ನಾನೊಬ್ಬ ನತದೃಷ್ಟ ಮಹಿಳೆ. ನನ್ನ ಮದುವೆಯಾಗಿ 30ವರ್ಷಗಳು ಕಳೆದಿವೆ. ಮೂವತ್ತು ವರ್ಷಗಳಿಂದಲೂ ನಾನು ಮನೆಯಲ್ಲಿ ಜೈಲಿನಲ್ಲಿದ್ದಂತೆ ಇದ್ದೇನೆ. ನನ್ನಬಗಂಡ ವಿದ್ಯಾವಂತ. ಒಳ್ಳೆ ಉದ್ಯೋಗವು ಇದೆ. ಆದರೂ ಜಾಣರಾದ, ಓದಿನಲ್ಲಿ ಚುರುಕಾಗಿರುವ ನನ್ನ ಇಬ್ಬರು ಹೆಣ್ಣುಮಕ್ಕಳನ್ನು ಹೆಚ್ಚು ಓದಿಸಲು ಇಷ್ಟ ಪಡದೇ ನನ್ನ ಜೊತೆಗೆ ಮನೆಯಲ್ಲಿಯೇ ಬಂಧಿಗಳನ್ನಾಗಿ ಮಾಡಿದ್ದಾರೆ.
ಮೂವತ್ತು ವರ್ಷಗಳಿಂದ ನನ್ನ ತವರಿಗೆ ಹೋಗಿಲ್ಲ. ಅಲ್ಲಿಗೆ ಹೋಗಬೇಕೆಂದು ಇಷ್ಟವೆಂದರೆ ಮಕ್ಕಳ ಎದುರಿಗೆ ಅವಾಚ್ಯ ಮಾತುಗಳಿಂದ ನನ್ನನ್ನು, ನನ್ನ ತವರಿನವರನ್ನು ನಿಂದಿಸಿ ಹೊಡೆಯುತ್ತಾರೆ. ಆಗೊಮ್ಮೆ ಈಗೊಮ್ಮೆ
ನನ್ನ ತೌರಿನ ಜನರೇ ನಮ್ಮ ಮನೆಗೆ ಬರುತ್ತಾರೆ.
ಅವರನ್ನು ಅವಮಾನ ಮಾಡುವ ನನ್ನ ಗಂಡ ಅವರ ಎದುರಿಗೆ ನನ್ನನ್ನು ಕೆಟ್ಟ ಮಾತುಗಳಿಂದ ನಿಂದಿಸುತ್ತಾರೆ. ಮನೆಯಲ್ಲಿ ಟಿ.ವಿ ಇಲ್ಲ, ರೇಡಿಯೋ ಇಲ್ಲ. ಓದಲು ಪುಸ್ತಕಗಳು ಇಲ್ಲ. ನಮಗಂತೂ ಹೊತ್ತುಹೋಗುವುದೇ
ದುಸ್ತರವಾಗಿದೆ. `ನೀವು ಬನ್ನಿ ಹೊರಗಡೆ ಹೋಗೋಣ’ವೆಂದರೆ, `ಅಲ್ಲಿ ಯಾರನ್ನು ನೀನು ನೋಡಬೇಕು?
ಯಾರೊಂದಿಗೆ ಮಾತಾಡಬೇಕು? ‘ ಎಂದೆಲ್ಲಾ ಹೀಯಾಳಿಸುತ್ತಾರೆ. ನನಗೆ ಮತ್ತು ನನ್ನ ಮಕ್ಕಳಿಗೆ ಕಾಯಿಲೆಯಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಿಲ್ಲ. ಮನೆ ಔಷಧಿಯಲ್ಲಿಯೇ ವಾಸಿಮಾಡಿಕೊಳ್ಳಬೇಕು. ನನಗಂತೂ ಬದುಕೇ ಸಾಕಾಗಿದೆ ಮೇಡಂ.
ಈ ಪತ್ರವನ್ನು ಮತ್ತೊಬ್ಬರ ಸಹಾಯದಿಂದ ಗುಟ್ಟಾಗಿ ಬರೆಯುತ್ತಿದ್ದೇನೆ. ಈ ಪತ್ರ ನಿಮ್ಮ ಕೈ ಸೇರುತ್ತದೆ ಎಂಬ ನಂಬಿಕೆ ಇದೆ. ದಯವಿಟ್ಟು ಈ ನತದೃಷ್ಟೆಗೆ ನೆರವಾಗಿ ಮೇಡಂ…
ಉತ್ತರ: ನಿಮ್ಮ ಪತ್ರ ಓದಿ ನನಗೆ ತುಂಬಾ ಬೇಸರವಾಯಿತು. ನೀವು ಯಾಕೆ ಈ ನರಕದಲ್ಲಿ ಮೂವತ್ತು ವರ್ಷಗಳಿಂದ ಇದ್ದೀರಾ? ನಿಮ್ಮ ಗಂಡನಿಗೆ ಬಲವಾದ ಮಾನಸಿಕ ಕಾಯಿಲೆ ಇದೆ.
ಸುಪ್ರೀಂ ಕೋರ್ಟ್ ಸಹ ಹೀಗೆ ಹೆಂಡತಿ ಮತ್ತು ಮಕ್ಕಳಿಗೆ ಮಾನಸಿಕ ಹಿಂಸೆ ಕೊಡುವುದು ಅಪರಾಧವೆಂದೇ ಹೇಳಿದೆ. ಹೆಂಡತಿಯ ಸ್ವಾತಂತ್ರ್ಯ ಹರಣ ಮಾಡುವುದು, ಮಕ್ಕಳಿಗೆ ವಿದ್ಯೆಯನ್ನು ಕೊಡದಿರುವುದು, ಮೇಲಾಗಿ ಭಯಂಕರ ಅನುಮಾನ ಪಡುವುದು ಮತ್ತು ಹೊಡೆಯುವುದು ಇವೆಲ್ಲವೂ ಅಪರಾಧಗಳೇ.
ನಿಮ್ಮ ಗಂಡ ಬಹಳ ಅಪರಾಧಗಳನ್ನು ಮಾಡುತ್ತಿದ್ದಾರೆ. ನೀವು ಇದುವರೆಗೂ ಸಹಿಸಿಕೊಂಡಿದ್ದೇ ಜಾಸ್ತಿಯಾಯಿತು. ಸುಮ್ಮನೆ ಆ ಮನೆಯನ್ನು ಬಿಟ್ಟು ಮಕ್ಕಳೊಂದಿಗೆ ನಿಮ್ಮ ತವರಿಗೆ ಹೋಗಿ. ನಿಮ್ಮ ಅಣ್ಣತಮ್ಮರ ಸಹಾಯ ಪಡೆದು `ಫ್ಯಾಮಿಲಿ ಕೋರ್ಟ್’ ನ ನೆರವು ಪಡೆಯಿರಿ. ನಿಮ್ಮ ಹತ್ತಿರ ಅದಕ್ಕೆ ತಕ್ಕಷ್ಟು ಹಣವಿಲ್ಲದಿದ್ದರೆ , ಅಲ್ಲಿ ನಿಮಗೆ ಉಚಿತವಾಗಿ ವಕೀಲರ ಸಹಾಯ ಸಿಗುತ್ತದೆ.
ನಿಮ್ಮ ಮಕ್ಕಳಿಗೆ ವಿದ್ಯೆ ಕೊಡದಿರುವುದನ್ನು ನೀವು ಸಹಿಸಿದ್ದು ತಪ್ಪಾಯಿತು. ಇನ್ನಾದರೂ ಆ ತಪ್ಪನ್ನು ತಿದ್ದಿಕೊಳ್ಳಿ. ಅವಮಾನ ಮತ್ತು ದೌರ್ಜನ್ಯಗಳನ್ನು ಸಹಿಸಿಕೊಳ್ಳುವುದು ಸಹ ತಪ್ಪು. ತಂದೆಯಂತೂ ಕ್ರೂರಿ, ತಾಯಿಯು ಅಸಹಾಯಕಿಯಾಗಿಬಿಟ್ಟರೆ ಆ ಮಕ್ಕಳು ಯಾರನ್ನು ಆಧರಿಸಿ ಬದುಕಬೇಕು. ನಿಮ್ಮ ಬದುಕು ಹಾಳಾಗುತ್ತಿರುವುದರ ಜೊತೆಗೆ ನಿಮ್ಮ ಮಕ್ಕಳ ಬದುಕು ಹಾಳಾಗುತ್ತಿದೆ.
ಇದನ್ನು ಸಹಿಸಿದರೆ ನೀವು ಅಪರಾಧ ಮಾಡಿದಂತಾಗುತ್ತದೆ. ಮೊದಲು ಆ ಮನೆಯಿಂದ ಹೊರಬಂದು ಆ ಮನುಷ್ಯನಿಗೆ ವಿಚ್ಛೇದನ ಕೊಡಿ.
ಡಾ.ಶಾಂತಾ ನಾಗರಾಜ್ ಅವರ ಇನ್ನಿತರ ಸಲಹೆಗಳಿಗಾಗಿ ಈ ಲಿಂಕ್ ಕ್ಲಿಕ್ಕಿಸಿ…
ಮಕ್ಕಳಿಗಾಗಿ ಮದುವೆಯಾದರು: ಎರಡನೇ ಪತ್ನಿಯಾದ ಮಾತ್ರಕ್ಕೆ ನನಗೆ ಬಯಕೆಗಳು ಇರುವುದು ತಪ್ಪೆ?
ಅಮ್ಮನಿಗಾಗಿ ಪ್ರೀತಿ ಬಲಿಕೊಟ್ಟು ಮಾವನಮಗನ ಮದ್ವೆಯಾಗಿ ಜೀವನವೇ ನರಕವಾಗಿದೆ- ಏನು ಮಾಡಲಿ?
ಹುಡುಗನೊಬ್ಬ ಕಾಡ್ತಿದ್ದಾನೆ- ರಾತ್ರಿ ಬೇಕು ಅಂತಾನೆ, ಬೆಳಗ್ಗೆ ಬೇಡ ಅಂತಾನೆ; ಏನು ಮಾಡೋದು?