ಹಾವೇರಿ: ಶಾಸಕ ಓಲೇಕಾರ್ಗೆ ಸಚಿವಸ್ಥಾನ ಕೊಡಲೇಬೇಕು, ಇಲ್ಲವಾದರೆ ಸಾಯುತ್ತೇನೆ ಎಂದ ಅಭಿಮಾನಿಗಳಿಬ್ಬರು ವಾಟರ್ ಟ್ಯಾಂಕ್ ಮೇಲೆ ಏರಿ ಕೆಲ ಸಮಯ ಆತಂಕ ಸೃಷ್ಟಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ ನಗರದ ಮುನ್ಸಿಪಲ್ ಮೈದಾನದಲ್ಲಿ ಈ ಘಟನೆ ಸಂಭವಿಸಿದೆ. ಚಂದ್ರಶೇಖರ ಹಳ್ಳಿಕೇರಿ ಹಾಗೂ ಭೀಮನಗೌಡ ಪಾಟೀಲ್ ಎಂಬ ಅಭಿಮಾನಿಗಳು ಟ್ಯಾಂಕ್ ಏರಿ ತುತ್ತ ತುದಿಯಲ್ಲಿ ಹೋಗಿದ್ದಾರೆ. ಇವರಿಬ್ಬರೂ ಹತ್ತಿಮತ್ತೂರು ಗ್ರಾಮದವರಾಗಿದ್ದಾರೆ.
ಪಕ್ಷದ ಬಾವುಟ ಮೈಗೆ ಸುತ್ತಿಕೊಂಡು ಟ್ಯಾಂಕ್ ಹತ್ತಿರುವ ಇಬ್ಬರೂ, ನೆಹರು ಓಲೇಕಾರ ಪರ ಘೋಷಣೆ ಕೂಗುತ್ತ ಟ್ಯಾಂಕ್ ಏರಿದರು. ನಂತರ ಸಚಿವಸ್ಥಾನ ಸಿಗುವವರೆಗೂ ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಬಂದ ಪೊಲೀಸರಿಂದ ಪ್ರತಿಭಟನಾ ನಿರತ ಯುವಕರ ಮನವನ್ನು ಒಲಿಸುವಷ್ಟರಲ್ಲಿ ಸಾಕೋ ಸಾಕಾಯಿತು.
ನಿಮ್ಮ ಆಗ್ರಹ ಸರ್ಕಾರದ ಗಮನಕ್ಕೆ ತರುತ್ತೇವೆ. ದಯವಿಟ್ಟು ಕೆಳಗಿಳಿದು ಬನ್ನಿ ಎಂದು ಪಿ.ಎಸ್ ಐ ಹೊಸಮನಿ ಮನವಿ ಮಾಡಿದರು. ಆದರೆ ಯುವಕರು ಜಿಲ್ಲಾಧಿಕಾರಿಗಳು ಇಲ್ಲಿಗೆ ಬರಲಿ ಎಂದು ಆಗ್ರಹಿಸಿದರು. ನಂತರ ಸ್ಥಳಕ್ಕೆ ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕರೆಸಲಾಯಿತು.
ನಂತರ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ನಿಮ್ಮ ಮನವಿಯನ್ನು ಕೂಡಲೆ ಮುಖ್ಯಮಂತ್ರಿಗಳಿಗೆ ತಿಳಿಸುತ್ತೇವೆ. ಕೆಳಗೆ ಇಳಿದು ಬನ್ನಿ ಎಂದರು. ನಂತರ ಓಲೇಕಾರ್ ಭಾವಚಿತ್ರ ಹಿಡಿದು ಇಬ್ಬರು ಯುವಕರು ಕೆಳಕ್ಕೆ ಬಂದರು.
ಇಲ್ಲಿದೆ ನೋಡಿ ವಿಡಿಯೋ:
ಶಾಸಕ ಒಲೇಕಾರ್ಗೆ ಸಚಿವಸ್ಥಾನ ಕೊಡಲೇಬೇಕು, ಇಲ್ಲವಾದರೆ ಸಾಯುತ್ತೇನೆ ಎಂದ ಅಭಿಮಾನಿಗಳಿಬ್ಬರು ವಾಟರ್ ಟ್ಯಾಂಕ್ ಮೇಲೆ ಏರಿ ಕೆಲ ಸಮಯ ಆತಂಕ ಸೃಷ್ಟಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. pic.twitter.com/QlNqai8ElY
— Vijayavani (@VVani4U) August 3, 2021
ಸಿಎಂ ಹುದ್ದೆಯಿಂದ ಕೆಳಗಿಳಿಯುತ್ತಲೇ ಶುರುವಾಯ್ತು ಸಂಕಟ: ಬಿಎಸ್ವೈಗೆ ಹೈಕೋರ್ಟ್ ನೋಟಿಸ್
ಇಂದು ರಾತ್ರಿಯಿಂದ ಸ್ಟ್ರಿಕ್ಟ್ ನೈಟ್ ಕರ್ಫ್ಯೂ: ರಸ್ತೆಗಿಳಿಯೋ ಮುನ್ನ ಎಚ್ಚರ- ನಿಯಮಗಳೇನು?