ರಾಂಚಿ (ಜಾರ್ಖಂಡ್): ವೇದಿಕೆಯ ಮೇಲೆಯೇ ಉತ್ತರ ಪ್ರದೇಶದ ಬಿಜೆಪಿ ಸಂಸದರೊಬ್ಬರು ಕುಸ್ತಿಪಟುವಿನ ಕೆನ್ನೆಗೆ ಹೊಡೆದಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.
ರಾಂಚಿಯಲ್ಲಿ ಕ್ರೀಡಾಕೂಟ ಸಮಾರಂಭದ ವೇದಿಕೆಯಲ್ಲಿ ಈ ಘಟನೆ ನಡೆದಿದ್ದು, ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಯುವಕನಿಗೆ ಹೊಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಗಣಪತ್ ರಾಯ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 15 ವರ್ಷದೊಳಗಿನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ನ ಮೊದಲ ಸುತ್ತಿನ ಪಂದ್ಯದ ವೇಳೆ ಇಂಥದ್ದೊಂದು ಘಟನೆ ನಡೆದಿದೆ. ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷರೂ ಆಗಿರುವ ಸಿಂಗ್ ಅವರು ಉತ್ತರ ಪ್ರದೇಶದ ಯುವಕನೊಬ್ಬನ ಕೆನ್ನೆಗೆ ಹೊಡೆದಿರುವ ವಿಡಿಯೋ ಎಲ್ಲೆಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಆಗಿದ್ದೇನು?
ಈ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲು ವಯೋಮಿತಿ ನಿಗದಿ ಮಾಡಲಾಗಿತ್ತು. ಆದರೆ ಈ ಯುವಕನಿಗೆ ವಯೋಮಿತಿ ಮೀರಿದ್ದ ಹಿನ್ನೆಲೆಯಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದ್ದರಿಂದ ವೇದಿಕೆ ಮೇಲೇರಿದ ಯುವಕ ತನಗೂ ಅವಕಾಶ ನೀಡುವಂತೆ ಕೋರಿದ್ದಾನೆ. ಸಂಸದರು ಈ ಬಗ್ಗೆ ಆತನಿಗೆ ತಿಳಿವಳಿಕೆ ಹೇಳಿದ್ದಾರೆ. ಒಬ್ಬರಿಗೆ ಈ ರೀತಿ ಅವಕಾಶ ಕೊಟ್ಟರೆ ಅದು ತಪ್ಪಾಗುತ್ತದೆ, ಬೇರೆಯವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದ್ದರಿಂದ ಅವಕಾಶ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ.
ಆದರೆ ಆ ಯುವಕ ಪದೇ ಪದೇ ಸಂಸದರ ಮನವೊಲಿಸಲು ಪ್ರಯತ್ನ ಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಸಂಸದ ಸಿಂಗ್ ತಾಳ್ಮೆ ಕಳೆದುಕೊಂಡು ಕೆನ್ನೆಗೆ ಹೊಡೆದಿದ್ದಾರೆ. ನಂತರ ಅಲ್ಲಿದ್ದವರು ಕೂಡಲೇ ಯುವಕನನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ.
ಇದಿಷ್ಟು ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಂಸದರ ಕ್ರಮಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ‘ನಾವು ಈಗಾಗಲೇ ಇನ್ನೂ 5 ಕುಸ್ತಿಪಟುಗಳನ್ನು ಅನರ್ಹಗೊಳಿಸಿದ್ದೇವೆ. ಆದ್ದರಿಂದ ವೇದಿಕೆಯಿಂದ ಕೆಳಗಿಳಿಯುವಂತೆ ಆತನಿಗೆ ನಯವಾಗಿ ಹೇಳಿದರೂ ಆತ ಕೇಳಲಿಲ್ಲ. ಪದೇ ಪದೇ ಕಿರಿಕಿರಿ ಮಾಡುತ್ತಿದ್ದ. ತಾನು ಉತ್ತರ ಪ್ರದೇಶದವನಾಗಿದ್ದು, ತನಗೆ ಅವಕಾಶ ಕೊಡಿ ಎಂದು ಕೇಳುತ್ತಿದ್ದ. ಉತ್ತರ ಪ್ರದೇಶವಷ್ಟೇ ಅಲ್ಲ, ಯಾವ ರಾಜ್ಯದಿಂದ ಬಂದರೂ ಅವಕಾಶ ಇಲ್ಲ. ಇಲ್ಲಿ ಎಲ್ಲರಿಗೂ ಒಂದೇ ನಿಯಮ ಎಂದರೂ ಕೇಳಲಿಲ್ಲ. ಆದ್ದರಿಂದ ಸಹನೆ ಕಳೆದುಕೊಳ್ಳಬೇಕಾಯಿತು. ರಾಜ್ಯಗಳ ಆಧಾರದ ಮೇಲೆ ಎಲ್ಲರಿಗೂ ಅವಕಾಶ ಕೊಡಲು ಪ್ರಾರಂಭಿಸಿದರೆ ದೇಶದಲ್ಲಿ ಕುಸ್ತಿಯನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂದು ಸಂಸದ ಸಿಂಗ್ ಹೇಳಿದ್ದಾರೆ.
ಆತನಿಗೆ ಭಾಗವಹಿಸಲು ಬಿಡದ ವಿಚಾರದ ಕುರಿತು ತಮ್ಮಲ್ಲಿ ಯಾವುದೇ ಮಾಹಿತಿ ಇಲ್ಲ ಜಾರ್ಖಂಡ್ ಕುಸ್ತಿ ಅಸೋಸಿಯೇಷನ್ ಸ್ಪಷ್ಟನೆ ನೀಡಿದೆ.
ಯುವಕನ ಕೆನ್ನೆಗೆ ಹೊಡೆದಿರುವ ವಿಡಿಯೋ ಇಲ್ಲಿದೆ ನೋಡಿ:
JHARKHAND:
— Gururaj Anjan (@Anjan94150697) December 18, 2021
Fresh shocker from the BJP!
BJP MP & Wrestling Federation of India President, Brij Bhushan Sharan Singh slaps young wrestler on stage.
Can a public servant (BJP MP) manhandle the common man? What message the BJP is sending to the country? pic.twitter.com/EwQ4LR1FAE