ಇಟಾನಗರ (ಅರುಣಾಚಲಪ್ರದೇಶ): ಜೈಲಿನಲ್ಲಿದ್ದ ಏಳು ಮಂದಿ ವಿಚಾರಣಾಧೀನ ಕೈದಿಗಳು ಭದ್ರತಾ ಸಿಬ್ಬಂದಿಯ ಮುಖಕ್ಕೆ ಖಾರದ ಪುಡಿ ಎರಚಿ ಜೈಲಿನಿಂದ ತಪ್ಪಿಸಿಕೊಂಡಿರುವ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಪೂರ್ವ ಸಿಯಾಂಗ್ ಜಿಲ್ಲೆಯ ಪಾಸಿಘಾಟ್ ಜೈಲಿನ ಐವರು ಗಾರ್ಡ್ಗಳು ಹಲ್ಲೆಗೊಳಗಾಗಿದ್ದಾರೆ. ಕೈದಿಗಳಿಗೆ ರಾತ್ರಿಯ ಊಟ ಪೂರೈಸಲೆಂದು ಜೈಲಿನ ಲಾಕಪ್ ತೆರೆದ ವೇಳೆ ಈ ಘಟನೆ ಸಂಭವಿಸಿದೆ.
ಅಭಿಜಿತ್ ಗೊಗೋಯ್, ತಾರೋ ಹಮಾಮ್, ಕಲಾಂ ಅಪಂಗ್, ತಾಲುಮ್ ಪನೀಯಿಂಗ್, ಸುಭಾಷ್ ಮಂಡಲ್, ರಾಜಾ ತಾಯೆಂಗ್ ಮತ್ತು ದನಿ ಗಮ್ಲಿನ್ ಜೈಲಿನಿಂದ ಪರಾರಿಯಾಗಿರುವ ಕೈದಿಗಳು.
ಜೈಲಿನಲ್ಲಿ 94 ಕೈದಿಗಳಿದ್ದರು. ಭಾನುವಾರ ರಾತ್ರಿ 7.30ರ ವೇಳೆಗೆ ಊಟ ನೀಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ದಾಳಿ ನಡೆದ ವೇಳೆ 10 ಮಂದಿ ಸೆಕ್ಯುರಿಟಿ ಗಾರ್ಡ್ಗಳು ಕಾರ್ಯ ನಿರ್ವಹಿಸುತ್ತಿದ್ದರು. ಪರಾರಿಯಾಗಿರುವ ಕೈದಿಗಳ ಮಾಹಿತಿಯನ್ನು ಎಲ್ಲ ಪೊಲೀಸ್ ಠಾಣೆಗಳಿಗೂ ಕಳುಹಿಸಲಾಗಿದ್ದು, ಅವರನ್ನು ಹುಡುಕಲು ಪೊಲೀಸರು ಮುಂದಾಗಿದ್ದಾರೆ.
ಈ ಏಳು ಕೈದಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಅವರ ಪತ್ತೆಗಾಗಿ ಬಲೆ ಬೀಸಲಾಗಿದೆ.
ಆಫೀಸ್ನಲ್ಲಿ ಸಭ್ಯನಂತಿರುವ ಪತಿ ಮನೆಯಲ್ಲಿ ರಾಕ್ಷಸನಂತೆ ವರ್ತಿಸುತ್ತಾರೆ- ನಾನೇನು ಮಾಡಲಿ?
VIDEO: ಮದುವೆ ಡ್ರೆಸ್ನಲ್ಲಿ ಅಜ್ಜಿ ಮಿಂಚಿಂಗ್- 70 ವರ್ಷಗಳ ನಂತರ ಈಡೇರಿತು ಆಸೆ: ಕಣ್ಣೀರಾದ ವೃದ್ಧೆ