More

    ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುತ್ತಿದೆ ಜ್ವರ, ಮಾಹಿತಿ ಕೊರತೆಯಿಂದ ಸೋಂಕಿತರ ಸಂಖ್ಯೆ ವೃದ್ಧಿ ಸಾಧ್ಯತೆ

    ಬೈಂದೂರು: ಬೈಂದೂರು ಭಾಗದ ಗ್ರಾಮೀಣ ಪ್ರದೇಶವಾದ ಗಂಗನಾಡು, ಮದ್ದೋಡಿ, ಹೊಸೂರು ಮುಂತಾದ ಹಳ್ಳಿಗಳಲ್ಲಿ ಜ್ವರ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಆರೋಗ್ಯ ಕೇಂದ್ರಕ್ಕೆ ಬಂದು ತಪಾಸಣೆ ನಡೆಸಿದರೆ ಆತಂಕ ಇರುವ ಕಾರಣ ಮನೆಯಲ್ಲಿಯೇ ಔಷಧ ಪಡೆದು ಜ್ವರ ಗಂಭೀರವಾಗಿ ಉಲ್ಬಣಿಸಿದ ಹಲವು ಉದಾಹರಣೆಗಳು ಕಂಡುಬರುತ್ತಿದೆ.

    ಕರೊನಾ ಆಭರ್ಟ ಪ್ರಾರಂಭವಾದಾಗ ಬೆಂಗಳೂರು, ಮುಂಬೈ ಮುಂತಾದ ಪಟ್ಟಣ ಪ್ರದೇಶದ ಜನರು ತಮ್ಮ ಮನೆಗಳಿಗೆ ಸೇರಿಕೊಂಡರು. ಕಳೆದೊಂದು ತಿಂಗಳಿಂದ ಹೊಸೂರು ಸೇರಿದಂತೆ ಊರಿಗೇ ಊರೇ ಜ್ವರದಿಂದ ಬಳಲುತ್ತಿದೆ. ಆಸ್ಪತ್ರೆಗೆ ಬರಲು ಹೆದರಿ ಸ್ಥಳೀಯ ಔಷಧಾಲಯ ಹಾಗೂ ವೈದ್ಯರಿಂದ ಔಷಧ ಪಡೆಯುತ್ತಿದ್ದಾರೆ. ಕೆಲವರು ಗುಣಮುಖರಾದರೆ, ಇನ್ನು ಕೆಲವು ಜನರು ಹದಿನೈದು ದಿನದಿಂದ ಬಳಲುತ್ತಿದ್ದಾರೆ. ಎರಡು ಮೂರು ಜನ ಸಾವನ್ನಪ್ಪಿದ ನಿದರ್ಶನಗಳೂ ಇವೆ. ಒಂದೊಮ್ಮೆ ಮಾಹಿತಿ ಕೊರತೆ ಇರುವವರಿಗೆ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಹಾಗೂ ಸ್ಥಳೀಯಾಡಳಿತ ಗಮನ ಹರಿಸದಿದ್ದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ.

    ಕೃಷಿ ಚಟುವಟಿಕೆಗೆ ಹಿನ್ನಡೆ ಆತಂಕ
    ಸಾಮಾನ್ಯವಾಗಿ ಜೂನ್ ತಿಂಗಳು ಆರಂಭವಾದರೆ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗೆ ಚಾಲನೆ ಸಿಗುತ್ತದೆ. ಬಿತ್ತನೆ ಸೇರಿದಂತೆ ಸಾಮೂಹಿಕ ಕೃಷಿ ಮಾಡಬೇಕಾಗಿರುವುದು ಅನಿವಾರ್ಯ. ಹೀಗಾಗಿ ಸೋಂಕು ಹೆಚ್ಚುವ ಕಾರಣ ಒಂದೆಡೆಯಾದರೆ ಪರೀಕ್ಷೆ ಮಾಡಿಕೊಂಡು ಕರೊನಾ ದೃಢಪಟ್ಟರೆ ಕ್ವಾರಂಟೈನ್ ಅಥವಾ ಆಸ್ಪತ್ರೆ ಸೇರಿದರೆ ಕೃಷಿ ಕಾರ್ಯಕ್ಕೆ ತೊಂದರೆಯಾಗುತ್ತದೆ ಎನ್ನುವ ಯೋಚನೆ ಕೂಡ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಕೆಲವು ಕಡೆಗಳಲ್ಲಿ ಜ್ವರ ಬಾಧಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದೂರ ದೂರ ಮನೆಗಳಿರುವ ಕಾರಣ ಗಂಭೀರವಾಗುವವರೆಗೆ ಮಾಹಿತಿ ದೊರೆಯದಿರುವುದು ಕೂಡ ಸಮಸ್ಯೆಯಾಗಿ ಕಾಡುತ್ತಿದೆ. ಒಟ್ಟಾರೆಯಾಗಿ ಜಿಲ್ಲಾಡಳಿತ ಗ್ರಾಮೀಣ ಭಾಗದ ವಾಸ್ತವಿಕ ಸಮಸ್ಯೆ ಕುರಿತು ಗಂಭೀರವಾಗಿ ಪರಿಗಣಿಸಬೇಕಿದೆ.

    ಹಳ್ಳಿಗಳಲ್ಲಿ ಈ ರೀತಿ ಸಮಸ್ಯೆ ಆಗಿರುವ ಬಗ್ಗೆ ಮಾಹಿತಿಗಳಿವೆ. ಈಗಾಗಲೇ ಈ ವಿಚಾರಗಳ ಕುರಿತು ನಿಗಾ ವಹಿಸಿದ್ದು ಗ್ರಾಮೀಣ ಭಾಗದಲ್ಲಿ ಪ್ರತಿ ಮನೆ ಮನೆ ತಪಾಸಣೆ ಮಾಡುವ ಕುರಿತು ವೈದ್ಯರ ತಂಡಕ್ಕೆ ಜವಾಬ್ದಾರಿ ವಹಿಸುತ್ತೇನೆ.
    ಡಾ.ನಾಗಭೂಷಣ ಉಡುಪ, ಜಿಲ್ಲಾ ಆರೋಗ್ಯಾಧಿಕಾರಿ

    ಬೈಂದೂರು ಕ್ಷೇತ್ರದಲ್ಲಿ ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪಂಚಾಯಿತಿಗಳು ಉತ್ತಮ ಕೆಲಸ ಮಾಡುತ್ತಿದೆ. ಸೋಂಕಿತರ ಸಂಖ್ಯೆ ಕೂಡ ನಿಯಂತ್ರಣದಲ್ಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿರುವ ಕುರಿತು ಜಿಲ್ಲಾಡಳಿತ, ಆರೋಗ್ಯಾಧಿಕಾರಿಗಳ ಜೊತೆ ಚರ್ಚಿಸಿ ಪ್ರತಿ ಹಳ್ಳಿಗಳ ತಪಾಸಣೆ ಮಾಡಲು ತಿಳಿಸಲಾಗುವುದು.
    ಬಿ.ಎಂ.ಸುಕುಮಾರ ಶೆಟ್ಟಿ, ಬೈಂದೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts