More

    ಮದುವೆಯಾಗದೇ ಹುಚ್ಚನಾದವನಿಂದ ಬರ್ಬರವಾಗಿ ಕೊಲೆಯಾದರು ನಾಲ್ಕು ಮಂದಿ!

    ಮಂಜೇಶ್ವರ (ಕಾಸರಗೋಡು): ಮದುವೆಯಾಗದೇ ಹುಚ್ಚು ಬಿಡುವುದಿಲ್ಲ, ಹುಚ್ಚನಾದರೆ ಮದುವೆಯಾಗುವುದಿಲ್ಲ ಎಂಬ ತೀರಾ ಹಳೆಯ ನಾಣ್ಣುಡಿ ಇದೆ. ಆದರೆ ಮದುವೆಯಾಗದೇ ಮಾನಸಿಕವಾಗಿ ಅಸ್ವಸ್ಥನಾದ ವ್ಯಕ್ತಿಯೊಬ್ಬ ತನ್ನ ಕುಟುಂಬದ ನಾಲ್ವರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ!

    ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಜಿಲ್ಲೆಯಾದ ಕಾಸರಗೋಡಿನ ಬಾಯಾರು ಸಮೀಪದ ಕನಿಯಾಲ ಗುರುಕುಮೇರಿ ಎಂಬಲ್ಲಿ ಈ ಘಟನೆ ನಡೆದಿದೆ. ಉದಯ್‌ ಎಂಬ ಮಾನಸಿಕ ಅಸ್ವಸ್ಥ ಈ ಕೆಲಸ ಮಾಡಿದ್ದಾನೆ. ಈತನ ಹುಚ್ಚಿಗೆ ಚಿಕ್ಕಮ್ಮ ಹಾಗೂ ಮೂವರು ಮಾವಂದಿರು ಬಲಿಯಾಗಿದ್ದಾರೆ.

    ಮೃತರನ್ನು ಬಾಬು (65), ವಿಠಲ (60), ಸದಾಶಿವ (55) ಸಹೋದರರು ಹಾಗೂ ಅವರ ಸಹೋದರಿ ದೇವಕಿ (58) ಎಂದು ಗುರುತಿಸಲಾಗಿದೆ.

    ಉದಯ್‌ಗೆ ಇನ್ನೂ ಮದುವೆಯಾಗಿರಲಿಲ್ಲ. ಮೊದಲೇ ಮಾನಸಿಕವಾಗಿ ಅಷ್ಟೊಂದು ಸ್ಥಿಮಿತದಲ್ಲಿ ಇಲ್ಲದಿದ್ದ ಈತ ಮದುವೆಯಾಗದೇ ಉಳಿದಿದ್ದ ಕಾರಣ, ಮತ್ತಷ್ಟು ಹುಚ್ಚನಾಗಿದ್ದ. ಇವನಿಗೆ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ನೀಡಲಾಗುತ್ತಿತ್ತು.

    ಚಿಕಿತ್ಸೆ ಕೊಡುತ್ತಿದ್ದರೂ ಸದಾ ಮದುವೆಯ ಬಗ್ಗೆ ಈತ ಮಾತನಾಡುತ್ತಿದ್ದ. ಆದರೆ ಈತನ ಹುಚ್ಚಿನಿಂದಾಗಿ ಮನೆಯವರು ಮದುವೆ ಮಾಡಿಸಲು ಹಿಂದೇಟು ಹಾಕುತ್ತಿದ್ದರು. ಆದರೆ ತನಗೆ ಮದುವೆ ಮಾಡಿಸಿಲ್ಲ ಎಂದು ತನ್ನ ಸಂಬಂಧಿಗಳೊಂದಿಗೆ ಆಗಾಗ ಉದಯ್‌ ಜಗಳ ಮಾಡುತ್ತಿದ್ದ ಎನ್ನಲಾಗಿದೆ.

    ಇದನ್ನೂ ಓದಿ: ಬಳಕೆದಾರರ ಮಾಹಿತಿ ಕಳುವು: ಟ್ವಿಟರ್‌ಗೆ 1,876 ಕೋಟಿ ರೂ ದಂಡ!

    ತನಗೆ ಮದುವೆ ಮಾಡಿಸದೇ ಹೋದರೆ ಕೊಲೆ ಮಾಡುವುದಾಗಿ ಕೆಲವು ದಿನಗಳ ಹಿಂದೆ ಆರೋಪಿ ಎಲ್ಲರನ್ನೂ ಬೆದರಿಕೆ ಹಾಕಿದ್ದ. ಆದರೆ ಸೋಮವಾರ ರಾತ್ರಿ ಮನೆಗೆ ಬಂದ ಆರೋಪಿ ಮನೆಯಲ್ಲಿದ್ದ ಕೊಡಲಿಯನ್ನು ಹಿಡಿದು ಮನೆಯಲ್ಲಿದ್ದವರ ಮೇಲೆ ಏಕಾಏಕಿ ಪ್ರಹಾರ ಮಾಡಿದ್ದಾನೆ. ನಾಲ್ವರ ಮೇಲೆ ಎರ್ರಾಬಿರ್ರಿಯಾಗಿ ದಾಳಿ ಮಾಡಿದ್ದಾನೆ. ಆತನ ಏಟಿಗೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ನಾಲ್ವರ ರಕ್ತ ಹರಿಯುತ್ತಿದ್ದರೂ ಸಮಾಧಾನವಾಗದ ಹಿನ್ನೆಲೆಯಲ್ಲಿ ತನ್ನ ತಾಯಿಯನ್ನೂ ಕೊಲೆ ಮಾಡಲು ಹೋಗಿದ್ದ. ಆದರೆ ಅವರು ಹೇಗೋ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಕಿರುಚಾಟ ಕೇಳಿ ಅಕ್ಕಪಕ್ಕದವರು ಬಂದಾಗ ಸುಮಾರು ಅರ್ಧ ಕಿಲೋಮೀಟರ್ ದೂರ ಓಡಿಹೋಗಿದ್ದಾನೆ.

    ನಂತರ ಸ್ಥಳೀಯರು ಆಟೊ ಸಹಾಯ ಪಡೆದು ಆತನನ್ನು ಹಿಡಿದುಕೊಂಡು ಬಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

    ಬಾರ್‌ ಓಪನ್‌ ಆದ್ರೂ ಸ್ಯಾನಿಟೈಸರ್‌ ಹೀರಿ ಪಾರ್ಟಿ- ಕುಡುಕರ ಹೊಸರೂಪಕ್ಕೆ ಪೊಲೀಸರು ಸುಸ್ತು!

    ಅರ್ಧ ತಿಂದ ಸಾಂಬಾರಿನಲ್ಲಿತ್ತು ಅರ್ಧ ಹಲ್ಲಿ- ಉಳಿದದ್ದು ಹೋದದ್ದೆಲ್ಲಿ? ದಾಖಲಾಯ್ತು ಎಫ್‌ಐಆರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts