ಚಿಕ್ಕಮಗಳೂರು: ಮುಂದಿನ ದಿನಗಳಲ್ಲಿ ಭಾರತ ಶಕ್ತಿಶಾಲಿ, ಬಲಿಷ್ಠ, ಸ್ವಾಭಿಮಾನಿಯಾಗಿ ಹೊರಹೊಮ್ಮಬೇಕಾದರೆ ಬಿಜೆಪಿ ಪಕ್ಷದ ಕೈಗೆ ಅಧಿಕಾರ ಕೊಡಬೇಕು. ಜೊತೆಗೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ನಗರದ ಹೊರವಲಯದ ಗವನಹಳ್ಳಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ಕೇವಲ ಬಿಜೆಪಿ ಕಾರ್ಯಕರ್ತರ ಅಭಿಪ್ರಾಯವಲ್ಲ. ದೇಶದಲ್ಲಿರುವ ಪ್ರತಿಯೊಬ್ಬ ರಾಷ್ಟ್ರ ಭಕ್ತರೂ ಕೂಡ ಈ ದೇಶಕ್ಕೆ ಒಳ್ಳೆಯದಾಗಬೇಕಾದರೆ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎನ್ನುತ್ತಿದ್ದಾರೆ ಎಂದರು.
ಉಡುಪಿ ಜಿಲ್ಲೆಯಲ್ಲಿ ೪, ಚಿಕ್ಕಮಗಳೂರು ಜಿಲ್ಲೆಯಲ್ಲಿ ೪ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ವಿಶಾಲವಾದ ಲೋಕಸಭಾ ಕ್ಷೇತ್ರ ಇದಾಗಿದ್ದು, ಪ್ರತಿ ಮತಗಟ್ಟೆ ಭೇಟಿಮಾಡಲು ಕಷ್ಟಸಾಧ್ಯವಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಎಲ್ಲೆಲ್ಲಿ ಸಂಪರ್ಕ ಮಾಡಬೇಕು ಎಂದು ಪಕ್ಷ ಸೂಚನೆ ನೀಡುತ್ತದೆಯೋ ಅಲ್ಲೆಲ್ಲಾ ಪ್ರಚಾರ ನಡೆಸುತ್ತೇನೆ ಎಂದು ಹೇಳಿದರು.
ಮಾಜಿ ಸಚಿವ ಸಿ.ಟಿ ರವಿ ಮಾತನಾಡಿ, ಕೋಟಾ ಶ್ರೀನಿವಾಸ ಪೂಜಾರಿ ಅವರು ಸರಳ ಸಜ್ಜನ ರಾಜಕಾರಣಿಯಾಗಿದ್ದು, ದೇಶಕ್ಕಾಗಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಬಿಜೆಪಿಗೆ ಮತನೀಡಿ ಎಂದು ಮನವಿ ಮಾಡಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಅಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ಜಗತ್ತಿನಲ್ಲಿ ಭಾರತಕ್ಕೊಂದು ಗೌರವ ಬಂದಿದೆ. ಆ ನಿಟ್ಟಿನಲ್ಲಿ ಮತದಾರರು ಬಿಜೆಪಿಗೆ ಮತ ನೀಡಬೇಕು. ವಂದೇ ಮಾತರಂ ಎಂದು ಘೋಷಣೆ ಬರಬೇಕಾದರೆ ಬಿಜೆಪಿ ಗೆಲ್ಲಲೇಬೇಕು. ನರೇಂದ್ರ ಮೋದಿ ಪ್ರಧಾನಿಯಾಗಬೇಕು. ತುಕುಡೆ ಗ್ಯಾಂಗ್ಗೆ ಮತ ನೀಡಿದರೆ ಸೈನಿಕರಿಗೆ ಕಲ್ಲು ಹೊಡೆದು ಘೆರಾವು ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಂತ ನೆಲ ಕುಸಿದರೆ ಮನೆ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಇದು ದೇಶ ಉಳಿಸುವ ಕೆಲಸವಾಗಿದೆ. ಅದಕ್ಕಾಗಿ ಈ ಬಾರಿಯ ಲೋಕಸಭಾ ಚುನಾವಣೆ ಪ್ರಮುಖವಾಗಿದೆ. ಕಳೆದ ಹತ್ತು ತಿಂಗಳಲ್ಲಿ ಸರ್ಕಾರ ಜಿಲ್ಲೆಗೆ ಏನು ಹೊಸ ಯೋಜನೆ ನೀಡಿಲ್ಲ. ಆದರೆ ಬಿಜೆಪಿ ಸಕಾರದ ಅವಧಿಯಲ್ಲಿ ಜಾರಿ ಮಾಡಿದ್ದ ಯೋಜನೆಗಳಿಗೆ ಇಂದಿನ ಶಾಸಕರು ಗುದ್ದಲಿ ಪೂಜೆ ನೆರವೇರಿಸುತ್ತಿದ್ದಾರೆ ಎಂದು ದೂರಿದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ನಗರಾಧ್ಯಕ್ಷ ಪುಷ್ಪರಾಜ್, ಪ್ರಮುಖರಾದ ಎಚ್.ಸಿ.ಕಲ್ಮರುಡಪ್ಪ, ಕೋಟೆ ರಂಗನಾಥ್, ಕೆ.ಪಿ.ವೆಂಕಟೇಶ್, ಶ್ರೀಧರ್ ಉರಾಳ್, ಗವನಹಳ್ಳಿ ಶ್ರೀನಿವಾಸ್, ಕೇಶವ್ ಮತ್ತಿತರರಿದ್ದರು.
ಮುಂಜಾನೆಯಿಂದಲೇ ಮತಭೇಟೆ ಆರಂಭ
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಶುಕ್ರವಾರ ಮುಂಜಾನೆಯಿಂದಲೇ ತಮ್ಮ ಮತ ಬೇಟೆ ಆರಂಭ ಮಾಡಿದ್ದು ವಿಶೇಷವಾಗಿತ್ತು. ಬೆಳಗ್ಗೆ ೬ ಗಂಟೆಗೆ ಜಿಲ್ಲಾ ಆಟದ ಮೈದಾನಕ್ಕೆ ತೆರಳಿದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮಾಜಿ ಸಚಿವ ಸಿಟಿ ರವಿ ಅವರು ಬೆಳಗ್ಗೆ ವಾಕಿಂಗ್ ಗೆ ಬಂದಿದ್ದವರ ಬಳಿ ಮತಯಾಚನೆ ನಡೆಸಿದರು.
ಬಳಿಕ ೮.೩೦ಕ್ಕೆ ತೇಗೂರಿಗೆ ತೆರಳಿ ಅಲ್ಲಿ ಮನೆ ಮನೆಗೆ ತೆರಳಿ ಮತ್ತು ಪ್ರಚಾರ ನಡೆಸಿದರು. ನಂತರ ಗವನಹಳ್ಳಿ, ಚಿಕ್ಕ ಕುರುಬರಹಳ್ಳಿ, ಬೈಪಾಸ್ ರಸ್ತೆ, ಹಿರೇಮಗಳೂರು, ಜೋಡಿಹೋಚಿಹಳ್ಳಿ, ಡಿ ಕಾರೆಹಳ್ಳಿ, ಚಿಕ್ಕದೇವರ ಹಳ್ಳಿ, ಕಾಮೇನಹಳ್ಳಿ, ದೇವನೂರು, ನಾಗರಾಳು, ನಿಡಘಟ್ಟ ಕೋಟೆ, ಉಪ್ಪಳ್ಳಿ, ಕಲ್ಲುದೊಡ್ಡಿ ಭಾಗದಲ್ಲಿ ನಿರಂತರವಾಗಿ ರಾತ್ರಿಯವರೆಗೂ ಪ್ರಚಾರ ನಡೆಸಿದರು. ಶನಿವಾರ ಇಡೀ ದಿನ ಮೂಡಿಗೆರೆ ಕ್ಷೇತ್ರದಾದ್ಯಂತ ಪ್ರಚಾರ ನಡೆಸಲಿದ್ದಾರೆ.
೨೫ ಸಾವಿರ ದೇಣಿಗೆ
ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಚಿಕ್ಕಮಗಳೂರು ಹೊರವಲಯದ ತೇಗೂರು ಸರ್ಕಲ್ ನಲ್ಲಿರುವ ಚುರುಮುರಿ ಅಂಗಡಿಯ ಮಾಲೀಕ ಲೋಕೇಶ್ ಅವರು ೨೫ ಸಾವಿರ ರೂ. ಹಣವನ್ನು ಚುನಾವಣಾ ಖರ್ಚಿಗಾಗಿ ನೀಡಿ ಗಮನ ಸೆಳೆದರು. ಶುಕ್ರವಾರ ಬೆಳಗ್ಗೆ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಚಾರಕ್ಕಾಗಿ ಹೋದ ಸಂದರ್ಭದಲ್ಲಿ ಎಲೆ, ಅಡಕೆ, ಬಾಳೆಹಣ್ಣುಗಳೊಂದಿಗೆ ತಾಂಬೂಲದಲ್ಲಿ ೨೫ ಸಾವಿರ ರೂಪಾಯಿ ಹಣ ನೀಡಿ ಗೆಲ್ಲುವು ಸಾಧಿಸುವಂತೆ ಹಾರೈಸಿದರು.