ಬೆಂಗಳೂರು: ಸಿನಿಮಾ ಬಗ್ಗೆ ಇದುವರೆಗೂ ಹಲವು ಸಿನಿಮಾಗಳು ಬಿಡುಗಡೆಯಾಗಿವೆ. ಆ ಸಾಲಿಗೆ ಈಗ ‘ಫಸ್ಟ್ ಡೇ ಫಸ್ಟ್ ಶೋ’ ಸಹ ಒಂದು. ಪ್ರೇಕ್ಷಕರಿಗೆ ಎರಡು ತಾಸು ಮನರಂಜನೆ ನೀಡುವ ಸಿನಿಮಾಗಳ ಹಿಂದಿನ ನೂರಾರು ಕಥೆಗಳು, ತೆರೆಯ ಮೇಲೆ ಕಲರ್ಫುಲ್ ಆಗಿ ಬರುವ ಒಂದು ಸಿನಿಮಾ ಹಿಂದೆ ಏನೆಲ್ಲ ನಡೆದಿರುತ್ತದೆ ಎಂಬ ಕುತೂಹಲಕರ ವಿಷಯಗಳನ್ನು ಈ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ.
ಇದನ್ನೂ ಓದಿ: ಕನ್ನಡದಲ್ಲಿ ಮತ್ತೊಂದು ದೈವದ ಸಿನಿಮಾ; ‘ಕರಿ ಹೈದ ಕರಿ ಅಜ್ಜ’ ಶೂಟಿಂಗ್ ಮುಕ್ತಾಯ
‘ಒಂದ್ ಕಥೆ ಹೇಳ್ಲಾ’, ‘ವಾವ್’ ಮತ್ತು ‘ಶಾಲಿವಾಹನ ಶಕೆ’ ಸಿನಿಮಾಗಳ ಮೂಲಕ ನಟ ಕಂ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಗಿರೀಶ್.ಜಿ ನಿರ್ದೇಶನದ ಚಿತ್ರವಿದು. ಈ ಚಿತ್ರಕ್ಕೂ ಅವರು ಆಕ್ಷನ್-ಕಟ್ ಹೇಳುವುದರ ಜತೆಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ಅವರು, ‘ಈ ಚಿತ್ರವು ಚಿತ್ರರಂಗಕ್ಕೆ ಒಂದು ಅರ್ಪಣೆ ಎನ್ನಬಹುದು. ಶುಕ್ರವಾರ ಫಸ್ಟ್ ಡೇ ಫಸ್ಟ್ ಶೋ ತೆರೆ ಕಾಣುವ ಒಂದು ಸಿನಿಮಾ ಹಿಂದೆ ಎಷ್ಟೆಲ್ಲಾ ಘಟನೆಗಳು ನಡೆದಿರುತ್ತವೆ ಎನ್ನುವುದನ್ನು ಕಮರ್ಷಿಯಲ್ ಆಗಿ ಕಟ್ಟಿಕೊಡುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡಲಾಗುತ್ತಿದೆ. ಬರೀ ಇದಿಷ್ಟೇ ಅಲ್ಲದೇ ಹಲವು ವಿಚಾರಗಳು ಚಿತ್ರದಲ್ಲಿದೆ. ಈಗಾಗಲೇ ಶೇಕಡಾ 70ರಷ್ಟು ಚಿತ್ರೀಕರಣ ಮುಗಿದಿದೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ಗಿರೀಶ್.
ಇದನ್ನೂ ಓದಿ: ಬಾಲಿವುಡ್ ಮತ್ತು ತಮ್ಮ ಚಿತ್ರಗಳ ನಡುವಿನ ವ್ಯತ್ಯಾಸವೇನು? ರಾಜಮೌಳಿ ಹೇಳ್ತಾರೆ ಕೇಳಿ …
ಈ ಹಿಂದೆ ಬಾಲನಟನಾಗಿ ಖ್ಯಾತಿ ಗಳಿಸಿದ್ದ ‘ಪ್ರಣಯ ರಾಜ ಶ್ರೀನಾಥ್ ಅವರ ಮಗ ರೋಹಿತ್ ಶ್ರೀನಾಥ್, ‘ಫಸ್ಟ್ ಡೇ ಫಸ್ಟ್ ಶೋ’ ಮೂಲಕ ಬಹಳ ವರ್ಷಗಳ ನಂತರ ಚಿತ್ರಗಳಲ್ಲಿ ನಟಿಸುವುದಕ್ಕೆ ವಾಪಸ್ಸಾಗಿದ್ದಾರೆ. , ಅನಿರುದ್ ಶಾಸ್ತ್ರಿ, ಬಿ.ಎಂ. ವೆಂಕಟೇಶ್, ಹರೀಶ್ ಅರಸು ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಹರಿ ಅಜಯ್ ಮತ್ತು ಕಾರ್ತಿಕ್ ಭೂಪತಿ ಸಂಗೀತ ಈ ಚಿತ್ರಕ್ಕಿದೆ.