ಶಿರಹಟ್ಟಿ:
ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ರಾಜ್ಯ ಸರ್ಕಾರ ಅನುಮೋದಿಸಿ ಶಿಫಾರಸ್ಸಿಗೆ ಕೇಂದ್ರಕ್ಕೆ ಕಳಿಸಿರುವ ವರದಿ ಅವೈಜ್ಞಾನಿಕ, ಅಸಂವಿಧಾನಿಕವಾಗಿದೆ ಎಂದು ವಿರೋಧಿಸಿ ಶಿರಹಟ್ಟಿಯಲ್ಲಿ ಬಂಜಾರಾ, ಬೋವಿ, ಕೊರಚ, ಚಲವಾದಿ ಸಮುದಾಯದವರು ಸೋಮವಾರ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಎಂ.ಕೆ. ಲಮಾಣಿ ಮಾತನಾಡಿ, ಎಲ್ಲ ಜಾತಿ ಜನಾಂಗಕ್ಕೆ ಮೀಸಲಾತಿ ಸೌಲಭ್ಯ ಕಲ್ಪಿಸುವ ಮುಂದಾಗಿರುವ ಸರ್ಕಾರ ನಿರ್ಧಿಷ್ಟ ಧೋರಣೆ ಹಾಗೂ ಮಾನದಂಡ ಅನುಸರಿಸದೇ ತಾವು ಜಾರಿಗೆ ತಂದಿದ್ದೇ ಸರಿ ಎಂಬ ಭ್ರಮೆಯಲ್ಲಿ ತೊಡಗಿರುವುದು ಅತ್ಯಂತ ಕಳವಳಕಾರಿ ಸಂಗತಿ. ನ್ಯಾ.ಸದಾಶಿವ ಆಯೋಗದ ವರದಿ ಅನುಷ್ಠಾನದ ಸಾಧಕ ಬಾಧಕ ಅರಿಯದೇ ಅಸಂವಿಧಾನಿಕ, ಅವಾಸ್ತವಿಕ ವರದಿಯನ್ನು ಏಕಪಕ್ಷೀಯವಾಗಿ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದಿಸಿ ಶಿಫಾರಸ್ಸಿಗೆ ಕೇಂದ್ರ ಸರ್ಕಾರಕ್ಕೆ ಕಳಿಸಿರುವುದು ಸರಿಯಲ್ಲ ಎಂದು ದೂರಿದರು.
ರಾಜ್ಯದಲ್ಲಿನ ಬಂಜಾರಾ, ಬೋವಿ, ಕೊರಚ, ಕೊರಮ, ಚಲವಾದಿ ಹಾಗೂ ಅಲೆಮಾರಿ ಜನಾಂಗದವರು ಶೋಷಣೆಗೊಳಗಾಗುವ ಜತೆಗೆ ಸರ್ಕಾರದ ಯಾವುದೇ ಸೌಲಭ್ಯ ಪಡೆಯದೇ ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಡಾ.ಅಂಬೇಡ್ಕರ ಸಂವಿಧಾನದಲ್ಲಿ ತುಳಿತಕ್ಕೊಳಪಟ್ಟ ಎಲ್ಲ ಜಾತಿ ಜನಾಂಗಕ್ಕೆ ಮೀಸಲಾತಿ ನೀಡಿ ನ್ಯಾಯ ಒದಗಿಸಿರುವದನ್ನು ಸರ್ಕಾರ ಗಾಳಿಗೆ ತೂರಿ ವರದಿ ಸತ್ಯಾಸತ್ಯತೆ ಅರಿಯದೇ ಮನ ಬಂದAತೆ ನಿರ್ಧಾರ ಕೈಗೊಂಡ ನಿರ್ಣಯ ಅಸಂವಿಧಾನಿಕವಾಗಿದ್ದು ಅದಕ್ಕೆ ಎಲ್ಲ ಜನಾಂಗದ ವಿರೋಧವಿದೆ. ಆದ್ದರಿಂದ ರಾಜ್ಯ ಸರ್ಕಾರ ಓಲೈಸುವ ಕ್ರಮ ಕೈಬಿಟ್ಟು ಸದರಿ ವರದಿ ಜಾರಿ ಮಾಡದೇ ಎಲ್ಲ ವರ್ಗದ ಜನರಿಗೆ ಪ್ರಾತಿನಿಧ್ಯ ನೀಡದಿದ್ದರೆ ನ್ಯಾಯಕ್ಕಾಗಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ತಹಸೀಲ್ದಾರ ಅನಿಲ ಬಡಿಗೇರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ವೇಳೆ ದೇವಪ್ಪ ಲಮಾಣಿ, ಹೊನ್ನಪ್ಪ ಶಿರಹಟ್ಟಿ, ಪರಮೇಶ ಲಮಾಣಿ, ಈರಣ್ಣ ಚವ್ಹಾಣ, ವೆಂಕಪ್ಪ ಲಮಾಣಿ, ರಾಜು ಶಿರಹಟ್ಟಿ, ವಸಂತ ಲಮಾಣಿ, ವೆಂಕಟೇಶ ಪವಾರ, ದೇವಪ್ಪ ಕಾರಭಾರಿ, ಖೇಮಪ್ಪ ಲಮಾಣಿ, ಕೇಶವ ಲಮಾಣಿ, ಮಲ್ಲೇಶ ಲಮಾಣಿ, ರವಿ ಲಮಾಣಿ, ಹನುಮಂತ ಭಜಂತ್ರಿ, ಗೀತಾ ಲಮಾಣಿ, ಸೋಮವ್ವ ಲಮಾಣಿ, ಕಮಲವ್ವ ಲಮಾಣಿ, ಶಾಂತವ್ವ ಲಮಾಣಿ ಸೇರಿದಂತೆ ಉಳಿದ ಸಮುದಾಯದವರು ಉಪಸ್ಥಿತರಿದ್ದರು.