ನವದೆಹಲಿ: ಒಮಿಕ್ರಾನ್ ಭೀತಿಯ ನಡುವೆಯೂ ಒಂದು ವಾರ ತಡವಾಗಿಯಾದರೂ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲು ಬಿಸಿಸಿಐ ನಿರ್ಧರಿಸಿರುವ ಬೆನ್ನಲ್ಲೇ ಭಾರತ ತಂಡದ ಆಯ್ಕೆ ಕುತೂಹಲ ಕೆರಳಿಸಿದೆ. ಪ್ರವಾಸದ 3 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳ ಸರಣಿಗೆ ನೆಟ್ ಬೌಲರ್ಗಳ ಹೊರತಾಗಿ ಒಟ್ಟು 20 ಆಟಗಾರರ ತಂಡವನ್ನು ಆಯ್ಕೆ ಮಾಡುವ ನಿರೀಕ್ಷೆ ಇದೆ. ನ್ಯೂಜಿಲೆಂಡ್ ವಿರುದ್ಧದ ಮುಂಬೈ ಟೆಸ್ಟ್ ಮುಗಿದ ಬೆನ್ನಲ್ಲೇ ಆಯ್ಕೆ ಸಮಿತಿ ಸಭೆ ಸೇರುವ ನಿರೀಕ್ಷೆ ಇದೆ. ಒಟ್ಟಾರೆ ಈ ವಾರ ತಂಡ ಪ್ರಕಟಗೊಳ್ಳುವುದು ನಿಶ್ಚಿತವೆನಿಸಿದೆ. ಟೆಸ್ಟ್ ಜತೆಗೆ ಏಕದಿನ ಸರಣಿಗೂ ತಂಡ ಆಯ್ಕೆ ನಡೆಯಲಿರುವುದರಿಂದ ವಿರಾಟ್ ಕೊಹ್ಲಿ ನಾಯಕರಾಗಿ ಮುಂದುವರಿಯುವರೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಲಭಿಸಲಿದೆ.
ಕೊಹ್ಲಿ ಟಿ20 ನಾಯಕತ್ವ ತ್ಯಜಿಸಿದ ಬಳಿಕ ರೋಹಿತ್ ಶರ್ಮ ನಾಯಕರಾಗಿ ಆಯ್ಕೆಯಾಗಿದ್ದು, ಸೀಮಿತ ಕ್ರಿಕೆಟ್ ಪ್ರಕಾರಕ್ಕೆ ಇಬ್ಬರು ನಾಯಕರನ್ನು ಹೊಂದುವ ಬಗ್ಗೆ ಬಿಸಿಸಿಐ ವಲಯದಲ್ಲಿ ಸಹಮತವಿಲ್ಲ. ಹೀಗಾಗಿ ಏಕದಿನ ತಂಡಕ್ಕೂ ರೋಹಿತ್ ನಾಯಕರಾಗುವರೇ ಎಂಬ ಕುತೂಹಲ ಹರಡಿದೆ. ಈ ಸರಣಿಗೆ ನಾಯಕತ್ವ ಉಳಿಸಿಕೊಂಡರೆ 2023ರ ಏಕದಿನ ವಿಶ್ವಕಪ್ವರೆಗೂ ಕೊಹ್ಲಿ ಪಟ್ಟ ಸುರಕ್ಷಿತ ಎನಿಸಲಿದೆ. ಈಗಾಗಲೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಹನುಮ ವಿಹಾರಿ ಸಹಿತ ಭಾರತ ಎ ತಂಡದ ಕೆಲ ಆಟಗಾರರು ಚತುರ್ದಿನ ಟೆಸ್ಟ್ ಸರಣಿಯ ಬಳಿಕವೂ ಅಲ್ಲೇ ಉಳಿದುಕೊಳ್ಳುವ ಸಾಧ್ಯತೆ ಇದೆ. ಈ ಪೈಕಿ ಕೆಲವರು ನೆಟ್ ಬೌಲರ್ ಆಗಿ ರಾಷ್ಟ್ರೀಯ ತಂಡ ಸೇರಿಕೊಳ್ಳಬಹುದು.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಡಿ. 26ರಿಂದ ಸೆಂಚುರಿಯನ್, 2ನೇ ಟೆಸ್ಟ್ ಜ. 3ರಿಂದ ಜೊಹಾನ್ಸ್ಬರ್ಗ್ ಮತ್ತು 3ನೇ ಹಾಗೂ ಅಂತಿಮ ಟೆಸ್ಟ್ ಜ. 11ರಿಂದ ಕೇಪ್ಟೌನ್ನಲ್ಲಿ ನಡೆಯಲಿದೆ ಎನ್ನಲಾಗಿದೆ. ಭಾರತ ತಂಡ ಡಿ. 15 ಅಥವಾ 16ರಂದು ಮುಂಬೈನಿಂದ ಹರಿಣಗಳ ನಾಡಿಗೆ ವಿಮಾನ ಏರುವ ನಿರೀಕ್ಷೆ ಇದೆ. ಪ್ರವಾಸದ ಟಿ20 ಸರಣಿ ಈಗಾಗಲೆ ಮುಂದೂಡಲ್ಪಟ್ಟಿದೆ.
VIDEO| 2002ರಲ್ಲಿ ಪರ್ಫೆಕ್ಟ್ 10 ಸನಿಹ ಬಂದಿದ್ದ ಮುರಳೀಧರನ್ಗೆ ನಿರಾಸೆ ತಂದಿದ್ದು ಯಾರು ಗೊತ್ತೇ?