ಅಲಹಾಬಾದ್: ಹಿಂಸಾಚಾರ ಪ್ರಕರಣವೊಂದರಲ್ಲಿ 2007ರಲ್ಲಿ ಸಂಸದರಾಗಿದ್ದ ಯೋಗಿ ಆದಿತ್ಯನಾಥ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದ ವ್ಯಕ್ತಿಯೊಬ್ಬನಿಗೆ, ಅತ್ಯಾಚಾರ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಗೋರಖ್ಪುರ್ನ ಜಿಲ್ಲಾ ಸೆಷೆನ್ಸ್ ನ್ಯಾಯಾಲಯ ಇಂದು ಆದೇಶಿಸಿದೆ.
2007ರಲ್ಲಿ ಗೋರಖ್ಪುರ್ನಲ್ಲಿ ಸಂಭವಿಸಿದ ಕೋಮು ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪರ್ವೇಜ್ ಪರ್ವಾಜ್ ಎಂಬಾತ ಹೈಕೋರ್ಟ್ನಲ್ಲಿ ದೂರು ದಾಖಲಿಸಿದ್ದ. ಈತ ದೂರು ದಾಖಲು ಮಾಡಿದ್ದು 2017ರಲ್ಲಿ ಅಂದರೆ 10 ವರ್ಷಗಳ ನಂತರ!
ಗೋರಖ್ಪುರ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವ ಆರೋಪದ ಮೇಲೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಎಫ್ಐಆರ್ ದಾಖಲಾಗಬೇಕೆಂದು ಈತ ಹೇಳಿದ್ದ. ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿ ಎಂಎಲ್ಸಿ ವೈ.ಡಿ. ಸಿಂಗ್, ಅಂದಿನ ಮೇಯರ್ ಅಂಜು ಚೌಧರಿ, ಶಿವಪ್ರತಾಪ್ ಶುಕ್ಲಾ ಅವರ ವಿರುದ್ಧವೂ ದೂರು ದಾಖಲು ಮಾಡಿದ್ದ.
ಆದರೆ, ಹೈಕೋರ್ಟ್ ನ್ಯಾಯಪೀಠವು ಪರ್ವೇಜ್ ಅವರ ಮನವಿಯನ್ನು ತಿರಸ್ಕರಿಸಿತು. ಯೋಗಿ ವಿರುದ್ಧ ವಿಚಾರಣೆ ನಡೆಯುವ ಅಗತ್ಯ ಇಲ್ಲ ಎಂದು ಆದೇಶಿಸಿತ್ತು.
ಇದನ್ನೂ ಓದಿ: ಕಳುವಾಗಿ 22 ವರ್ಷದ ಹಿಂದೆ ಲಂಡನ್ ಸೇರಿದ್ದ ಶಿವ ಇಂದು ಭಾರತಕ್ಕೆ
ಇದೇ ವ್ಯಕ್ತಿಗೀಗ 2018ರ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಗೋರಖ್ಪುರ್ನ ಜಿಲ್ಲಾ ಸೆಷೆನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಗಲಭೆ ಮತ್ತು ಅತ್ಯಾಚಾರದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಇವರ ವಿರುದ್ಧ ದೂರು ದಾಖಲಾಗಿತ್ತು.
40 ವರ್ಷದ ಮಹಿಳೆಯೊಬ್ಬರು ತಮ್ಮ ಮೇಲೆ ಅತ್ಯಾಚಾರ ಆಗಿದೆ ಎಂದು ದೂರು ದಾಖಲಿಸಿದ ಪ್ರಕರಣ ಇದಾಗಿದೆ. ಪರ್ವೇಜ್ ಮತ್ತು ಮೆಹಮೂದ್ ಇಬ್ಬರೂ 2018, ಜೂನ್ 3ರಂದು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಈ ಮಹಿಳೆ ಆರೋಪ ಮಾಡಿದ್ದರು. ಇದೀಗ ಗೋರಖಪುರ್ ಸೆಷನ್ಸ್ ಕೋರ್ಟ್, ಇಬ್ಬರನ್ನೂ ದೋಷಿಗಳೆಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ಈಗ ಇವರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿರುವುದಾಗಿ ತಿಳಿದುಬಂದಿದೆ.
ಪಾಕಿಸ್ತಾನಕ್ಕೆ ವಾಪಸ್ ಹೋಗಲಾರೆ ಎಂದ ನವಾಜ್ ಷರೀಫ್: ಕಾರಣ ಏನು ಗೊತ್ತಾ?