ಸಿಂದಗಿ: ಮಕ್ಕಳ ಮೇಲಿನ ಶೋಷಣೆ ಹಾಗೂ ಅವರ ಹಕ್ಕುಗಳಿಗೆ ಧಕ್ಕೆಯಾಗುತ್ತಿರುವ ಕುರಿತು ಮೂಡುತ್ತಿರುವ ಪ್ರಶ್ನೆಗಳಿಗೆ ಸರ್ಕಾರ ಮನ್ನಣೆ ನೀಡಿ ಅವುಗಳ ಪರಿಹಾರಕ್ಕೆ ಅಣಿಯಾಗಬೇಕು ಎಂದು ಮಕ್ಕಳ ಸಾಹಿತಿ ಎಸ್.ಎಸ್. ಸಾತಿಹಾಳ ಹೇಳಿದರು.
ನಗರದಲ್ಲಿನ ಪ್ರೇರಣಾ ಸ್ಕೂಲ್ನಲ್ಲಿ ಪ್ರೇರಣಾ ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ಪ್ರೇರಣಾ ಶಾಲಾ ಮಕ್ಕಳ ಬಳಗದ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಸುವರ್ಣ ಸಂಭ್ರಮ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಶೋಷಣೆಗೆ ಸರ್ಕಾರವೇ ಮೊದಲು ಧ್ವನಿಯಾಗಬೇಕು ಎಂದು ಒತ್ತಾಯಿಸಿದರು.
ಮಕ್ಕಳ ದಿನಕ್ಕೆ ಪ್ರೇರಣೆಯಾಗಿರುವ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಹಾಗೂ ಕನ್ನಡ ನಾಡುನುಡಿಯ ಸೊಬಗನ್ನು ಪ್ರಶಂಸಿಸಿ ಮಕ್ಕಳ ಹಕ್ಕುಗಳಿಗೆ ಮನ್ನಣೆ ಸಿಕ್ಕಾಗಲೇ ಅವರು ದೇಶದ ಭದ್ರ ಬುನಾದಿಯಾಗಬಲ್ಲರು ಎಂದರು.
ನ್ಯಾಯವಾದಿ ಬಿ.ಜಿ. ನೆಲ್ಲಗಿ ಮಾತನಾಡಿ, ಮಕ್ಕಳು ಸಂವಿಧಾನ ಒದಗಿಸಿರುವ ಕಾನೂನುಗಳನ್ನು ಓದಿ ತಿಳಿಯಬೇಕು. ಬಾಲಕಾರ್ಮಿಕ, ಪೋಕ್ಸೋ, ಲಿಂಗಪತ್ತೆ, ಉಚಿತ ಶಿಕ್ಷಣದ ಕಾನೂನು ವಿವರಿಸಿದರು.
ಶಾಲೆಯಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಆಟೋಟಗಳಲ್ಲಿ ವಿಜೇತರಾದ, ಪರೀಕ್ಷೆಗಳಲ್ಲಿ ಸಾಧನೆಗೈದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ನಿರ್ದೇಶಕ ಪಿ.ಡಿ. ಕುಲಕರ್ಣಿ, ಮುಖ್ಯಶಿಕ್ಷಕಿ ಸಾವಿತ್ರಿ ಅಸ್ಕಿ ಇದ್ದರು.
ಯಶೋದ ಹಂಚಿನಾಳ ಪ್ರಾರ್ಥಿಸಿದರು. ಸಂಸ್ಥೆ ಅಧ್ಯಕ್ಷ ಆರ್.ಡಿ. ಕುಲಕರ್ಣಿ ಸ್ವಾಗತಿಸಿದರು. ಶಿಕ್ಷಕಿ ವಿದ್ಯಾಶ್ರೀ ಅಂಬಲಗಿ, ಶಿಕ್ಷಕ ಸತೀಶ ಕುಲಕರ್ಣಿ ನಿರೂಪಿಸಿದರು. ಶಿಕ್ಷಕಿ ದ್ರಾಕ್ಷಾಯಿಣಿ ಹುಗ್ಗಿ ವಂದಿಸಿದರು.