ಅರಸೀಕೆರೆ: ಭಾರತೀಯ ಸನಾತನ ಸಂಸ್ಕೃತಿಯ ಅಳಿವು ಯಾರಿಂದಲೂ ಸಾಧ್ಯವಿಲ್ಲ ಎಂದು ಆರ್ಎಸ್ಎಸ್ ದಕ್ಷಿಣ ಪ್ರಾಂತ ಪ್ರಮುಖ್ ರಾಜೇಶ್ ಪದ್ಮಾರ್ ಬೌದ್ಧಿಕ್ ಹೇಳಿದರು.
ವಿಜಯದಶಮಿ ಅಂಗವಾಗಿ ನಗರದ ಕರಿಯಮ್ಮ ದೇವಿ ದೇಗುಲದ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಆರ್ಎಸ್ಎಸ್ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮುಸ್ಲಿಮರು, ಕ್ರೈಸ್ತರು ನೂರಾರು ವರ್ಷ ದೇಶವನ್ನಾಳಿದರೂ ಸನಾತನ ಸಂಸ್ಕೃತಿಯನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ. ಬಾಯಿ ಚಪಲದಿಂದ ಕೆಲವರು ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದಾರೆ. ವಿಜಯದಶಮಿ ದಿನ ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಮಹಿಥೇವಾಡ ಗ್ರಾಮದಲ್ಲಿ ನೆಟ್ಟ ಆರ್ಎಸ್ಎಸ್ ಎಂಬ ಸಸಿ ಇಂದು ಅಖಂಡ ಭಾರತದ ಹೆಮ್ಮರವಾಗಿದೆ ಎಂದರು.
ಅಖಂಡ ಹಿಂದುಸ್ಥಾನದಲ್ಲಿ ಅಪಾಯಕಾರಿ ಘಟನೆಗಳು ನಡೆದಾಗ ಸ್ವಯಂ ಸೇವಕರ ಸಹಾಯದಿಂದ ತನ್ನ ಸಾಮ್ಯರ್ಥ್ಯ ಏನೆಂಬುದನ್ನು ಸಾಬೀತು ಮಾಡಿದೆ. ರಾಮಸೇತು ಹೋರಾಟ, ಅಮರನಾಥಯಾತ್ರಿಗಳ ರಕ್ಷಣೆಗಾಗಿ ಶ್ರಮಿಸಿದೆ. ದೇಶಾದ್ಯಂತ 50ಸಾವಿರಕ್ಕೂ ಹೆಚ್ಚು ಶಾಖೆಗಳಿಂದ ತಮ್ಮ ಸ್ವಾರ್ಥವನ್ನು ಮರೆತು ಅಖಂಡ ಹಿಂದುಸ್ಥಾನದ ಉನ್ನತಿಗೆ ತ್ಯಾಗ, ಬಲಿದಾನ ಮಾಡುವ ಸೈನ್ಯವೇ ನಮ್ಮ ಬಳಿಯಿದೆ. ಯಾವುದೇ ಪ್ರಚಾರವಿಲ್ಲದೆ ಜಗತ್ತಿನಲ್ಲೇ ಅದ್ವಿತೀಯ ಸಂಘಟನೆಯಾಗಿರುವ ಆರ್ಎಸ್ಎಸ್ ಧರ್ಮ, ದೇಶ ರಕ್ಷಣೆ ಜಾಗೃತಿಗಾಗಿ ನಿರಂತರ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.
ಮಾರ್ಗೊಂಡನಹಳ್ಳಿ ಮುಕುಂದೂರು ವಿರಕ್ತಮಠದ ಶ್ರೀ ಅಕ್ಷಯ್ ದೇವರು ಮಾತನಾಡಿದರು. ಪ್ರಚಾರಕ್ ಚಂದನ್ ಚೌವ್ಹಾಣ್, ಸತ್ಯಣ್ಣ, ಕಟ್ಟೆಹಳ್ಳಿ ನವೀನ್, ಚಂದನ್, ಹಿತೇಶ್, ಕೊಟ್ರೇಶ್ ಇನ್ನಿತರರು ಪಾಲ್ಗೊಂಡಿದ್ದರು.