ಲಖನೌ: ಮದುವೆಯಾಗಿ ಸುಂದರ ದಾಂಪತ್ಯದ ಕನಸು ಕಂಡ ಯುವಕನೊಬ್ಬನಿಗೆ ಮೊದಲ ರಾತ್ರಿಯೇ ವಧು ಎಂದೂ ಮರೆಯದ ಶಾಕ್ ಕೊಟ್ಟುಬಿಟ್ಟಿದ್ದಾಳೆ. ಈ ಶಾಕ್ನಿಂದ ತತ್ತರಿಸಿ ಹೋಗಿರುವ ಯುವಕ, ಮದುವೆಯೆಂದರೆ ಬೆಚ್ಚಿಬೀಳುವಂತಾಗಿದೆ.
ಇಂಥದ್ದೊಂದು ಅನಾಹುತ ನಡೆದಿರುವುದು ಉತ್ತರ ಪ್ರದೇಶದಲ್ಲಿ. ವಧು ಹರಿದ್ವಾರ ನಿವಾಸಿಯಾಗಿದ್ದು, ವರ ಬಿಜ್ನೋರ್ ಕುಂದಖುರ್ದ್ ಗ್ರಾಮದವನಾಗಿದ್ದಾನೆ. ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿದ್ದ ವರನಿಗೆ ಮ್ಯಾಚ್ಮೇಕರ್ ಒಬ್ಬರ ಪರಿಚಯವಾಗಿದೆ. ನಂತರ ಅವರು, ಸುಂದರವಾಗಿರುವ ಈ ಯುವತಿಯನ್ನು ತೋರಿಸಿದ್ದಾರೆ. ಇಬ್ಬರಿಗೂ ಪರಸ್ಪರ ಇಷ್ಟವಾಗಿ ಮದುವೆಯೂ ಆಗಿಬಿಟ್ಟಿದೆ.
ಕಳೆದ ವಾರ ಇವರು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಮದುವೆಯಾದ ಮೇಲೆ ವರ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಸುಂದರ ಸುಂದರ ಕನಸು ಕಂಡಿದ್ದಾನೆ. ಮೊದಲ ರಾತ್ರಿಗೆ ಎಲ್ಲಾ ಸಜ್ಜು ಮಾಡಿದ್ದಾನೆ.
ಇಷ್ಟಾಗುತ್ತಿದ್ದಂತೆಯೇ ಅವನಿಗಿಂತ ಮೊದಲೇ ತಾನು ಏನು ಮಾಡಬೇಕು ಎಂದು ರೆಡಿಯಾಗಿದ್ದ ಈ ವಧು, ಗಂಡನಿಗೆ ತಿಳಿಯದೇ ಇಟ್ಟುಕೊಂಡಿದ್ದ ರಾಡ್ನಿಂದ ತೀವ್ರವಾಗಿ ಹಲ್ಲೆ ಮಾಡಿದ್ದಾಳೆ. ಪ್ರಜ್ಞೆ ತಪ್ಪಿ ಯುವಕ ಬಿದ್ದಿದ್ದಾನೆ. ನಂತರ ಈ ಯುವತಿ, ಆತನ ಬಳಿ ಇದ್ದ ನಗದು ಹಾಗೂ ಆಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾಳೆ.
ಯುವಕನಿಗೆ ಪ್ರಜ್ಞೆ ಬಂದಾಗ ತಾನು ಮೋಸ ಹೋಗಿರುವುದು ತಿಳಿದಿದೆ. ಎಚ್ಚರವಾದಾಗ ಪಕ್ಕದಲ್ಲಿ ಪತ್ನಿಯೂ ಇರಲಿಲ್ಲ, ಮನೆಯಲ್ಲಿ ಇದ್ದ ಎಲ್ಲಾ ಚಿನ್ನದ ಒಡವೆಗಳು ಹಾಗೂ ನಗದು ನಾಪತ್ತೆಯಾಗಿರುವುದು ಕಂಡಿದೆ. ನಂತರ ಆತ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾನೆ.
ಈಕೆಯ ಪರಿಚಯ ಮ್ಯಾಚ್ಮೇಕರನಿಂದ ಆಗಿತ್ತು. ಅದರೆ ನನ್ನಲ್ಲಿರುವ ಒಡವೆ, ನಗದು ನೋಡಿಯೇ ಆಕೆ ಮದುವೆಗೆ ಒಪ್ಪಿಕೊಂಡಿರುವುದು ಈಗ ತಿಳಿದಿದೆ. ನಿಜವಾಗಲೂ ಆ ರಾತ್ರಿ ಏನಾಯಿತು ಎಂದು ತಿಳಿಯುತ್ತಿಲ್ಲ. ಇದ್ದಕ್ಕಿದ್ದಂತೆ ನನ್ನ ಪತ್ನಿ ರಾಡ್ನಿಂದ ಹೊಡೆಯಲು ಆರಂಭಿಸಿದಳು. ಇದರಿಂದ ನಾನು ಪ್ರಜ್ಞೆ ತಪ್ಪಿ ಬಿದ್ದೆ ಎಂದು ಪೊಲೀಸರಲ್ಲಿ ದೂರು ದಾಖಲಿಸಿದ್ದಾನೆ.
20,000 ರೂ ನಗದು ಹಾಗೂ 2 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿರುವ ಯುವತಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.