ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಈಗಾಗಲೇ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಬಂಧಿತರನ್ನು ಝಾಕೀರ್ ಮೊಹಮ್ಮದ್ ಸವನೂರು ಮತ್ತು ಷಫೀಕ್ ಬೆಳ್ಳಾರೆ ಎಂದು ಗುರುತಿಸಲಾಗಿದೆ. ಪ್ರವೀಣ್ ನೆಟ್ಟಾರ್ ಬಗ್ಗೆ ಷಫೀಕ್ ಮಾಹಿತಿ ನೀಡಿದ್ದ. ಜಾಕೀರ್ ಮತ್ತು ಆತನ ತಂಡ ಹತ್ಯೆ ಮಾಡಿರುವುದಾಗಿ ಹೇಳಲಾಗಿದೆ.
ಇವರಿಬ್ಬರನ್ನು ಬಂಧಿಸುತ್ತಲೇ ಷಫೀಕ್ ಪತ್ನಿ ಅನ್ಷಿಫಾ ಕಣ್ಣೀರು ಸುರಿಸಿದ್ದಾರೆ. ‘ದಿಗ್ವಿಜಯ ನ್ಯೂಸ್’ ಜತೆ ಮಾತನಾಡಿದ ಅವರು, ನನ್ನ ಗಂಡ ನಿರಪರಾಧಿ. ಅವರು ತುಂಬಾ ಒಳ್ಳೆಯವರು. ಸೋಷಿಯಲ್ ವರ್ಕ್ ಮಾಡಿಕೊಂಡು ಇದ್ದವರು. ಇಲ್ಲಿಯವರಿಗೆಲ್ಲಾ ಅವರು ಎಂಥವರು ಎಂದು ಗೊತ್ತು. ಪೊಲೀಸರು ಸುಮ್ಮನೇ ವಿಚಾರಣೆಗೆ ಕರೆದುಕೊಂಡು ಹೋಗಿ ಕೊಲೆ ಪಟ್ಟ ಕಟ್ಟಲಾಗಿದೆ ಎಂದಿದ್ದಾರೆ.
ಸೋಮವಾರ ಷಫೀಕ್ ಮನೆಯಲ್ಲೇ ಇದ್ದರು. ನಂತರ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ನಾವೆಲ್ಲಾ ಅಜ್ಜಿಯ ಮನೆಗೆ ಹೋಗಿದ್ದೆವು. ನಾವು ಮನೆಗೆ ವಾಪಸ್ ಆದಾಗ ಪತಿ ಷಫೀಕ್ ಮನೆಗೆ ಬಂದಿದ್ದರು. ಆಗ ಕೊಲೆಯಾಗಿರುವ ವಿಷಯ ತಿಳಿಯಿತು. ಅವರಿಗೂ ಷಾಕ್ ಆಯಿತು, ಕಣ್ಣೀರು ಕೂಡ ಹಾಕಿದ್ದಾರೆ. ಇಂಥವರು ಅವರ ಕೊಲೆ ಯಾಕೆ ಮಾಡುತ್ತಾರೆ ಹೇಳಿ ಎಂದು ಅನ್ಷಿಫಾ ಪ್ರಶ್ನಿಸಿದ್ದಾರೆ.
ಪ್ರವೀಣ್ ಜತೆ ತುಂಬಾ ಸ್ನೇಹ ಅಂತೇನೂ ಇರಲಿಲ್ಲ. ಆದರೆ ಚೆನ್ನಾಗಿ ಪರಿಚಯವಿತ್ತು. ಕೊಲೆಯಾಗುವ ದಿನ ಅಂದರೆ ಸೋಮವಾರ ಬೆಳಗ್ಗೆ ಪ್ರವೀಣ್ ಅವರನ್ನು ಷಫೀಕ್ ಮಾತನಾಡಿಸಿದ್ದರು. ಅವರಿಗೂ ಕೊಲೆಗೂ ಸಂಬಂಧವಿಲ್ಲ. ವಿನಾಕಾರಣ ಇದರಲ್ಲಿ ಅವರನ್ನು ಸಿಕ್ಕಿಸಲಾಗಿದೆ ಎಂದಿದ್ದಾರೆ.
ಯಾರೂ ಸಿಗಲಿಲ್ಲ ಎಂದು ನನ್ನ ಗಂಡನನ್ನು ಹಿಡಿದುಕೊಂಡು ಹೋಗಲಾಗಿದೆ. ಯಾರ್ಯಾರ ಕೊಲೆ ಇವರ್ಯಾಕೆ ಮಾಡ್ತಾರೆ. ಇವರು ಎಂಥವರು ಎಂದು ಎಲ್ಲರಿಗೂ ಗೊತ್ತು. ವಿಚಾರಣೆ ಮಾಡುತ್ತೇವೆ ಎಂದು ಹೇಳಿ ಈಗ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ನಿಜವಾದ ಕೊಲೆಗಾರರನ್ನು ಹಿಡಿದು, ಇವರನ್ನು ಬಿಡಬೇಕು ಎಂದು ಪತ್ನಿ ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಮುಖಂಡ ಪ್ರವೀಣ್ ಹತ್ಯೆಗೆ ಇದೆಯೆ ಹಲಾಲ್ ನಂಟು? ಕೃತ್ಯಕ್ಕೂ ಮುನ್ನ ಆಗಿದ್ದೇನು?
ಪ್ರವೀಣ್ ಹತ್ಯೆ: ಮುನ್ನೆಚ್ಚರಿಕೆ ಕ್ರಮವಾದ ಮದ್ಯದಂಗಡಿ ಕ್ಲೋಸ್- ಕುಟುಂಬಸ್ಥರ ಭೇಟಿಯಾಗಲಿರುವ ಸಿಎಂ