ಕಾನ್ಪುರ: ಪಂಚ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮತದಾರರನ್ನು ಒಲಿಸಿಕೊಳ್ಳಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿವೆ. ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ರ್ಯಾಲಿ, ಸಭೆ ಸಮಾರಂಭಗಳನ್ನು ನಡೆಸದಂತೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಇದಾಗಲೇ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಜನರು ಮನೆಮನೆಗೆ ತೆರಳಿ ವಿಭಿನ್ನ ರೀತಿಯಲ್ಲಿ ಮತದಾರರ ಓಲೈಕೆಗೆ ಯತ್ನಿಸುತ್ತಿದ್ದಾರೆ.
ಇಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಆದರೆ ಇಲ್ಲೊಂದು ಕುತೂಹಲ ಹಾಗೂ ಹಾಸ್ಯದ ಸನ್ನಿವೇಶವೊಂದು ನಡೆದಿದೆ. ಅದೇನೆಂದರೆ ವ್ಯಕ್ತಿಯೊಬ್ಬ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ದಿಢೀರ ಹೋದ ಕಾನ್ಪುರದ ಬಿಜೆಪಿ ಶಾಸಕ ಸುರೇಂದ್ರ ಮೈಥಾನಿ ಆ ವ್ಯಕ್ತಿಗೆ ಪ್ರಶ್ನೆ ಕೇಳಿದ್ದಾರೆ. ಸ್ನಾನ ಮಾಡುತ್ತಿದ್ದ ವ್ಯಕ್ತಿ ಮೈ-ಕೈ ಮುಖಕ್ಕೆ ಸೋಪು ಹಚ್ಚಿಕೊಂಡಿದ್ದರಿಂದ ಒಮ್ಮೆಲೇ ಪ್ರಶ್ನೆಗೆ ಕಕ್ಕಾಬಿಕ್ಕಿಯಾಗಿದ್ದಾರೆ, ಕೊನೆಗೆ ಪ್ರಶ್ನೆಗೆ ಉತ್ತರ ಹೇಳಿದ್ದಾರೆ.
ಅಷ್ಟಕ್ಕೂ ಶಾಸಕರು ಕೇಳಿದ ಪ್ರಶ್ನೆ ಎಂದರೆ, ನಿನ್ನ ಬಳಿ ರೇಷನ್ ಕಾರ್ಡ್ ಇದೆಯಾ?ʼ ಎಂದು! ಎಲ್ಲವೂ ಚೆನ್ನಾಗಿದೆಯೇ? ಯಾವುದೇ ವಿಳಂಬವಿಲ್ಲದೇ ಅನುದಾನ ಪಡೆದು ಮನೆ ನಿರ್ಮಿಸಲಾಯಿತೇ? ನಿಮ್ಮ ಬಳಿ ರೇಷನ್ ಕಾರ್ಡ್ ಇದೆಯೇ ಎಂದು ಸ್ನಾನ ಮಾಡುತ್ತಿದ್ದ ವ್ಯಕ್ತಿಯನ್ನು ಶಾಸಕ ವಿಚಾರಿಸಿದ್ದಾರೆ.
ʻಹೌದು, ಹೌದುʼ ಅಂತ ಆ ವ್ಯಕ್ತಿ ತಮ್ಮ ಸ್ನಾನವನ್ನು ಮುಂದುವರೆಸುತ್ತಲೇ ಉತ್ತರ ನೀಡಿದ್ದಾರೆ. ಇದನ್ನು ಖುದ್ದು ಶಾಸಕರೇ ತಮ್ಮ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ‘ವಸತಿ ಯೋಜನೆಯಡಿ ಮನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಫಲಾನುಭವಿಯೊಬ್ಬರ ಮನೆಗೆ ತೆರಳಿ ಅಭಿನಂದಿಸಿದ್ದೇನೆ. ಕಮಲದ ಗುರುತಿಗೆ ಮತ ಹಾಕಿ, ನನ್ನನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಅಂದಹಾಗೆ, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಫೆ.10ರಿಂದ ಮಾರ್ಚ್ 7 ರವರೆಗೆ ನಡೆಯಲಿದ್ದು, ಏಳು ಹಂತದಲ್ಲಿ ಮತದಾನ ಆಗಲಿದೆ. ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ.
ಇಲ್ಲಿದೆ ನೋಡಿ ವಿಡಿಯೋ
A @BJP4UP MLA in Kanpur on a door to door campaign walks into the home of a man taking a bath , asks him – colony(house) ho gayi , ration card hai ? Man – haan haan haan ; haan sab hai 🤣 pic.twitter.com/ezZntatZYM
— Alok Pandey (@alok_pandey) January 14, 2022