ಮುಂಬೈ: ಅದು 2002. ಬಾಲಿವುಡ್ನ ಸೂಪರ್ಸ್ಟಾರ್ ಎನಿಸಿಕೊಂಡಿರುವ ಸಲ್ಮಾನ್ ಖಾನ್ ಕುಡಿದು ಚಾಲನೆ ಮಾಡಿ ಫುಟ್ಪಾಥ್ ಮೇಲೆ ಕಾರು ಹಾಯಿಸಿ ಜನರ ಸಾವಿಗೆ ಕಾರಣವಾಗಿದ್ದ ಆರೋಪ ಎದುರಿಸುತ್ತಿದ್ದರು. ನಂತರ ಸುಮಾರು 13 ವರ್ಷ ಈ ಕೇಸ್ನ ವಿಚಾರಣೆ ನಡೆಯಿತು. ಅಲ್ಲಿಯವರೆಗೆ ಸುಮ್ಮನಿದ್ದ ಸಲ್ಮಾನ್ ಕಾರು ಚಾಲಕ 13 ವರ್ಷಗಳ ಬಳಿಕ ಏಕಾಏಕಿಯಾಗಿ ಕೋರ್ಟ್ಗೆ ಬಂದು ನಾನೇ ಕಾರು ಚಾಲನೆ ಮಾಡುತ್ತಿದ್ದೆ, ಸಲ್ಮಾನ್ ಖಾನ್ ಮಾಡುತ್ತಿರಲಿಲ್ಲ ಎಂದು ಸಾಕ್ಷಿ ಹೇಳಿದ! ಇದಾದ ಬಳಿಕ ಸಲ್ಮಾನ್ ಬಿಡುಗಡೆಗೊಂಡರು. ಆದರೆ ಈ ಕೇಸ್ನಷ್ಟೇ ನಿಗೂಢವಾಗಿ ಉಳಿದದ್ದು ಸಲ್ಮಾನ್ ಖಾನ್ ಅವರೇ ಕಾರು ಚಾಲನೆ ಮಾಡಿ ಜನರ ಸಾವಿಗೆ ಕಾರಣವಾಗಿದ್ದನ್ನು ಕಣ್ಣಾರೆ ಕಂಡೆ ಎಂದಿದ್ದ ಸಾಕ್ಷಿದಾರ ಕಾನ್ಸ್ಟೆಬಲ್ ರವೀಂದ್ರ ಪಾಟಿಲ್.
ಕೋರ್ಟ್ನಲ್ಲಿ ಸಾಕ್ಷಿ ನುಡಿದ ತಪ್ಪಿಗೆ ಇನ್ನಿಲ್ಲದ ಹಿಂಸೆ ಅನುಭವಿಸಿ, ಕೊನೆಗೆ ಹುಚ್ಚನಂತಾಗಿ ಭಿಕ್ಷೆ ಬೇಡುತ್ತಾ ತಿರುಗುತ್ತಾ ರಕ್ತಕಾರಿ ಸತ್ತುಹೋದ ರವೀಂದ್ರ ಅವರಿಗೆ ಕೊನೆಗೂ ನ್ಯಾಯಸಿಗಲೇ ಇಲ್ಲ. ಇವರ ಸಾವಿನ ಬಗ್ಗೆ ಯಾವ ನ್ಯಾಯಾಲಯದಲ್ಲಿಯೂ ಕೇಸು ದಾಖಲಾಗಲೇ ಇಲ್ಲ. ಏಕೆಂದರೆ ಸಲ್ಮಾನ್ ಖಾನ್ ಕೇಸು ನಡೆಯುತ್ತಲೇ ರವೀಂದ್ರ ನಿಗೂಢವಾಗಿ ಕಣ್ಮರೆಯಾದ ಹಿನ್ನೆಲೆಯಲ್ಲಿ ಇವರ ಸಾಕ್ಷಿ ಕೋರ್ಟ್ನೂ ನಿಲ್ಲಲ್ಲಿಲ್ಲ, ಕೊನೆಗೆ ಕುಟುಂಬದವರಿಗೂ ಇವರು ಬೇಡವಾದರು!
ಈ ಕೇಸ್ನಲ್ಲಿ ಸಲ್ಮಾನ್ ಖಾನ್ ಸಿಕ್ಕಿಬೀಳುತ್ತಲೇ ರವೀಂದ್ರ ಅವರು ಸಾಕ್ಷಿದಾರರೆಂದು ಪರಿಗಣಿಸ್ಪಟ್ಟಿದ್ದರು. ಆದರೆ ಇದ್ದಕ್ಕಿದ್ದಂತೆಯೇ ಅವರು ನಿಗೂಢವಾಗಿ ಕಣ್ಮರೆಯಾದರು. ಅವರ ಸಹೋದರ ಪೊಲೀಸರಿಗೆ ದೂರು ಕೊಟ್ಟರು. ಕೊನೆಗೆ ಅವರನ್ನು ಹಿಡಿಯಲು ವಿಶೇಷ ಪೊಲೀಸ್ ತಂಡ ರಚನೆಯಾಗಿ ಕೊನೆಗೆ ಅವರು ಸಿಕ್ಕರು. ಆದರೆ ಬಂದ ಮೇಲೂ ಕೋರ್ಟ್ಗೆ ಅವರು ಹಾಜರು ಆಗದಂತೆ ತಡೆಯಲಾಯಿತು. ಇದು ಕೂಡ ನಿಗೂಢವಾಗಿಯೇ ಉಳಿಯಿತು. ಕೊನೆಗೆ ರವೀಂದ್ರ ಅವರು ಈ ಪ್ರಕರಣದ ಸಾಕ್ಷಿಯಾದ ತಪ್ಪಿಗೆ, ಕಣ್ಮರೆಯಾಗಿರುವ ಕಾರಣದಿಂದಾಗಿ ಜೈಲುಪಾಲಾದರು. ಆದರೆ ಅವರಿಗೆ ಏನಾಗಿತ್ತು? ಎಲ್ಲಿಗೆ ಹೋದರು ಎಂಬ ತನಿಖೆ ಆಗಲೇ ಇಲ್ಲ, ಎಲ್ಲ ಪ್ರಶ್ನೆಗಳೂ ಜನರ ಮನಸ್ಸಿನಲ್ಲಿ ಪ್ರಶ್ನೆಯಾಗಿಯೇ ಉಳಿದುಹೋದವು.
ಜೈಲಿನಿಂದ ಹೊರಬಂದ ಮೇಲೂ ರವೀಂದ್ರ ಇನ್ನಿಲ್ಲದ ಚಿತ್ರಹಿಂಸೆ ಅನುಭವಿಸಿ ಕೊನೆಗೆ ಹುಚ್ಚನಂತಾಗಿ ಬೀದಿಬೀದಿ ಸುತ್ತಿ, ಭಿಕ್ಷೆ ಬೇಡುತ್ತಾ ಟಿಬಿ ಬಂದು ರಕ್ತಕಾರಿ ಸತ್ತರು!
ಆಗಿಷ್ಟು ಸುದ್ದಿಯಾಗಿ ತಣ್ಣಗಾಗಿದ್ದ ಈ ಕೇಸ್ಗೆ ಮರುಜೀವ ಬಂದಿರುವುದು ಸಾಮಾಜಿಕ ಜಾಲತಾಣದಿಂದಾಗಿ. ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ತನಿಖೆ ಮಾಡುತ್ತಿದ್ದ ಮುಂಬೈ ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಾ, ಹಿಂಸೆ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿರುವ ನಡುವೆಯೇ ಇದೀಗ ಅವರ ಪತ್ನಿ ಪೊಲೀಸ್ ರಕ್ಷಣೆ ಕೋರಿದ್ದಾರೆ.
ಕ್ರಾಂತಿ ರೆಡೆಕರ್ ವಾಂಖೆಡೆ ಅವರು ತಮ್ಮ ಪತಿ ಸಮೀರ್ ಮತ್ತು ಕುಟುಂಬ ಸದಸ್ಯರ ಸುರಕ್ಷತೆ ಅಪಾಯದಲ್ಲಿದೆ, ಆದ್ದರಿಂದ ಪೊಲೀಸ್ ರಕ್ಷಣೆ ಬೇಕು ಎಂದು ಅಳಲು ತೋಡಿಕೊಂಡಿದ್ದಾರೆ. ಸಾಲದು ಎಂಬುದಕ್ಕೆ ಇವರ ಮನೆಯ ಮುಂದೆ ಮಾಟಮಂತ್ರ ಮಾಡಿಸಲಾಗಿದೆ. ಮೂವರು ವ್ಯಕ್ತಿಗಳು ಬಂದು ಇದನ್ನು ಮಾಡಿರುವ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳೂ ಇವೆ. ನಮ್ಮ ಕುಟುಂಬಕ್ಕೆ ಭದ್ರತೆ ನೀಡಿ ಎಂದು ಅವರು ಕೋರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನೂ ಒದಗಿಸುವುದಾಗಿ ಹೇಳಿದ್ದಾರೆ.
ಆರ್ಯನ್ ಖಾನ್ ಡ್ರಗ್ಸ್ ಕೇಸ್ನಲ್ಲಿ ಸಿಲುಕಿದ ದಿನದಿಂದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಸಮೀರ್ ವಾಂಖೆಡೆ ವಿರುದ್ಧ ನಿರಂತರವಾಗಿ ಹಲವು ಆರೋಪಗಳನ್ನು ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಅವರ ಕುಟುಂಬಸ್ಥರನ್ನೂ ಎಳೆದು ತರಲಾಗಿದೆ. ಸರ್ಕಾರಿ ನೌಕರಿ ಪಡೆಯಲು ವಾಂಖೆಡೆ ನಕಲಿ ಪ್ರಮಾಣಪತ್ರ ಸಲ್ಲಿಸಲಾಗಿದೆ ಎಂದೂ ಆರೋಪಿಸಲಾಗುತ್ತಿದೆ. ಇವೆಲ್ಲವೂ ನಿರಾಧಾರ ಎಂದು ಇದಾಗಲೇ ವಾಖೆಂಡೆ ಕುಟುಂಬ ಸಾಬೀತು ಮಾಡಿದ್ದರೂ, ಅವರ ಹಾಗೂ ಕುಟುಂಬದ ಮೇಲೆ ಮಾನಸಿಕವಾಗಿ ಕಿರುಕುಳ ಮುಂದುವರೆದಿರುವ ಕಾರಣದಿಂದ ಸಲ್ಮಾನ್ ಪ್ರಕರಣ ಈಗ ಮುನ್ನೆಲೆಗೆ ಬರುತ್ತಿದೆ.
ಸಾಯುವ ಮುನ್ನ ಅಜ್ಜಿ ಇಂದಿರಾ ನನಗೊಂದು ವಿಷಯ ಹೇಳಿದ್ದರು ಎಂದು ಆ ದಿನಗಳ ನೆನೆದ ರಾಹುಲ್ಗಾಂಧಿ…
ಡಾ.ರಾಜ್ಕುಮಾರ್ ಉರುಫ್ ಮುತ್ತುರಾಜನಾದ ನಾನು ನನ್ನ ಮಗ ಮಾಸ್ಟರ್ ಲೋಹಿತನ ಹೆಸರನ್ನು…