇ ಆಗಿಹೋದರೆ, ಅದರೊಂದಿಗೆ ಬೆರೆತು ಹೋದರೆ, ಅಂಧಕಾರವೆನ್ನುವುದು ಒಂದು ಪರಿಮಿತಿಯೇ ಇಲ್ಲದಿರುವಂತಹ ಸ್ಥಿತಿ.

    ಇಲ್ಲಿ ಒಂದು ಚಿಕ್ಕ ಮಿತಿಯೊಳಗೆ ಬದುಕುತ್ತಿರುವ ಕಾರಣ, ಕತ್ತಲೆಯೆನ್ನುವುದು ನಿಮಗೆ ಭಯಂಕರವಾದ ವಿಷಯ. ನೀವು ಅಂಧಕಾರದ ಜೊತೆ ಬೆರೆತು ಹೋದರೆ, ಅಪರಿಮಿತವಾದ ಸ್ಥಿತಿಗೆ ತಲುಪುತ್ತೀರಿ. ‘ನೀವು ಅಪರಿಮಿತವಾಗಲಿ’ ಎಂದು ನಾನು ಹರಸಿದರೆ ನಿಮಗೆ ಸಂತೋಷವಾಗುತ್ತದೆ. ಅದೇ ‘ನೀವು ಅಂಧಕಾರವಾಗಲಿ’ ಎಂದು ಹರಸಿದರೆ, ನಿಮಗೆ ಅದೊಂದು ಶಾಪವೆಂದು ಅನ್ನಿಸುತ್ತದೆ, ಅಲ್ಲವೆ? ಆದರೆ ಅದು ಹಾಗಲ್ಲ. ಅಂಧಕಾರಕ್ಕೆ ಮಿತಿಯಿಲ್ಲ, ಮಿತಿಯಿಲ್ಲದಿರುವುದೇ ಅಂಧಕಾರ.

    ‘ಕತ್ತಲೆಯನ್ನು ದೂರಾಗಿಸುವವನು’ ಎಂದಾಗ ಅವನು ನಿಮ್ಮೊಳಗೊಂದು ಲೈಟ್ ಬಲ್ಬ್ ಅನ್ನು ಅಳವಡಿಸುತ್ತಾನೆ ಎಂದರ್ಥವಲ್ಲ. ವಿದ್ವಾಂಸರು ಮತ್ತು ಶಿಕ್ಷಕರು ನೀವು ಏನನ್ನಾದರೂ ನೋಡಲಿ ಎಂಬ ಕಾರಣಕ್ಕೆ ನಿಮ್ಮಲ್ಲಿ ಒಂದು ಲೈಟ್ ಬಲ್ಬ್ ಅನ್ನು ಹಾಕಲು ಪ್ರಯತ್ನಿಸಿದರು. ಆದರೆ ಒಬ್ಬ ಗುರುವು ಹೀಗೆ ಮಾಡಲು ಪ್ರಯತ್ನಿಸುವುದಿಲ್ಲ. ನಿಮ್ಮನ್ನು ನಿರ್ನಾಮ ಮಾಡುವುದು ಹೇಗೆಂದು ಅವನು ನೋಡುತ್ತಿರುತ್ತಾನೆ. ಗುರುವನ್ನು ಕಂಡುಕೊಂಡಾಗ ನಿಮ್ಮ ಕತ್ತಲೆಯು ದೂರಾಗುವುದೇಕೆಂದರೆ, ನೀವು ಆ ಕತ್ತಲೆಯ ಒಂದು ಭಾಗವೇ ಆಗಿಹೋಗುತ್ತೀರ. ನಿಮಗೆ ಅಂಧಕಾರವೆನ್ನುವುದಿರುವುದಿಲ್ಲ; ನಿಮಗೇನಿದ್ದರೂ ಅಪರಿಮಿತವಾದ ಅಸ್ತಿತ್ವವಿರುತ್ತದೆ ಅಷ್ಟೆ.

    ಕೊನೆಯ ತನಕ ಹುಡುಕುತ್ತಲೇ ಉಳಿಯಬೇಡಿ: ನಿಮ್ಮ ಗುರುವನ್ನು ಭೇಟಿಯಾಗಿದ್ದೇ ಆದರೆ, ನೀವು ಮತ್ತೊಮ್ಮೆ ಇಲ್ಲಿ ಹುಟ್ಟಿ ಬರುವ ಪ್ರಶ್ನೆಯೇ ಇಲ್ಲ. ಆದರೆ ನಿಜವಾಗಿ ಅವರನ್ನು ನಿಮ್ಮ ಗುರುವಾಗಿ ಸ್ವೀಕರಿಸದೇ, ಅವರೊಳಗೆ ಬೆರೆತು ಹೋಗುವ ಧೈರ್ಯ ಮಾಡದೇ, ಸುಮ್ಮನೆ ಅವರ ಕಡೆಗೆ ಆಕರ್ಷಿತರಾಗಿದ್ದರೆ, ಅದು ಬೇರೆಯೇ ವಿಷಯ. ಗುಲಾಬಿ ಹೂವಿನ ಪರಿಮಳ ಇಷ್ಟವಾದಾಗ, ಗುಲಾಬಿ ಹೂ ಎಲ್ಲಿರುತ್ತದೆಯೋ ನೀವಲ್ಲಿಗೆ ಹೋಗುತ್ತೀರಿ. ಆದರೆ ಕೊನೆವರೆಗೆ ಅದರ ಸುವಾಸನೆಯನ್ನಷ್ಟೇ ಆಘ್ರಾಣಿಸುತ್ತ ಉಳಿಯಬೇಡಿ. ಗುರುವಿನೊಳಕ್ಕೆ ಇಳಿದು ಅವನೊಟ್ಟಿಗೆ ದಹಿಸುವ ಸಮಯ ಬಂದಿದೆ. ನೀವು ಹಾಗೆ ಮಾಡದಿದ್ದಲ್ಲಿ, ಗುರುವಿನ ನಿಜವಾದ ಉದ್ದೇಶಕ್ಕಾಗಿ ನೀವು ಅವರನ್ನು ಬಳಸಿಕೊಳ್ಳುತ್ತಿಲ್ಲ ಎಂದರ್ಥ.

    ನಿಮ್ಮ ಬಳಿ ಹಾರಾಡುವ ಸಾಮರ್ಥ್ಯವಿರುವ ಒಂದು ವಿಮಾನವಿದೆ ಅಂತಿಟ್ಟುಕೊಳ್ಳಿ. ಅದನ್ನು ನೀವು ಬಸ್ಸಿನ ಹಾಗೆ ಓಡಿಸಲು ನಿಶ್ಚಯಿಸಿದ್ದರೆ ಅದು ತಪ್ಪೇ? ಅದು ತಪ್ಪೆಂದು ನಾನು ಹೇಳುವುದಿಲ್ಲ, ಆದರೆ ಹಾಗೆಮಾಡಿದಲ್ಲಿ ಅದು ವಿಮಾನವನ್ನು ಉಪಯೋಗಿಸುವ ಅತ್ಯಂತ ಕೆಟ್ಟದಾದ ರೀತಿ. ಒಂದು ವಿಮಾನವನ್ನು ಕಾರಿನಂತೆ ಓಡಿಸುವುದು ಸಹಿಸಲಾಗದ ಹಾಗೂ ದಡ್ಡತನದ ವಿಷಯವಲ್ಲದೆ ಇನ್ನೇನು? ಅಸಹನೀಯ ಮತ್ತು ಮೂರ್ಖರಾಗಿರುವುದು ತಪ್ಪೇ? ಇಲ್ಲ. ಹಾಗಿರುವುದು ಕೆಟ್ಟದಾಗಿರುತ್ತದೆಯೇ ಹೊರತು ತಪ್ಪಾಗಿರಬೇಕಾಗಿಲ್ಲ. ನಿಮ್ಮನ್ನು ಮಹತ್ತರವಾದ ಸಾಮರ್ಥ್ಯಕ್ಕೆ ಕೊಂಡೊಯ್ಯಬಹುದಾದ ಒಂದು ಸಾಧನವನ್ನು ಸಾಮಾನ್ಯ ರೀತಿಯಲ್ಲಿ ಬಳಸಿದರೆ, ಅದು ಕೇವಲ ಮುಟ್ಠಾಳತನವಷ್ಟೆ.

    ಗುರುವಿನೊಂದಿಗಿನ ಸಂಬಂಧವು ಚಿರಂತನವಾದುದ್ದಲ್ಲ. ಈ ಸಂಬಂಧವನ್ನು ನೀವು ಬೆಳೆಸಿದರೆ, ಬೇರೆಲ್ಲವೂ ಕೊನೆಯಾಗುತ್ತದೆ. ಬೇರೆಲ್ಲಾ ವಿಷಯಗಳು ಕೊನೆಯಾದಾಗ, ಏನೂ ಅಲ್ಲದಿರುವಂತಹ ಒಂದು ಆಯಾಮವು ತೆರೆದುಕೊಳ್ಳುತ್ತದೆ. ಈ ಜೀವವು ವಿಸ್ತರಣೆಗಾಗಿ ಬಯಸುತ್ತಿರುವಾಗ ಹಂಬಲಿಸುವ ಆಯಾಮವೇ ಅದು. ಅದೊಂದು ಸ್ವಾಭಾವಿಕ ಗುರಿ. ಆದರೆ ದಾರಿಯಲ್ಲಿ ಬಹಳಷ್ಟು ಪಲ್ಲಟಗಳಿವೆ ಅಷ್ಟೆ. ಮತ್ತು ಪ್ರತಿಯೊಂದು ಮಾರ್ಗ ಬದಲಾವಣೆಯನ್ನು ತೆಗೆದುಕೊಂಡಾಗಲೂ, ಅದೇ ಸರಿಯಾದ ಮಾರ್ಗವೆಂದು ಸಾಬೀತುಪಡಿಸುವ ಸಲುವಾಗಿ ಜನರು ತಮ್ಮದೇ ಆದ ವೇದಾಂತಗಳನ್ನು ಪ್ರತಿಪಾದಿಸಲು ಶುರುಮಾಡುತ್ತಾರೆ.

    ನೀವು ಕಾರಿನಲ್ಲಿ ಎಲ್ಲಿಗಾದರೂ ಹೋಗುತ್ತಿರಬೇಕಾದರೆ ಯಾವುದೋ ಕಾರಣಕ್ಕೆ ಎಂದಿನ ದಾರಿ ಮುಚ್ಚಿಹೋಗಿದ್ದು, ಬೇರೆ ಮಾರ್ಗದಲ್ಲಿ ಸಾಗಬೇಕಾಗಿ ಬಂದರೆ, ಕಾರಿನಲ್ಲಿರುವ ಪ್ರತಿಯೊಬ್ಬರೂ ಬೇರೆ ಬೇರೆ ಮಾರ್ಗಗಳನ್ನು ಸೂಚಿಸಿ, ತಾವು ಹೇಳಿದ್ದೇ ಸರಿ ಎಂದು ವಾದಿಸಲು ಶುರುವಿಟ್ಟುಕೊಳ್ಳುತ್ತಾರೆ ಎನ್ನುವುದನ್ನು ನೀವು ಗಮನಿಸಿದ್ದೀರ? ಒಂದೊಮ್ಮೆ ದಾರಿಯಲ್ಲಿ ಸ್ಪಷ್ಟವಾದ ಗುರುತು ಇಲ್ಲದಿದ್ದರೆ ಪ್ರತಿಯೊಬ್ಬರೂ ತಮ್ಮದೇ ಆದ ದಾರಿಯನ್ನು ಕಂಡುಕೊಳ್ಳಲು ಪ್ರಾರಂಭಿಸುತ್ತಾರೆ, ಮತ್ತು ಅದೊಂದೇ ಸರಿಯಾದ ದಾರಿ ಎಂದು ಪ್ರತಿಪಾದಿಸಲು ಶುರುಮಾಡುತ್ತಾರೆ. ಧೂಮಪಾನ ಮಾಡುವ ಒಬ್ಬ ವ್ಯಕ್ತಿ ಅದೇ ಜೀವನವೆಂದು ಹೇಳುತ್ತಾನೆ, ಒಬ್ಬ ಕುಡುಕ ಕುಡಿಯುವುದೇ ಜೀವನವೆಂದು ಹೇಳುತ್ತಾನೆ, ಇನ್ಯಾವುದೋ ವಿಲಾಸದಲ್ಲಿ ತೊಡಗಿರುವವನು ಅದೇ ಜೀವನವೆಂದು ಪ್ರತಿಪಾದಿಸುತ್ತಾನೆ. ಮಾದಕ ವಸ್ತುಗಳನ್ನು ತೆಗೆದುಕೊಳ್ಳುವವನು ಕೂಡ ಇದೇ ರೀತಿ ವಾದಿಸುತ್ತಾನೆ. ಅತಿಯಾಗಿ ತಿನ್ನುವವನು ತಿನ್ನುವುದೇ ಜೀವನವೆಂದು ಹೇಳುತ್ತಾನೆ. ಇವರೆಲ್ಲರೂ ‘ಇದೇ ಜೀವನ’ ಎಂದು ಪಟ್ಟುಹಿಡಿದಿದ್ದಾರೆ. ಅದರಿಂದಾಗಿ ನಿಮ್ಮ ದಿಕ್ಕು ತಪ್ಪುತ್ತಿರುತ್ತದೆ.

    ಜೀವನದಲ್ಲಿ ಏನನ್ನಾದರೂ ಹೆಚ್ಚೆಚ್ಚು ಮಾಡಿದರೆ, ಅದು ಉತ್ತಮವಾಗುತ್ತ ಹೋಗಬೇಕು. ಆದರೆ ಕೆಲ ವಿಷಯಗಳಲ್ಲಿ ಇದು ಆಗುವುದಿಲ್ಲ. ಹೆಚ್ಚಾಗಿ ತಿಂದರೆ, ಹೆಚ್ಚಾಗಿ ಕುಡಿದರೆ, ಜಾಸ್ತಿ ಧೂಮಪಾನ ಮಾಡಿದರೆ ಜೀವನ ಉತ್ತಮವಾಗುತ್ತದೆಯೇ? ಇಲ್ಲವಲ್ಲ. ಜನರು ಅವುಗಳನ್ನೆಲ್ಲಾ ಪ್ರಯತ್ನಿಸಿ ನೋಡಿದ್ದಾರೆ, ಆದರೆ ಅವ್ಯಾವುವೂ ಕೆಲಸ ಮಾಡಿಲ್ಲ. ಕೊನೆಯೇ ಇರದಂತೆ ಮಾಡಬಹುದಾದ ಒಂದೇ ಒಂದು ವಿಷಯವೆಂದರೆ ‘ಏನನ್ನೂ ಮಾಡದೇ ಇರುವುದು’. ಒಬ್ಬ ಗುರುವೆಂದರೆ ಶೂನ್ಯವಷ್ಟೆ. ಕೇವಲ ಶೂನ್ಯತೆಯಷ್ಟೇ ಅಂಧಕಾರವನ್ನು ಓಡಿಸಲು ಸಾಧ್ಯ. ಅದು ಶೂನ್ಯವಾಗಿರುವ ಕಾರಣ ಅಲ್ಲಿ ಏನೂ ನಡೆಯುವುದಿಲ್ಲ. ಏನೂ ನಡೆಯದಿರುವಂತಹ ಕಡೆ, ನೀವು ಬಯಸುವುದಾದರೆ, ಏನು ಬೇಕಾದರೂ ಮಾಡಬಹುದು.

    ಗುರುವು ಕೇವಲ ಒಂದು ಖಾಲಿ ರಂಗಮಂಚವಿದ್ದಂತೆ. ನೀವದರೊಳಗೆ ಪ್ರವೇಶಿಸಿದರೆ, ಆ ದಿನಕ್ಕೆ ಬೇಕಾದ ಯಾವುದೋ ಒಂದು ನಾಟಕವನ್ನು ಅವನು ರಚಿಸುತ್ತಾನೆ, ಆದರೆ ವಾಸ್ತವದಲ್ಲಿ, ಅವನೊಂದು ಖಾಲಿ ರಂಗಭೂಮಿಯಷ್ಟೆ. ನಾಲ್ಕು ಗೋಡೆಗಳು ಮಾತ್ರ, ಒಳಗೆಲ್ಲಾ ಖಾಲಿ. ಒಳಗೆ ಕಾಲಿಟ್ಟರೆ ನೀವೂ ಸಹ ಶೂನ್ಯವಾಗಿಬಿಡುತ್ತೀರಿ. ಬೇರೆ ಯಾವ ಮಾರ್ಗವೂ ಇಲ್ಲ. ನೀವು ಅವರತ್ತ ನೋಡಿದಿರಿ, ಅವರ ಮಾತುಗಳನ್ನು ಕೇಳಿಸಿಕೊಂಡಿರಿ ಎನ್ನುವುದು ಮುಖ್ಯವಲ್ಲ. ನೀವು ಅವರ ಅಂತರಂಗಕ್ಕಿಳಿಯಬೇಕು. ಆಗ ಮಾತ್ರ ಅವರು ನಿಮ್ಮ ಗುರುವೆಂದು ಅರ್ಥ. ಅಲ್ಲಿಯವರೆಗೆ ಅವರು ನಿಮ್ಮನ್ನು ಕೇವಲ ರಂಜಿಸುತ್ತಿರುತ್ತಾರಷ್ಟೆ, ಏಕೆಂದರೆ ಆ ದಿನಕ್ಕೆ ಸೂಕ್ತವಾದ ನಾಟಕದ ವ್ಯವಸ್ಥೆಯನ್ನವರು ಮಾಡುತ್ತಿರುತ್ತಾರೆ.

    ಒಮ್ಮೆ ನೀವು ಆ ಶೂನ್ಯದೊಳಕ್ಕೆ ಕಾಲಿಟ್ಟರೆ, ಮತ್ತೆ ಈ ಭೂಮಿಗೆ ಬರುವ ಸಾಧ್ಯತೆ ಇಲ್ಲ. ಆದರೆ ನೀವು ದೂರದಲ್ಲೆಲ್ಲೋ ನಿಂತು ಗುರುವಿನ ಕಡೆಗೆ ನೋಡುತ್ತಿದ್ದರೆ, ನಿಮಗೆ ಗುರುಗಳ ಚಟ ಹಿಡಿದಿರಬಹುದು, ಹಾಗಾಗಿ ನೀವವರನ್ನು ಹಿಂಬಾಲಿಸುತ್ತಿದ್ದೀರಿ ಎಂದರ್ಥ. ಆದರೆ ದೇಹ ಮತ್ತು ಮನಸ್ಸುಗಳಿಗಿಂತ ಆಳವಾದ ಪ್ರಕ್ರಿಯೆಯೊಂದು ನಿಮ್ಮಲ್ಲಿ ಆಗಿದ್ದೇ ಆದರೆ, ಮತ್ತೊಮ್ಮೆ ಇಲ್ಲಿಗೆ ಬರುವುದು ಅಸಾಧ್ಯವಾದ ವಿಷಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts