More

    ಮೋದಿ, ದೇವೇಗೌಡರ ಕುಟುಂಬವೇ ನೇರ ಹೊಣೆ; ಡಿ.ಕೆ.ಸುರೇಶ್

    ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ಪ್ರಕರಣ ದೇಶದ ಅತಿದೊಡ್ಡ ಮಾನಹಾನಿ ಹಾಗೂ ಮಹಿಳಾ ದೌರ್ಜನ್ಯ ಪ್ರಕರಣ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇವೇಗೌಡರ ಕುಟುಂಬವೇ ನೇರ ಹೊಣೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.
    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ವಿಷಯ ಗೊತ್ತಿದ್ದರೇ ಈ ವಿಚಾರ ಇನ್ನು ಮುಂಚೆಯೇ ವಿಷಯ ಹೊರ ಬರುತ್ತಿತ್ತು. ಆರೋಪ ಮಾಡುವುದಕ್ಕಾಗಿ ನಮ್ಮ ಹೆಸರುಗಳನ್ನು ತರಲಾಗುತ್ತಿದೆ. ಗುಸು ಗುಸು ಸುದ್ದಿ ಹಾಸನದಲ್ಲಿ ಇತ್ತು, ಸೂಕ್ತ ದಾಖಲೆಗಳು ಇಲ್ಲದೇ ಮಾತನಾಡುವುದು ಸೂಕ್ತವಲ್ಲ ಎಂದರು.
    ಹಾಸನದ ಬಿಜೆಪಿ ನಾಯಕ ದೇವರಾಜೇಗೌಡ ಉನ್ನತ ನಾಯಕರಿಗೆ ಪತ್ರ ಬರೆದಿದ್ದರು. ಪ್ರಕರಣದ ಬಗ್ಗೆ ಪ್ರಧಾನಿಗಳು ಹಾಗೂ ಅವರ ಕಾರ್ಯಾಲಯ ಮತ್ತು ಕುಟುಂಬಕ್ಕೆ ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟು ಎನ್‌ಡಿಎ ಅಭ್ಯರ್ಥಿಯನ್ನಾಗಿ ಮಾಡಿ. ಇಡೀ ದೇಶದಲ್ಲೇ ಕನ್ನಡಿಗರಿಗೆ, ಹಾಸನ ಜಿಲ್ಲೆಗೆ ಅವಮಾನ ಮಾಡಿದ್ದಾರೆ ಎಂದು ಆಪಾದಿಸಿದರು.
    ನಮಗೆ ಮೊದಲೇ ಗೊತ್ತಿತ್ತು ಎಂದು ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ. ಪ್ರಜ್ವಲ್ ತಂದೆ ರೇವಣ್ಣ ಅವರೇ ಹಳೆಯ ವಿಡಿಯೋಗಳು ಎಂದು ಒಪ್ಪಿಕೊಂಡಿದ್ದಾರೆ. ಎಲ್ಲದಕ್ಕೂ ಮೊದಲು ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕಿರುವುದು ಸರ್ಕಾರದ ಮೊದಲ ಕೆಲಸ. ಇಲ್ಲಿ ಸುಮಾರು 500 ಕ್ಕೂ ಹೆಚ್ಚು ಮಹಿಳೆಯರು ಶೋಷಣೆಗೆ ಒಳಗಾಗಿದ್ದಾರೆ ಎಂದರು.
    ಈತ ಮಾಜಿ ಪ್ರಧಾನಿಗಳ ಕುಟುಂಬ ಸದಸ್ಯರು, ಆ ಕುಟುಂಬ ನಮ್ಮದಲ್ಲ ಎಂದು ವ್ಯಾಖ್ಯಾನ ಮಾಡಬಹುದು. ಸ್ವತಃ ಪ್ರಧಾನಿಗಳೇ ಇದನ್ನು ಬೇರೆಯ ರೀತಿ ಬಿಂಬಿಸಲು ಹೊರಟಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ವಿಚಾರ ಗೊತ್ತಿದ್ದರೂ ಮುಚ್ಚಿಟ್ಟಿರುವುದು ಮಹಾ ಅಪರಾಧ. ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರಕ್ಕೆ ಹೊಳೆನರಸಿಪುರಕ್ಕೆ ಹೋದಾಗ ನನ್ನ ಮಗ ಎಂದು ಹೇಳಿದ್ದಾರೆ. ಆದರೆ ಈಗ ನನಗೂ ಇದಕ್ಕೂ ಸಂಬಂಧವಿಲ್ಲ ಎನ್ನುವುದು ಸರಿಯೇ? ಎಂದು ಪ್ರಶ್ನಿಸಿದರು.
    ಇದು ಮನುಕುಲದ ದೊಡ್ಡ ಅವಮಾನಕರ ಘಟನೆ. ಸಂಸ್ಕೃತಿ ಬಗ್ಗೆ ಮಾತನಾಡುವ ಇವರು ಈ ಪ್ರಕರಣದ ಬಗ್ಗೆ ಮಾತನಾಡಲಿ. ನೇಹಾ ಪ್ರಕರಣವನ್ನು ರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋದಂತೆ, ಈ ಪ್ರಕರಣವನ್ನು ತೆಗೆದುಕೊಂಡು ಹೋಗಲಿ. ಈ ಪ್ರಕರಣದ ಹಿಂದೆ ಇರುವ ಎಲ್ಲರಿಗೂ ಶಿಕ್ಷೆಯಾಗಬೇಕು. ಇದರಲ್ಲಿ ಸಿಲುಕಿಕೊಂಡಿರುವ ಮಹಿಳೆಯರಿಗೆ ಸೂಕ್ತ ರೀತಿಯಲ್ಲಿ ರಕ್ಷಣೆ ಕೊಟ್ಟು, ಕಾಪಾಡಬೇಕು ಎಂದರು.
    ಪ್ರಧಾನಿ ಹಾಗೂ ಪ್ರಧಾನ ಮಂತ್ರಿಗಳ ಕಾರ್ಯಾಲಯ ಪ್ರತಿಯೊಂದನ್ನು ತಿರುಚುವ ಕೆಲಸ ಮಾಡುತ್ತಿದೆ. ಹೆಣ್ಣು ಮಕ್ಕಳ ಮೇಲೆ ಎಷ್ಟು ಗೌರವವಿದೆ ಎನ್ನುವುದು ಪ್ರಧಾನಿ ಅವರ ಈ ಮಾತಿನಿಂದ ತಿಳಿಯುತ್ತದೆ ಎಂದು ಹೇಳಿದರು.
    ಚುನಾವಣೆ ಮುಗಿದ ನಂತರ ಪ್ರಕರಣ ಹೊರಗೆ ಬಂದಿದೆ. ಇವುಗಳನ್ನು ಅವರೇ ಹೊರಗೆ ಬಿಟ್ಟಿರುವುದು. ಬಿಜೆಪಿಯವರು ಇದರಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ. ದೇಶದ ಬೇರೆ ಯಾವುದೇ ದೇಶದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಕೂಡಲೇ ಸರ್ಕಾರ ಸಂತ್ರಸ್ತೆಯರ ರಕ್ಷಣೆ ಮಾಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts