ನವದೆಹಲಿ: ಉಡುಪಿಯಲ್ಲಿ ಶುರುವಾದ ಹಿಜಾಬ್ ವಿವಾದ ಕ್ಷಣ ಮಾತ್ರದಲ್ಲಿ ಜಗತ್ತಿಗೇ ವ್ಯಾಪಿಸಿಬಿಟ್ಟಿದೆ. ರಾಜ್ಯದ ಗಡಿ ದಾಟಿದ್ದ ಈ ವಿವಾದ, ಇದೀಗ ದೇಶದ ಗಡಿಯನ್ನೂ ದಾಟಿ ಪಾಕಿಸ್ತಾನವು ಭಾರತಕ್ಕೆ ಬುದ್ಧಿ ಹೇಳುವ ಮಟ್ಟಿಗೆ ಬೆಳೆದುನಿಂತಿದೆ!
ಒಂದೆಡೆ ಲಂಡನ್ನಲ್ಲಿ ನೆಲೆಸಿರುವ ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸುಫ್ಝಾಯ್ ಈ ಬಗ್ಗೆ ಮಾತನಾಡಿ, ಕರ್ನಾಟಕದ ಬೆಳವಣಿಗೆಯನ್ನು ಖಂಡಿಸಿದ್ದರೆ, ಇತ್ತ ಪಾಕಿಸ್ತಾನದ ಇಬ್ಬರು ಸಚಿವರು ಹಿಜಾಬ್ಗೆ ಅನುಮತಿ ನೀಡದ ಬಗ್ಗೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಮಾಹಿತಿ ಇಲಾಖೆ ಸಚಿವರಾಗಿರುವ ಫಾವದ್ ಚೌಧರಿ ಮತ್ತು ವಿದೇಶಾಂಗ ಇಲಾಖೆ ಸಚಿವ ಷಾ ಮೊಹಮ್ಮದ್ ಖುರೇಷಿ ಟ್ವೀಟ್ ಮಾಡಿ, ಕರ್ನಾಟಕದ ಈ ಬೆಳವಣಿಗೆ ಬಗ್ಗೆ ಭಾರಿ ಅಸಮಾಧಾನ ಹೊರಹಾಕಿದ್ದಾರೆ.
ಮಾಹಿತಿ ಇಲಾಖೆ ಸಚಿವರಾಗಿರುವ ಫಾವದ್ ಚೌಧರಿ ಮಾತನಾಡಿ, ಪ್ರಧಾನಿ ಮೋದಿಯವರ ಭಾರತದಲ್ಲಿ ಈಗೇನು ನಡೆಯುತ್ತಿದೆಯೋ ಅದು ಭಯಹುಟ್ಟಿಸುವಂತಿದೆ. ಅಸ್ಥಿರ ನಾಯಕತ್ವದಿಂದಾಗಿ ಭಾರತದ ಸಮಾಜ ಅತ್ಯಂತ ವೇಗವಾಗಿ ಅವನತಿಯಾಗುತ್ತಿದೆ ಎಂದಿದ್ದಾರೆ. ಇತರ ನಾಗರಿಕರು ಉಳಿದ ಉಡುಪುಗಳನ್ನು ಧರಿಸುವುದು ಹೇಗೆ ಅವರ ವೈಯಕ್ತಿಕ ಆಯ್ಕೆಯೋ, ಹಿಜಾಬ್ ಧರಿಸುವುದೂ ಕೂಡ ಮುಸ್ಲಿಂ ಹೆಣ್ಣುಮಕ್ಕಳ ವೈಯಕ್ತಿಕ ಆಯ್ಕೆ, ಬಟ್ಟೆಯ ವಿಷಯದಲ್ಲಿ ಏನೂ ಹೇಳಬಾರದು ಎಂದು ಬುದ್ಧಿ ಹೇಳಿದ್ದಾರೆ.
ವಿದೇಶಾಂಗ ಇಲಾಖೆ ಸಚಿವ ಶಾ ಮೊಹಮ್ಮದ್ ಖುರೇಷಿ ಟ್ವೀಟ್ ಮಾಡಿ, ಮುಸ್ಲಿಂ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವುದು ಮೂಲಭೂತ ಹಕ್ಕು ಮಾತ್ರವಲ್ಲದೇ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇದು ಮುಸ್ಲಿಮರ ಮೇಲೆ ಮಾಡುತ್ತಿರುವ ದಬ್ಬಾಳಿಕೆಯಾಗಿದೆ. ಮೂಲಭೂತ ಹಕ್ಕನ್ನು ನಿರಾಕರಿಸುವುದು ಮತ್ತು ಹಿಜಾಬ್ ಧರಿಸಿದ್ದಕ್ಕಾಗಿ ಅವರನ್ನು ಭಯಪಡಿಸುವುದು ದಬ್ಬಾಳಿಕೆಯಾಗಿದೆ. ಇದು ಭಾರರತದಲ್ಲಿ ಮುಸ್ಲಿಮರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವ ಭಾರತದ ಯೋಜನೆಯ ಒಂದು ಭಾಗ ಎಂದು ಜಗತ್ತು ಅರಿತುಕೊಳ್ಳಬೇಕು ಎಂದು ಟೀಕಿಸಿದ್ದಾರೆ.
Depriving Muslim girls of an education is a grave violation of fundamental human rights. To deny anyone this fundamental right & terrorise them for wearing a hijab is absolutely oppressive. World must realise this is part of Indian state plan of ghettoisation of Muslims.
— Shah Mahmood Qureshi (@SMQureshiPTI) February 9, 2022