ನವದೆಹಲಿ: ಭಾರತ ಮತ್ತು ಚೀನಾ ಗಡಿಬಿಕ್ಕಟ್ಟಿನ ವಿಷಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಜಗತ್ತಿನ ಯಾವ ಶಕ್ತಿಯೂ ಭಾರತೀಯ ಯೋಧರನ್ನು ಗಡಿಭಾಗದಲ್ಲಿ ಪಹರೆ ನಡೆಸದಂತೆ ತಡೆಯಲಾರದು ಎಂದರು.
ಪೂರ್ವ ಲಡಾಖ್ನ ಗಡಿ ವಾಸ್ತವ ರೇಖೆಯ ಬಳಿ ಭಾರತೀಯ ಸೇನೆಯ ಗಸ್ತು ಮತ್ತು ನಿಲುಗಡೆಯನ್ನು ತಡೆಯಲು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ) ಹಲವಾರು ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಆದರೆ ಜಗತ್ತಿನಲ್ಲಿರುವ ಯಾವುದೇ ಶಕ್ತಿಯು ಭಾರತೀಯ ಸೈನಿಕರನ್ನು ತಡೆಯಲು ಸಾಧ್ಯವಿಲ್ಲ, ನಮ್ಮ ಸೈನಿಕರ ನಿಲುಗಡೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ಭಾರತ ಮತ್ತು ಚೀನಾ ಮಧ್ಯೆ ರಾಜತಾಂತ್ರಿಕ ಹಾಗೂ ಮಿಲಿಟರಿ ಮಟ್ಟದಲ್ಲಿ ಸಭೆಗಳು ನಡೆದಿರುವ ಹಿನ್ನೆಲೆಯಲ್ಲಿ ಭಾರತೀಯ ಸೈನಿಕರು ಮತ್ತೆ ಗಡಿಪಹರೆ ನಡೆಸುತ್ತಾರಾ ಎಂದು ಮಾಜಿ ರಕ್ಷಣಾ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎ.ಕೆ. ಆ್ಯಂಟನಿ ಅವರು ಕೇಳಿದ ಪ್ರಶ್ನೆಗೆ ರಾಜನಾಥ್ ಸಿಂಗ್ ಉತ್ತರಿಸಿದರು.
“ದೇಶದ ಹಿತಾಸಕ್ತಿಗೋಸ್ಕರ ಯಾವುದೇ ಅಪಾಯಕಾರಿ ಮತ್ತು ಕಠಿಣ ನಿರ್ಧಾರ ತೆಗೆದುಕೊಳ್ಳಲು ಭಾರತ ಹಿಂದೆ ಮುಂದೆ ನೋಡುವುದಿಲ್ಲ. ಮಾತುಕತೆ ನಡೆಯುತ್ತಿರುವ ವೇಳೆಯಲ್ಲೂ ಚೀನಾ ತನ್ನ ಬುದ್ಧಿ ತೋರಿದೆ. ಆಗಸ್ಟ್ 29-30ರ ರಾತ್ರಿ ಚೀನೀ ಸೈನಿಕರು ಪಾಂಗಾಂಗ್ ಸರೋವರದ ದಕ್ಷಿಣ ದಂಡೆಯ ಭಾಗದಲ್ಲಿ ಅತಿಕ್ರಮಣಕ್ಕೆ ಪ್ರಯತ್ನ ಮಾಡಿರುವುದು ಎಲ್ಲರೂ ಗಮನಿಸಬೇಕಾದದ್ದು ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಚೀನಾದಿಂದ 38 ಸಾವಿರ ಚ.ಕಿ.ಮೀ ಜಾಗ ಅತಿಕ್ರಮಣ: ರಾಜ್ಯಸಭೆಗೆ ಮಾಹಿತಿ
ಎರಡೂ ಕಡೆಯ ಸೇನಾ ಕಮಾಂಡರ್ಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿರುವ ವೇಳೆಯೂ ಲಡಾಖ್ನಲ್ಲಿ ಚೀನಾ ಪದೇಪದೇ ಮಿಲಿಟರಿ ಕಾರ್ಯಾಚರಣೆ ನಡೆಸುವ ಮೂಲಕ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಅಗೌರವ ತೋರಿದೆ. ಎಲ್ಎಸಿಯಾದ್ಯಂತ ಚೀನಾ ಸೇನೆ ಅಧಿಕ ಪ್ರಮಾಣದ ತುಕಡಿಗಳನ್ನ ನಿಯೋಜಿಸಿದೆ. ಪೂರ್ವ ಲಡಾಖ್ನ ಗೋಗ್ರಾ, ಕೋಂಕಾ ಲಾ, ಪಾಂಗೋಂಗ್ ಸರೋವರದ ಉತ್ತಮ ಮತ್ತು ದಕ್ಷಿಣ ಭಾಗಗಳಲ್ಲಿ ಹಲವು ಘರ್ಷಣೆಗಳು ನಡೆದಿವೆ. ಚೀನಾಕ್ಕೆ ಪ್ರತಿಯಾಗಿ ನಮ್ಮ ಸೈನಿಕರನ್ನೂ ನಿಯೋಜಿಸಿದ್ದೇವೆ ಎಂದರು.
ರಾಜ್ಯಸಭಾ ಸಭಾಪತಿ ಎಂ ವೆಂಕಯ್ಯ ನಾಯ್ಡು, ಎಲ್ಲಾ ಪಕ್ಷಗಳ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯತಂತ್ರವನ್ನು ಸರ್ಕಾರ ಸೃಷ್ಟಿಸಬೇಕು ಮತ್ತು ಎಲ್ಲರಿಗೂ ಗಡಿಯಲ್ಲಿ ಏನು ನಡೆಯುತ್ತಿದೆ ಎಂಬುದು ಕಾಲಕಾಲಕ್ಕೆ ಗೊತ್ತಾಗಬೇಕು ಎಂದರು.
“ಭಾರತದ ವಿರುದ್ಧ ಪಿತೂರಿ ರೂಪಿಸಲು ಕೆಲ ವಿದೇಶೀ ಮಾಧ್ಯಮಗಳು ಕೆಲ ಭಾರತೀಯ ನಾಯಕರ ಹೇಳಿಕೆಗಳನ್ನ ಬಳಕೆ ಮಾಡಿಕೊಳ್ಳುತ್ತಿವೆ. ನಮ್ಮ ನಾಯಕರು ಅಂಥ ಹೇಳಿಕೆಗಳನ್ನ ಕೊಡಬಾರದು, ನಾವೆಲ್ಲರೂ ಒಟ್ಟಿಗಿದ್ದು ಒಂದೇ ಧ್ವನಿಯಲ್ಲಿ ಮಾತನಾಡಬೇಕು” ಎಂದರು.
ಪ್ರಧಾನಿಗೆ ‘ನಿರುದ್ಯೋಗ ದಿನದ ಶುಭಾಶಯ’ ಹೇಳಿ ಟ್ರೋಲಾದ ದಿನೇಶ್ ಗುಂಡೂರಾವ್
ಈ ವಾಚ್ ಇದ್ರೆ ಸಾಕು, ಇನ್ಮುಂದೆ ಶಾಪಿಂಗ್ ಮಾಡ್ಬೋದು, ಯಾವುದೇ ಆ್ಯಪ್ ಬೇಡ, ಕಾರ್ಡೂ ಬೇಡ!