ನವದೆಹಲಿ: ಬಣ್ಣದಲ್ಲೇನಿದೆ ಸ್ವಾಮಿ? ಕಪ್ಪಗೆ ಇರುವವರು ಸುಂದರಿಯರಲ್ವಾ? ಕೃಷ್ಣಸುಂದರಿಯರು ಎಷ್ಟು ಮಂದಿ ಬೇಕು ನಿಮಗೆ? ಬಣ್ಣ ಬಿಳಿ ಇದ್ದು ಗುಣ ಕಪ್ಪಗಿದ್ರೂ ಅಡ್ಡಿಲ್ವಾ? ಬಿಳಿ ಬಿಳಿ ಎಂದು ಯಾಕಪ್ಪಾ ಸಾಯ್ತಿರಾ….? ಭಾರತದ ಬಹುತೇಕ ಸಾಧಕಿಯರನ್ನೊಮ್ಮೆ ನೋಡಿಬಿಡಿ… ಸೌಂದರ್ಯದ ಬೆನ್ನುಹತ್ತಿದ್ದರೆ ಇವರ್ಯಾರೂ ಅಷ್ಟು ಉನ್ನತ ಸ್ಥಾನಕ್ಕೆ ಏರುತ್ತಲೇ ಇರಲಿಲ್ಲ…
ಹೀಗೆ ಯಾರು ಏನೇ ಹೇಳಲಿ… ಹುಡುಗಿ ಅಥವಾ ಸುಂದರಿ ಎಂಬ ಶಬ್ದ ಬಂದಾಕ್ಷಣ ಬಹುತೇಕ ಪುರುಷರು ಮಾತ್ರವಲ್ಲ ಬಹುತೇಕ ಮಂದಿಯ ಕಣ್ಣಮುಂದೆ ಬರುವುದು ಬೆಳ್ಳಗೆ ಜತೆಗೆ ತೆಳ್ಳಗಿನ ಬಳುಕುವ ಹುಡುಗಿ. ವಯಸ್ಸು 40 ದಾಟಿದರೂ ಈ ಶ್ವೇತ ಸುಂದರಿ ಸಿಗಲಿಲ್ಲ ಎನ್ನುವ ಕಾರಣಕ್ಕೆ ಮದುವೆಯಾಗದೇ ಇರುವವರು ಎಷ್ಟೋ ಮಂದಿ ಇದ್ದಾರೆ!
ಹಾಗೆಂದು ಈಗಿನ ಯುವತಿಯರೇನೂ ಕಮ್ಮಿ ಇಲ್ಲ ಎನ್ನಿ. ತಮ್ಮ ಕನಸಿನ ’ಹ್ಯಾಂಡ್ಸಮ್ ಹುಡುಗ’ ಸಿಗದ ಕಾರಣ, ಮದುವೆಯನ್ನು ಮುಂದಕ್ಕೆ ಹಾಕುವವರೂ ಅನೇಕ ಮಂದಿ ಇದ್ದಾರೆ.
ಕನಸಿಕ ಹುಡುಗನ ವಿಷಯ ಬದಿಗಿಟ್ಟು, ಹುಡುಗಿಯರ ಕುರಿತು ನಡೆದಿರುವ ವಿಚಿತ್ರ ಸಮೀಕ್ಷೆಯೊಂದು ಇದೀಗ ಬಹಿರಂಗೊಂಡಿದೆ. .’ಇಂಡಿಯನ್ ಬ್ಯೂಟಿ ಟೆಸ್ಟ್ ಸ್ಟಡಿ’ ಎಂಬ ಸಂಸ್ಥೆ ಈ ಸಮೀಕ್ಷೆ ಮಾಡಿದೆ. ಈ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ನಡೆಯುತ್ತಿರುವ ಅರೇಂಜ್ಡ್ ಮದುವೆಗಳಲ್ಲಿ ಶೇ.96ರಷ್ಟು ಯುವತಿಯರು ತಮ್ಮ ಮುಖದ ಬಣ್ಣದಿಂದಾಗಿ ತಿರಸ್ಕೃತಗೊಳ್ಳುತ್ತಿದ್ದಾರಂತೆ!
ಏಕೆಂದರೆ ಮದುವೆಯಾಗುವ ಹುಡುಗನಿಗೆ ಮಾತ್ರವಲ್ಲದೇ ಆತನ ಕುಟುಂಬಸ್ಥರಿಗೂ ಹುಡುಗಿ ನೋಡಲು ಬೆಳ್ಳಗಿರಬೇಕು, ಸುಂದರವಾಗಿರಬೇಕು ಎಂಬ ಡಿಮಾಂಡ್ ಇಡುತ್ತಿದ್ದಾರಂತೆ, ಅಷ್ಟೇ ಅಲ್ಲದೇ, ಉದ್ದ ಕೂದಲಿರಬೇಕು, ಮೂಗು ಉದ್ದವಿರಬೇಕು, ಮುಖ ವಿ ಆಕಾರದಲ್ಲಿ ಖಂಡಿತವಾಗಿಯೂ ಇರಲೇಬಾರದು ಎಂದು ಹೇಳುತ್ತಿರುವುದರಿಂದ ಇಂಥ ಹುಡುಗಿಯರು ರಿಜೆಕ್ಟ್ ಆಗುವುದೇ ಹೆಚ್ಚು ಎಂದಿದೆ ಈ ಸಮೀಕ್ಷೆ.
1057 ಮಂದಿ ಯುವತಿಯರನ್ನು ಸಮೀಕ್ಷೆಗೆ ಒಳಪಡಿಸಿದ್ದ ಈ ಸಂಸ್ಥೆ, ಶೇ.78ರಷ್ಟು ಯುವತಿಯರು ನೋಡಲು ತೆಳ್ಳಗೆ, ಬೆಳ್ಳಗೆ…. ಇಲ್ಲ ಎನ್ನುವ ಕಾರಣಕ್ಕೆ ತಿರಸ್ಕೃತಗೊಂಡಿರುವುದಾಗಿ ತಿಳಿಸಿದ್ದಾರೆ.
ಸಂಸ್ಥೆ ಹೇಳುವ ಪ್ರಕಾರ, ಈಗಲೂ ಭಾರತದಲ್ಲಿ ಶೇ.90ರಷ್ಟು ಮದುವೆ ಅರೇಂಜ್ಡ್ ಆಗಿದ್ದು, ಈ ಕಾರಣದಿಂದಾಗಿ ಹೆಣ್ಣುಮಕ್ಕಳನ್ನು ತಿರಸ್ಕಾರ ಮಾಡುತ್ತಿದ್ದಾರೆ. ಮಾತ್ರವಲ್ಲದೇ ಮ್ಯಾಟ್ರಿಮೊನಿ ವೆಬ್ಸೈಟ್ಗಳು, ದಲ್ಲಾಳಿಗಳು… ಹೀಗೆ ಯಾರೇ ಆದರೂ ಇದೇ ಬೇಡಿಕೆ ಇಡುತ್ತಿದ್ದಾರೆ ಎಂದು ಅದರಲ್ಲಿ ಉಲ್ಲೇಖವಾಗಿದೆ.
ಹೆಣ್ಣುಮಕ್ಕಳು ತಮ್ಮ ಮುಖವನ್ನು ಬೆಳ್ಳಗೆ ಮಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ, ಮಾತ್ರವಲ್ಲದೇ ತೂಕ ಕಡಿಮೆ ಮಾಡಿಕೊಳ್ಳಲು ಜಿಮ್ಗಳ ಮೊರೆ ಹೋಗುತ್ತಿದ್ದಾರೆ. ವ್ಯಾಯಾಮ, ಆಹಾರದಲ್ಲಿ ನಿಯಂತ್ರಣ ಇತ್ಯಾದಿ ಮಾಡಿ ತೂಕವನ್ನೇನೋ ಕೊಂಚ ಕಡಿಮೆ ಮಾಡಿಕೊಳ್ಳಬಹುದು. ಆದರೆ ಮುಖವನ್ನು ಬೆಳ್ಳಗೆ ಮಾಡಿಕೊಳ್ಳಲು ಜಾಹೀರಾತುಗಳ ಮೊರೆ ಹೋಗಿ ಇರುವ ಸೌಂದರ್ಯವನ್ನೂ ಕಳೆದುಕೊಂಡು ಇನ್ನಿಲ್ಲದ ಕಾಯಿಲೆಗಳನ್ನು ತಂದುಕೊಳ್ಳುತ್ತಿರುವುದು ದುರದೃಷ್ಟಕರ ಎನ್ನುತ್ತಾರೆ ಶಾದಿ ಡಾಟ್ ಕಾಮ್ನ ಸಿಇಒ ಅನುಪಮ್ ಮಿತ್ತಲ್.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಕರ್ನಾಟಕ ವೆಡ್ಸ್ ಕೇರಳ- ಮದುವೆಗೆ ಅಡ್ಡಿಬಂತು ಕರೊನಾ ರಿಪೋರ್ಟ್: ಮದುಮಕ್ಕಳು ಹೈರಾಣ
ಅಣ್ಣ ಬುದ್ಧಿಹೇಳಿದ ಎಂದು ತಮ್ಮನ ಆತ್ಮಹತ್ಯೆ… ಸಾವಿನ ಸುದ್ದಿ ಕೇಳಿ ಅಣ್ಣನೂ ನೇಣಿಗೆ ಶರಣು!
VIDEO: ಶಿವಾಜಿ ಪ್ರತಿಮೆ ಅನಾವರಣಕ್ಕೆ ಪೊಲೀಸರು ತಡೆದಾಗ ಪ್ರಕೃತಿಯಿಂದಲೇ ನಡೆಯಿತು ಈ ವಿಸ್ಮಯ!