ನವದೆಹಲಿ: ರಾಜಸ್ಥಾನ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮಧ್ಯೆ ಸಣ್ಣದೊಂದು ಭಿನ್ನಮತ ಹುಟ್ಟಿದ್ದು ಗುಟ್ಟಾಗೇನೂ ಉಳಿದಿಲ್ಲ.
ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಸಚಿನ್ ಪೈಲಟ್ ಸ್ವಲ್ಪ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ವಜ್ರ ವ್ಯಾಪಾರಿ ರಾಜೀವ್ ಅರೋರಾ ಅವರನ್ನು ರಾಜ್ಯಸಭೆಗೆ ಕಳುಹಿಸುವ ವಿಚಾರದಲ್ಲಿ ಪೈಲಟ್ ವಿರೋಧ ವ್ಯಕ್ತಪಡಿಸಿದ್ದರೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ.
ಅದರ ಹೊರತಾಗಿ ಕೂಡ ಅಲ್ಲಿ ಕೆಲವೊಂದಿಷ್ಟು ಅಸಾಮಾಧಾನಗಳು ಬೂದಿಮುಚ್ಚಿದ ಕೆಂಡದಂತೆ ಇದೆ ಎಂದರೆ ತಪ್ಪಾಗಲಾರದು. ಹೀಗಿರುವಾಗ ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದಂತೆ ಮುಂದಿನ ದಿನಗಳಲ್ಲಿ ಸಚಿನ್ ಪೈಲಟ್ ಕೂಡ ಅದೇ ದಾರಿ ತುಳಿಯಲಿದ್ದಾರಾ? ಎಂಬ ಅನುಮಾನವೂ ಮೂಡಿದೆ.
ಆದರೆ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿದ ಬಗ್ಗೆ ಸಚಿನ್ ಪೈಲಟ್ ಆಡಿದ ಮಾತುಗಳನ್ನು ನೋಡಿದರೆ, ಸದ್ಯಕ್ಕೇನೋ ರಾಜಸ್ಥಾನ ಸರ್ಕಾರ ಸೇಫ್ ಅನ್ನಿಸುತ್ತದೆ.
ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿ ಸೇರಲೆಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದು ದುರ್ದೈವ. ಅವರಿಗೇನೇ ಅಸಮಾಧಾನ, ಸಮಸ್ಯೆಗಳು ಇದ್ದರೂ ಅದನ್ನು ಪಕ್ಷದೊಳಗೇ ಇದ್ದುಕೊಂಡು, ಹಿರಿಯ ನಾಯಕರ ಸಹಭಾಗಿತ್ವದಲ್ಲಿ ಬಗೆಹರಿಸಿಕೊಳ್ಳಬೇಕಿತ್ತು ಎಂದು ಬುಧವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.
ಮಾ.10ರಂದು ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ಗೆ ರಾಜೀನಾಮೆ ಪತ್ರವನ್ನು ನೀಡಿದ್ದರು. ನಿನ್ನೆ ಮಾ.11ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಬಳಿಕ ಮಾತನಾಡಿ, ನರೇಂದ್ರ ಮೋದಿಯವನ್ನು ಹೊಗಳಿದ್ದರು. ಹಾಗೇ ಕಾಂಗ್ರೆಸ್ನಲ್ಲಿ ಯುವನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದರು.(ಏಜೆನ್ಸೀಸ್)
VIDEO|ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ರಾಷ್ಟ್ರದಲ್ಲಿ ಅಧಿಕ ಕೋಮು ಗಲಭೆ ನಡೆದಿವೆ: ಸಂಸದ ತೇಜಸ್ವಿ ಸೂರ್ಯ