ಎನ್.ಆರ್.ಪುರ: ನಿಮ್ಮ ಒಂದೊಂದು ಮತಗಳು ಬಂದೂಕಿನ ಗುಂಡಿಗಿಂತ ಶಕ್ತಿಯುತವಾದವು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಜೆ.ಮಂಜುನಾಥ್ ಹೇಳಿದರು.
ಕೆಪಿಎಸ್ಸಿ ಶಾಲೆಯಲ್ಲಿ ಕಸಾಪ ಆಯೋಜಿಸಿದ್ದ ಮತದಾನ ದಿನ ಹಾಗೂ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ರಾಜಕೀಯ ಪಕ್ಷಗಳು ಹಾಗೂ ಚುನಾವಣೆ ಎರಡೂ ಒಂದೇ ನಾಣ್ಯದ ಮುಖಗಳು. ಎರಡೂ ಸರಿಯಾದ ರೀತಿಯಲ್ಲಿ ಮುನ್ನಡೆದರೆ ಮಾತ್ರ ದೇಶ ಸುಭದ್ರವಾಗಿರುತ್ತದೆ. ನೀವು ಮತದಾನ ಮಾಡಿ ಆಯ್ಕೆ ಮಾಡುವ ನಾಯಕ ಸಮರ್ಥವಾಗಿರಬೇಕು ಎಂದರು.
ಮತದಾನದಲ್ಲಿ ಯುವ ಜನತೆ ಪಾತ್ರ ಮಹತ್ವದ್ದಾಗಿದೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡುವ ದೃಢ ಸಂಕಲ್ಪ ಮಾಡಬೇಕು. ನಮ್ಮ ದೇಶದಲ್ಲಿ ಪ್ರಜೆಗಳೇ ಪ್ರಭುಗಳು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಾವು ದೃಢವಾದ ನಂಬಿಕೆ ಹೊಂದಿದ್ದೇವೆ. ಇದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.