ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಇದೀಗ ಸದ್ದುಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಪತ್ನಿ ನಾಝ್ಳನ್ನು ಕೊಲೆ ಮಾಡಿ ಎಸ್ಕೇಪ್ ಅಗಿದ್ದ ನಾಸಿರ್ ಹುಸೇನ್ ಬಂಧಿತ ಆರೋಪಿ.
ಹೆಂಡತಿ ನಾಝ್ಳನ್ನು ಕೊಲೆ ಮಾಡಲು ಪತಿ ನಾಸಿರ್ ಹುಸೇನ್ ರೂಪಿಸಿದ್ದ ಮಾಸ್ಟರ್ ಪ್ಲ್ಯಾನ್ ಇದೀಗ ಬಯಲಾಗಿದೆ. ಕೊಲೆಯಾದ ನಾಝ್, ಸಾಫ್ಟ್ವೇರ್ ಹುಡುಗ ಎಂದು ನಾಸಿರ್ ಹುಸೇನ್ನನ್ನು ಪ್ರೀತಿಸಿ ವಿವಾಹವಾಗಿದ್ದಳು. ಅರೋಪಿ ನಾಸಿರ್ ಮೂಲತಃ ಪಶ್ಚಿಮ ಬಂಗಾಳದವನಾಗಿದ್ದ.
ಇದೀಗ ಪೊಲೀಸ ಪ್ರಾಥಮಿಕ ವಿಚಾರಣೆಯಿಂದ ನಾಸಿರ್ನ ಕೊಲೆ ಪ್ಲ್ಯಾನ್ ಬಹಿರಂಗವಾಗಿದೆ. ಕೊಲೆ ಮಾಡುವ ಮೊದಲೇ ನಾಸಿರ್ ದೆಹಲಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದ. ನಂತರ ಕೊಲೆ ಮಾಡಿ ಟ್ಯಾಕ್ಸಿ ಮೂಲಕ ಏರ್ಪೋರ್ಟ್ಗೆ ತೆರಳಿದ್ದ. ನಂತರ ಟ್ಯಾಕ್ಸಿ ಚಾಲಕನಿಗೆ 4000 ರೂ. ಹಣ ಫೋನ್ ಪೇ ಮಾಡಿದ್ದ. ಬಳಿಕ 3500 ರೂ. ಹಣವನ್ನು ಮರಳಿ ಪಡೆದುಕೊಂಡಿದ್ದ.
ದೆಹಲಿ ವಿಮಾನ ಟೇಕ್ಆಫ್ ಆಗುತ್ತಿದ್ದಂತೆ ಕೊನೆ ಕ್ಷಣದಲ್ಲಿ ಪತ್ನಿ ನಾಝ್ಳನ್ನು ಕೊಲೆ ಮಾಡಿರುವುದಾಗಿ ಆಕೆಯ ಸಹೋದರನಿಗೆ ಮೆಸೇಜ್ ಮಾಡಿದ್ದಾನೆ. ನಿನ್ನ ತಂಗಿಯ ಅಕ್ರಮ ಸಂಬಂದಕ್ಕೆ ಕೋಪಗೊಂಡು ಕೊಲೆ ಮಾಡಿದ್ದೇನೆ. ಮನೆಗೆ ಹೋಗಿ ಬಾಡಿ ತೆಗೆದುಕೊಳ್ಳಿ ಎಂದು ಮೆಸೇಜ್ ಮಾಡಿ, ಮೊಬೈಲ್ ಆಫ್ ಮಾಡಿ ಎಸ್ಕೇಪ್ ಆಗಿದ್ದ.
ಪ್ರಕರಣ ದಾಖಲಾಗುತ್ತಿದ್ದಂತೆ ಅರೋಪಿಯ ಬಂಧನಕ್ಕಾಗಿ ಸುದ್ದಗುಂಟೆ ಪಾಳ್ಯ ಪೊಲೀಸರು ದೆಹಲಿಗೆ ತೆರಳಿದ್ದರು. ವಿಚಿತ್ರವೆಂದರೆ ಮಗಳನ್ನು ಕೊಟ್ಟ ಮನೆಯವರಿಗೆ ಅಳಿಯ ನಾಸಿರ್ನ ಸಂಪೂರ್ಣ ಮಾಹಿತಿಯೇ ಇರಲಿಲ್ಲ ಎಂಬುದು ತಿಳಿದು ಬಂದಿದೆ.
ಏನಿದು ಪ್ರಕರಣ?
ತಾವರೆಕೆರೆಯ ಸುಭಾಷ್ನಗರದ ಫ್ಲ್ಯಾಟ್ನಲ್ಲಿ ನಾಜ್ (22) ಕೊಲೆ ನಡೆದಿತ್ತು. ಯುವತಿ ಪತಿ ನಾಸಿರ್ ಹುಸೇನ್ ಕೊಲೆ ಆರೋಪಿ. ಕಳೆದ 6 ತಿಂಗಳ ಹಿಂದೆ ಫ್ಲ್ಯಾಟ್ನಲ್ಲಿ ಈ ದಂಪತಿ ವಾಸವಿದ್ದರು. ಪ್ರೀತಿಸಿದ್ದ ಇವರಿಬ್ಬರು ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು.
ನಾಸಿರ್ ಹುಸೇನ್ಗೆ ತಂದೆ-ತಾಯಿ ಇರಲಿಲ್ಲ, ನಾಜ್ ಈ ಮದುವೆಗೆ ತಂದೆ-ತಾಯಿಯನ್ನು ಒಪ್ಪಿಸಿ ಅನುಮತಿ ಪಡೆದುಕೊಂಡಿದ್ದಳು. ತಬ್ಬಲಿಯಂತಿದ್ದ ನಾಸಿರ್ ಗುಣವಂತ ಎಂದುಕೊಂಡು ನಾಜ್ಳನ್ನು ಆಕೆಯ ಪಾಲಕರು ಮದುವೆ ಮಾಡಿಸಿಕೊಟ್ಟಿದ್ದರು.
ಆದರೆ ಇತ್ತೀಚೆಗಷ್ಟೇ ಗರ್ಭಿಣಿಯಾಗಿದ್ದ ನಾಜ್ ಮೇಲೆ ನಾಸಿರ್ ಅನುಮಾನ ವ್ಯಕ್ತಪಡಿಸಿದ್ದ. ನಿನ್ನ ಹೊಟ್ಟೆಯಲ್ಲಿರುವ ಮಗು ನನ್ನದಲ್ಲ ಎನ್ನುತ್ತಿದ್ದ ನಾಸಿರ್, ಗರ್ಭಪಾತ ಮಾಡಿಸಿಕೊಳ್ಳುವಂತೆಯೂ ಒತ್ತಾಯಿಸಿದ್ದ. ಇದು ನಾಜ್ಗೆ ಇಷ್ಟವಿರದ್ದರಿಂದ ಇಬ್ಬರ ನಡುವೆ ಆಗಾಗ ಗಲಾಟೆ ಆಗುತ್ತಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ವಿಕೋಪಕ್ಕೆ ಹೋಗಿದ್ದು, ನಾಸಿರ್ ನಾಜ್ಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ.