ಕೊಕಟನೂರ: ಕರೊನಾ ವೈರಸ್ ಅಟ್ಟಹಾಸ ಕೃಷಿ ವಲಯಕ್ಕೆ ಸಂಪೂರ್ಣ ಬರೆ ಎಳೆದಿದ್ದು, ಪಪ್ಪಾಯಿ ಹಾಗೂ ಕಲ್ಲಂಗಡಿ ಬೆಳೆದ ನೂರಾರು ರೈತರು ಬೆಳೆದು ನಿಂತ ಫಸಲು ಮಾರಾಟ ಮಾಡಲಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಜಾವೇದ್ ನದಾಫ್ ಅಬ್ದುಲ್ ಮುಲ್ಲಾ, ಅಮೀನಸಾಬ್ ಮುಲ್ಲಾ, ಸಾಹೇಬ್ಲಾಲ್ ಸನದಿ, ಬುರಾನ್ಸಾಬ್ ಮುಲ್ಲಾ ಹಾಗೂ ಯಲ್ಲಮ್ಮನವಾಡಿ ಗ್ರಾಮದ ರಾಹುಲ್ ಪೂಜಾರಿ ಎಂಬುವರು ಒಟ್ಟು 25 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಪಪ್ಪಾಯಿ ಮತ್ತು ಕಲ್ಲಂಗಡಿ ಬೆಳೆದಿದ್ದಾರೆ. ಬೀಜ, ಗೊಬ್ಬರ, ಔಷಧ ಸಿಂಪಡಣೆಗಾಗಿ ಹಣ ವ್ಯಯ ಮಾಡಿ ಇನ್ನೇನು ಫಲವತ್ತಾದ ಬೆಳೆ ಬಂತು ಎನ್ನುವಷ್ಟರಲ್ಲಿ ಕರೊನಾ ಎಂಬ ಮಹಾಮಾರಿ ತಡೆಗೆ ಲಾಕ್ಡೌನ್ ಘೋಷಿಸಲಾಯಿತು. ಇದರಿಂದ ಪಪ್ಪಾಯಿ, ಕಲ್ಲಂಗಡಿ ಮಾರಾಟ ಮಾಡಲಾಗದೆ ತೋಟದಲ್ಲಿಯೇ ಕೊಳೆಯುವಂತಾಗಿದೆ.
ಗ್ರಾಮೀಣ ಪ್ರದೇಶದಿಂದ ಕಲ್ಲಂಗಡಿ ಹಾಗೂ ಪಪ್ಪಾಯಿಯನ್ನು ಮಾರುಕಟ್ಟೆಗೆ ರವಾನಿಸಲು ತೊಂದರೆಯಾಗಿದೆ. ಹೋದರೂ ಸಾಗಣೆ ವೆಚ್ಚವೂ ಮರಳಿ ಬರುತ್ತಿಲ್ಲ. ಸಾಲದ ಸುಳಿಯಲ್ಲಿ ಸಿಲುಕಿರುವ ರೈತರಿಗೆ ರಾಜ್ಯ ಸರ್ಕಾರ ಸೂಕ್ತ ಮಾರುಕಟ್ಟೆ ಒದಗಿಸಬೇಕು ಎಂದು ಬೆಳೆಗಾರರು ಆಗ್ರಹಿಸಿದ್ದಾರೆ.