ವಿಜಯಪುರ: ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಠಿಕೋನದೊಂದಿಗೆ ಶಾಸಕರ ವಿಶೇಷ ಕಾಳಜಿಯ ಫಲವಾಗಿ ಮಂಜೂರಾಗಿ ಬಂದ ಮಹತ್ವಾಕಾಂಕ್ಷಿ ಯೋಜನೆಯೊಂದು ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಮಣ್ಣು ಪಾಲಾಗುತ್ತಿದೆ !
ಹೌದು, ಇಂಡಿ ತಾಲೂಕಿನ ರೋಡಗಿ-ಮಿರಗಿ ರಸ್ತೆ ಕಾಮಗಾರಿ ಪರಿಶೀಲಿಸಿದ ಯಾರಿಗಾದರೂ ಇಂಥದ್ದೊಂದು ಖೇದ ಉಂಟಾಗದಿರದು. ಅಧಿಕಾರಿಗಳ ನಿರ್ಲಕ್ಷೃವೋ…..ಗುತ್ತಿಗೆದಾರರ ಬೇಜವಾಬ್ದಾರಿಯೋ…..ಒಟ್ಟಿನಲ್ಲಿ ಶಾಸಕರ ವಿಶೇಷ ಕಾಳಜಿಯಿಂದಾಗಿ ಬಂದ ಅನುದಾನ ಮಾತ್ರ ಸದ್ಭಳಕೆಯಾಗದಿರುವುದು ವ್ಯವಸ್ಥೆಯ ಅಣಕವೆಂಬಂತಾಗಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಕೈಗೊಂಡ ಈ ಕಾಮಗಾರಿ ಅಂದುಕೊಂಡಂತೆ ಆಗುತ್ತಿಲ್ಲವೆಂಬುದಕ್ಕೆ ರೋಡಗಿ-ಮಿರಗಿ ರಸ್ತೆ ಸ್ಯಾಂಪಲ್ ಮಾತ್ರ. ಇನ್ನೂ ಅನೇಕ ಕಾಮಗಾರಿಗಳು ಗುತ್ತಿಗೆದಾರರ ನಿಷ್ಕಾಳಜಿ ಫಲವಾಗಿ ಗುಣಮಟ್ಟ ಕಳೆದುಕೊಳ್ಳುತ್ತಿರುವ ಆರೋಪ ವ್ಯಾಪಕವಾಗಿದೆ.
ಏನಿದು ಕಾಮಗಾರಿ?
ಮುಖ್ಯಮಂತ್ರಿ ವಿಶೇಷ ಅನುದಾನದಡಿ ರಾಜ್ಯ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ತಂದಿರುವ ಶಾಸಕರಿಗೆ ಗುತ್ತಿಗೆದಾರರು ಶಾಕ್ ನೀಡಿದ್ದಾರೆನ್ನಲಡ್ಡಿಯಿಲ್ಲ. ಶಾಸಕರುಗಳು ತಮ್ಮ ಭಾಗದ ಅಭಿವೃದ್ಧಿಗಾಗಿ ಅನುದಾನ ತಂದರೆ ಗುತ್ತಿಗೆದಾರರು ಕೆಲವೆಡೆ ಆಮೆವೇಗದ ಕಾಮಗಾರಿ ಕೈಗೊಂಡರೆ ಇನ್ನೂ ಕೆಲವೆಡೆ ತರಾತುರಿಯಲ್ಲಿ ಕಾಮಗಾರಿ ಕೈಗೊಂಡಿದ್ದು, ಗುಣಮಟ್ಟದ ಪ್ರಶ್ನೆ ಎದುರಾಗಿದೆ. ರೋಡಗಿ- ಮಿರಗಿ ಗ್ರಾಮಗಳ ಮಧ್ಯೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ನಿಗದಿತ ಅವಧಿ ಮುಗಿದರೂ ಪೂರ್ಣಗೊಂಡಿಲ್ಲ. ಅಸಲಿಗೆ ಈ ಕಾಮಗಾರಿ ಆರಂಭಗೊಂಡಿದ್ದಾರೂ ಎಂದು, ಮುಗಿಯಬೇಕಾಗಿದ್ದು ಯಾವಾಗ? ಎಂಬುದೇ ಅಧಿಕಾರಿಗಳಿಗೆ ತಿಳಿದಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಲಾಗಿ ‘ಸಮರ್ಪಕ ಮಾಹಿತಿ ನೀಡದೆ ನುಣುಚಿಕೊಳ್ಳುತ್ತಿರುವುದು’ ಗಮನಿಸಿದರೆ ಅನುಮಾನ ಇಮ್ಮಡಿಸುತ್ತಿದೆ.
ಕಾಮಗಾರಿ ವಿವರ
ರೋಡಗಿ ಮತ್ತು -ಮಿರಗಿ ಗ್ರಾಮಗಳ ಮಧ್ಯೆ 1.5 ಕಿಮೀ ರಸ್ತೆ ಕಾಮಗಾರಿಗೆ ವಿಶೇಷ ಅನುದಾನ ಮತ್ತು ಪ್ರವಾಹ ನಿಯಂತ್ರಣ ಯೋಜನೆ-5054ರ ಅನುದಾನದಡಿ ಒಟ್ಟು 50 ಲಕ್ಷ ರೂ. ನಿಗದಿಪಡಿಸಲಾಗಿದೆ. ಎ.ಎಸ್. ಅಲಗೊಂಡ ಎಂಬುವರಿಗೆ ಗುತ್ತಿಗೆ ನೀಡಲಾಗಿದೆ ಎನ್ನಲಾಗಿದ್ದು, ಈ ಗುತ್ತಿಗೆದಾರ ಸಕಾಲಕ್ಕೆ ಕಾಮಗಾರಿ ಪೂರ್ಣಗೊಳಿಸದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. 2022ರಲ್ಲಿಯೇ ಈ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದ್ದು, ಈವರೆಗೂ ಮುಕ್ತಾಯಗೊಂಡಿಲ್ಲ. ನಿಗದಿತ ಅವಧಿ ಮುಗಿದಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರಾದರೂ ಅಧಿಕಾರಿಗಳು ಮಾತ್ರ ಸ್ಪಷ್ಟಪಡಿಸುತ್ತಿಲ್ಲ. ರಸ್ತೆ ತುಂಬ ಸಣ್ಣ ಕಡಿ ಹರಡಿಕೊಂಡಿದ್ದು ಸಾರ್ವಜನಿಕರ ಸುಗಮ ಸಂಚಾರಕ್ಕೆ ಸಂಚಕಾರ ತಂದಿದೆ. ಹೀಗಾಗಿ ತ್ವರಿತವಾಗಿ ಕಾಮಗಾರಿ ಪೂರೈಸಬೇಕೆಂಬುದು ಗ್ರಾಮಸ್ಥರ ಆಗ್ರಹ.
ರೋಡಗಿ-ಮಿರಗಿ ರಸ್ತೆಗೆ 2022ರಲ್ಲಿ ಕಾರ್ಯಾದೇಶ ನೀಡಲಾಗಿದೆ. ರಸ್ತೆ ವ್ಯಾಪ್ತಿಯಲ್ಲಿ ಸಣ್ಣ ಮನೆ ಇದ್ದು ತೆರವು ಮಾಡಬೇಕಿದೆ. ಡಾಂಬರು ಕಾಮಗಾರಿ ಬಾಕಿ ಇದೆ. ಸಂಪೂರ್ಣ ವಿವರ ಒದಗಿಸಲಾಗುವುದು. ಎಸ್.ಬಿ. ಚವಾಣ್, ಎಇಇ ಪಿಆರ್ಇಡಿ ವಿಭಾಗ ಇಂಡಿ
ಸಕಾಲಕ್ಕೆ, ಸಮರ್ಪಕವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ರಸ್ತೆಗಳ ಗುಣಮಟ್ಟ ಪರೀಕ್ಷೆಯಾಗಬೇಕು. ಅಲ್ಲಿಯವರೆಗೆ ಗುತ್ತಿಗೆದಾರರಿಗೆ ಯಾವುದೇ ರೀತಿಯ ಬಿಲ್ ಪಾವತಿಸಕೂಡದು. ಈಗಾಗಲೇ ಕಾಮಗಾರಿಗಳನ್ನು ಪರಿಶೀಲಿಸಲಾಗಿದ್ದು, ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ನಡೆದಿದೆ. ಆದಷ್ಟು ಬೇಗ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಶಿವಾನಂದ ಯಡಹಳ್ಳಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆಆರ್ಎಸ್ ಪಕ್ಷ