ನವದೆಹಲಿ: ಎಐಸಿಸಿ ಅಧ್ಯಕ್ಷರ ಚುನಾವಣೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಕಾಂಗ್ರೆಸ್ನ ಕೇಂದ್ರ ಚುನಾವಣಾ ಪ್ರಾಧಿಕಾರವು ಹೊರಡಿಸಿದೆ. ಇದಾಗಲೇ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿಯಾಗಿದ್ದರೂ ಅಧಿಕೃತವಾಗಿ ಈಗ ಚುನಾವಣಾ ಪ್ರಕ್ರಿಯೆಯ ದಿನಾಂಕಗಗಳನ್ನು ಘೋಷಣೆ ಮಾಡಲಾಗಿದೆ.
ಅಧಿಸೂಚನೆಯ ಪ್ರಕಾರ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಸೆ.24ರಿಂದ 30ರವರೆಗೆ ನಡೆಯಲಿದೆ. ಅಕ್ಟೋಬರ್ 1 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನವಾಗಿರುತ್ತದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದಲ್ಲಿ ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್ 19 ರಂದು ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆಯಾಗಲಿದೆ.
ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷ ಸ್ಥಾನವನ್ನು ತೆಗೆದುಕೊಳ್ಳುವುದಿಲ್ಲ ಎಂಬ ಗಟ್ಟಿ ನಿಲುವು ತಳೆದಿರುವುದರಿಂದಾಗಿ ಎರಡು ದಶಕಗಳ ನಂತರ ಪಕ್ಷವು ತನ್ನ ಮೊದಲ ಗಾಂಧಿಯೇತರ ಅಧ್ಯಕ್ಷರನ್ನು ಹೊಂದುವ ಸಾಧ್ಯತೆ ಇದೆ. ಸುದೀರ್ಘ ಕಾಲದಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಬದಲಾವಣೆ ಬರುತ್ತಿರುವುದರಿಂದ ಈ ಚುನಾವಣೆ ವಿಶೇಷ ಎಂದೆನಿಸಿದೆ.
ಎರಡು ದಶಕಗಳ ನಂತರ ಚುನಾವಣೆ
ಇದಾಗಲೇ ಅಧ್ಯಕ್ಷ ಸ್ಥಾನದ ಮೇಲೆ ಸಂಸದರಾದ ಶಶಿ ತರೂರು, ದಿಗ್ವಿಜಯ ಸಿಂಗ್ ಹಾಗೂ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಕಣ್ಣಿಟ್ಟಿದ್ದಾರೆ. ಇವರ ಪೈಕಿ ಶಶಿ ತರೂರು ಅವರು ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಲಾಗಿದ್ದು, ಸೋನಿಯಾ ಗಾಂಧಿ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ ರಾಹುಲ್ ಗಾಂಧಿಯವರೇ ಅಧ್ಯಕ್ಷರಾಗಬೇಕು ಎಂಬ ಕೂಗು ಕೇಳಿಬರುತ್ತಿದೆ.
ಒಂದು ವೇಳೆ ಚುನಾವಣೆ ನಡೆದದ್ದೇ ಆದರೆ, ಎರಡು ದಶಕಗಳ ಇತಿಹಾಸವನ್ನು ಮುರಿದಂತಾಗುತ್ತದೆ. ಏಕೆಂದರೆ ಕಾಂಗ್ರೆಸ್ ಪಕ್ಷವು 2000ನೇ ಸಾಲಿನ ನವೆಂಬರ್ ತಿಂಗಳಿನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೊನೆಯ ಬಾರಿ ಸ್ಪರ್ಧೆ ನಡೆಸಿದೆ. ಜಿತೇಂದ್ರ ಪ್ರಸಾದ ಅವರು 2000 ರಲ್ಲಿ ಸೋನಿಯಾ ಗಾಂಧಿಯವರ ವಿರುದ್ಧ ಸೋತಿದ್ದರು. ಅದಕ್ಕೂ ಮೊದಲು ಸೀತಾರಾಮ್ ಕೇಸರಿ ಅವರು 1997ರಲ್ಲಿ ಶರದ್ ಪವಾರ್ ಮತ್ತು ರಾಜೇಶ್ ಪೈಲಟ್ ಅವರನ್ನು ಸೋಲಿಸಿದ್ದರು.
2017 ಮತ್ತು 2019 ರ ನಡುವೆ ಎರಡು ವರ್ಷಗಳಲ್ಲಿ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನದಲ್ಲಿದ್ದುದನ್ನು ಹೊರತುಪಡಿಸಿದೆ 1998ರಿಂದ ಸೋನಿಯಾ ಗಾಂಧಿಯೇ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಹೆಚ್ಚಿನ ಜನರು ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸಾಹ ತೋರಿದ್ದನ್ನು ಸೋನಿಯಾ ಗಾಂಧಿ ಸ್ವಾಗತಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಮಂಗಳವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಎಐಸಿಸಿ ಮುಖ್ಯಸ್ಥರ ಆಯ್ಕೆ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)
Congress issues notification for the party president elections
— ANI (@ANI) September 22, 2022
Nominations to be filed from Sep 24 to Sep 30. If necessary, voting will be held on Oct 17 and the result for the same will be declared on Oct 19 pic.twitter.com/r032tslwyM
ರೋಚಕ ಘಟ್ಟ ತಲುಪಿದ ಕಾಂಗ್ರೆಸ್ ಅಧ್ಯಕ್ಷ ಸ್ಥಾನ: ಎರಡು ದಶಕಗಳ ನಂತರವೂ ಬದಲಾಗೋದು ಡೌಟಾ?
‘ಭಾರತ್ ಜೋಡೋ ಯಾತ್ರೆ’ ಬ್ಯಾನರ್ನಲ್ಲಿ ವೀರ್ ಸಾವರ್ಕರ್ ಫೋಟೋ! ಕೊನೆಗೂ ಸತ್ಯ ಒಪ್ಪಿಕೊಂಡ್ರಾ ಎಂದ ಅಭಿಮಾನಿಗಳು
ಹಿಜಾಬ್ ಬ್ಯಾನ್: 10 ದಿನಗಳ ಬಿರುಸಿನ ವಾದ-ಪ್ರತಿವಾದಕ್ಕೆ ತೆರೆ; ತೀರ್ಪು ಕಾಯ್ದಿರಿಸಿದ ಸುಪ್ರೀಂ