ಲಖನೌ: ಪಂಚರಾಜ್ಯಗಳ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಯಾವ ನಾಯಕರು ಯಾವ ಪಕ್ಷದಿಂದ ಯಾವ ಪಕ್ಷಕ್ಕೆ ಹಾರುತ್ತಾರೋ ಹೇಳುವುದೇ ಕಷ್ಟವಾಗಿದೆ. ಬಿಜೆಪಿಯ ಸ್ವಾಮಿ ಪ್ರಸಾದ್ ಮೌರ್ಯ ಸೇರಿದಂತೆ ಕೆಲ ಸಚಿವರು, ಶಾಸಕರು ಕಾಂಗ್ರೆಸ್ ಸೇರಿ ಬಿಜೆಪಿಗೆ ಶಾಕ್ ಕೊಟ್ಟಿದ್ದು ಒಂದೆಡೆಯಾದರೆ, ಇದೀಗ ಭಾರಿ ಕುತೂಹಲದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಬಿಟ್ಟು ಕೇಂದ್ರದ ಮಾಜಿ ಸಚಿವ ಆರ್ಪಿಎನ್ ಸಿಂಗ್ ರಾತ್ರೋರಾತ್ರಿ ಬಿಜೆಪಿ ಸೇರಿದ್ದಾರೆ.
ತುಂಬಾ ಕುತೂಹಲದ ಸಂಗತಿ ಏನೆಂದರೆ ಸಿಂಗ್ ಅವರು ಕಳೆದ 32 ವರ್ಷಗಳಿಂದ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡವರು. ಅಷ್ಟೇ ಅಲ್ಲದೇ, ಕಾಂಗ್ರೆಸ್ ಪಕ್ಷ ಸೋಮವಾರ (ಜ.2) ಅಷ್ಟೇ ಸಿಂಗ್ ಅವರನ್ನು ಉತ್ತರಪ್ರದೇಶ ಚುನಾವಣೆಯ ಸ್ಟಾರ್ ಪ್ರಚಾರಕರಾಗಿ ನೇಮಕ ಮಾಡಿತ್ತು. ಆದರೆ ದಿಢೀರ್ ಎಂದು ದಿನ ಬೆಳಗಾಗುವುದರೊಳಗೆ ಸಿಂಗ್ ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿ ಕೈ ಹಿಡಿದಿದ್ದಾರೆ. ಈ ಕುರಿತು ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದು, ಅದನ್ನು ಟ್ವಿಟರ್ನಲ್ಲೂ ಹಂಚಿಕೊಂಡಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಇಂದಿನಿಂದ ಹೊಸ ಅಧ್ಯಾಯ ಆರಂಭಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ಇವರ ಜತೆಗೆ ಉತ್ತರಪ್ರದೇಶ ಕಾಂಗ್ರೆಸ್ ವಕ್ತಾರ ಶಶಿ ವಾಲಿ ಹಾಗೂ ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ರಾಜೇಂದ್ರ ಆಹ್ವಾನ್ ಕೂಡ ಬಿಜೆಪಿ ಸೇರಿಕೊಂಡರು. ಎಲ್ಲರನ್ನೂ ಇಂದು ಬೆಳಗ್ಗೆ ಬಿಜೆಪಿಯ ಬಾವುಟ ನೀಡಿ ಧರ್ಮೇಂದ್ರ ಪ್ರಧಾನ್ ಅವರು ಸಿಂಗ್ ಅವರನ್ನು ಬರಮಾಡಿಕೊಂಡರು. ಈ ವೇಳೆ ಕೇಂದ್ರ ಸಚಿವರಾದ ಜ್ಯೋತಿರಾಧಿತ್ಯ ಸಿಂಧಿಯಾ, ಅನುರಾಗ್ ಠಾಕೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
‘ನಾನು ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಪಕ್ಷದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ. ಈ ಹಿಂದೆ ಇರುವ ಸ್ಥಿತಿಯಲ್ಲೇ ಈಗಲೂ ಇದೆ. ದೇಶದ ಅಭಿವೃದ್ಧಿ ಹಿತಾಸಕ್ತಿಯಿಂದ ನಾನು ಬಿಜೆಪಿ ಸೇರುತ್ತಿರುವೆ. ಪ್ರಧಾನಿ ಮೋದಿ ಅವರ ಮುಂದಾಳತ್ವದಲ್ಲಿ ಪಕ್ಷದ ಕಾರ್ಯಕರ್ತನಾಗಿ ಸೇವೆ ಸಲ್ಲಿಸಲಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.
ಅಂದಹಾಗೆ ಸಿಂಗ್ ಅವರು ಕಾಂಗ್ರೆಸ್ನಿಂದ ಮೂರು ಅವಧಿಗೆ ಶಾಸಕರಾಗಿದ್ದರು. 2009ರಲ್ಲಿ ಉತ್ತರಪ್ರದೇಶ ಖುಷಿ ನಗರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದರು.
ಅಕ್ಕ ಮೃತಪಟ್ಟರೆ ಆಕೆಯ ಮಕ್ಕಳಿಗೂ ನಮ್ಮ ತಂದೆಯ ಆಸ್ತಿಯಲ್ಲಿ ಪಾಲು ಕೊಡಬೇಕಾ?