More

    ವಿಜಯವಾಣಿ ಸಿನಿಮಾ ವಿಮರ್ಶೆ: ರಾಬರ್ಟ್, ಸಂತನೊಳಗಿನ ಸೇಡಿನ ಕಥೆ!

    • ಚಿತ್ರ: ರಾಬರ್ಟ್, ನಿರ್ದೇಶನ: ತರುಣ್ ಸುಧೀರ್, ನಿರ್ಮಾಣ: ಉಮಾಪತಿ ಶ್ರೀನಿವಾಸ್ ಗೌಡ, ತಾರಾಗಣ: ದರ್ಶನ್, ಆಶಾ ಭಟ್, ಶಿವರಾಜ್ ಕೆ.ಆರ್.ಪೇಟೆ, ಜಗಪತಿ ಬಾಬು, ರವಿಶಂಕರ್, ಮುಂತಾದವರು

    ಇವನು ಅವನೇನಾ? ಅವರಿಬ್ಬರಿಗೂ ಸಂದೇಹವಾಗುತ್ತದೆ. ಎಲ್ಲರೂ ಅವನನ್ನು ಒಬ್ಬ ಸಾಧಾರಣ ಅಡುಗೆ ಭಟ್ಟ ಎನ್ನುತ್ತಿದ್ದಾರೆ. ಆದರೆ, ಫೋಟೋ ನೋಡಿದರೆ ಅವನು ಕುಖ್ಯಾತ ಗ್ಯಾಂಗ್​ಸ್ಟರ್ ರಾಬರ್ಟ್ ತರಹ ಕಾಣುತ್ತಿದ್ದಾನೆ. ಇಷ್ಟಕ್ಕೂ ಅವನು ಯಾರು? ರಾಘವನಾ? ಅಥವಾ ರಾಬರ್ಟಾ? ಅವರಿಬ್ಬರೂ ಈ ಪ್ರಶ್ನೆಗೆ ಉತ್ತರ ಹುಡುಕುವಲ್ಲಿಗೆ ಚಿತ್ರದ ಮೊದಲಾರ್ಧ ಮುಗಿಯುತ್ತದೆ.

    ‘ರಾಬರ್ಟ್’ ಒಬ್ಬ ವ್ಯಕ್ತಿಯ ಭೂತ ಮತ್ತು ವರ್ತಮಾನದ ಕಥೆ. ವರ್ತಮಾನದಲ್ಲಿ ವಾರಣಾಸಿಯಲ್ಲಿ ಸಂತನಂತಿರುವ ಅಡುಗೆ ಭಟ್ಟನಿಗೊಂದು ಮರೆಯಲಾಗದ ನೋವಿನ ಕಥೆಯಿರುತ್ತದೆ. ತನ್ನ ವೈಲೆಂಟ್ ಫ್ಲಾಶ್​ಬ್ಯಾಕ್ ಮರೆಯುವುದಕ್ಕೆ ಮತ್ತು ಮರೆಸುವುದಕ್ಕೆ ಆತ ಸೈಲೆಂಟ್ ಆಗಿ ಅಲ್ಲೆಲ್ಲೋ ಹೋಗಿ ಯಾರಿಗೂ ಗೊತ್ತಾಗದಂತೆ ಬದುಕುತ್ತಿರುತ್ತಾನೆ. ಒಂದು ಘಟನೆಯಿಂದಾಗಿ ಆತನ ಕರಾಳ ಇತಿಹಾಸ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಇಷ್ಟಕ್ಕೂ ಯಾಕೆ ಮತ್ತು ಹೇಗೆ?

    ಇಷ್ಟು ಮಾತ್ರ ಕೇಳಿ, ಚಿತ್ರದಲ್ಲಿ ‘ಕೋಟಿಗೊಬ್ಬ’ ಛಾಯೆ ಇದೆ ಎಂಬ ತೀರ್ವನಕ್ಕೆ ಬಂದುಬಿಡಬೇಡಿ. ಕಥೆಯ ಎಳೆ ಹಾಗೆಯೇ ಇದ್ದರೂ, ಅದನ್ನು ಈಗಿನ ಕಾಲಘಟಕ್ಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದರ್ಶನ್ ಅಭಿಮಾನಿಗಳಿಗೆ ಇಷ್ಟವಾಗುವಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ತರುಣ್ ಸುಧೀರ್. ಹಾಗಂತ ಇದು ಅಭಿಮಾನಿಗಳಿಗೆ ಮಾತ್ರ ಸೀಮಿತವೇನಲ್ಲ. ಇಡೀ ಫ್ಯಾಮಿಲಿ ಕುಳಿತು ನೋಡಬಹುದಾದ ಚಿತ್ರ.

    ಎಲ್ಲ ವಯಸ್ಸಿನವರಿಗೂ ಇಷ್ಟವಾಗುವ ಅಂಶಗಳು ಚಿತ್ರದಲ್ಲಿದ್ದು, ಅದನ್ನು ಬಹಳ ಚೆನ್ನಾಗಿ ಪೋಣಿಸುತ್ತಾ ಹೋಗುತ್ತಾರೆ ತರುಣ್. ಇದೆಲ್ಲದರಿಂದ ಚಿತ್ರದ ಮೊದಲಾರ್ಧ ಹೋಗುವುದೇ ಗೊತ್ತಾಗುವುದಿಲ್ಲ. ದ್ವಿತೀಯಾರ್ಧದಲ್ಲಿ ವೇಗ ಕಡಿಮೆಯಾಯಿತು, ಹಾಡುಗಳು ಬೇಡವಾಗಿತ್ತು ಎಂದನಿಸಿದರೂ, ಕ್ಲೈಮ್ಯಾಕ್ಸ್ ಹೊತ್ತಿಗೆ ಮತ್ತೆ ಚಿತ್ರವನ್ನು ಸರಿದಾರಿಗೆ ತಂದು ನಿಲ್ಲಿಸುತ್ತಾರೆ.

    ಪ್ರೇಕ್ಷಕರಿಗೆ ಇಷ್ಟವಾಗುವಂತೆ ಚಿತ್ರವನ್ನು ಕಟ್ಟಿಕೊಡಲು ತರುಣ್ ಜತೆಗೆ ಹಲವರು ಶ್ರಮಿಸಿದ್ದಾರೆ. ಅದರಲ್ಲೂ ಚಿತ್ರದ ಇಂಚಿಂಚನ್ನೂ ಅದ್ದೂರಿಯಾಗಷ್ಟೇ ಅಲ್ಲ, ಕಲರ್​ಫುಲ್ ಆಗಿ ತೋರಿಸಿರುವ ಛಾಯಾಗ್ರಾಹಕ ಸುಧಾಕರ್ ರಾಜ್ ಅವರ ಪಾಲು ಜಾಸ್ತಿ ಇದೆ. ಅರ್ಜುನ್ ಜನ್ಯ ಅವರ ಹಾಡುಗಳು ಈಗಾಗಲೇ ಮೆಚ್ಚುಗೆ ಪಡೆದಿವೆ. ಹಿನ್ನೆಲೆ ಸಂಗೀತದಲ್ಲೂ ಪಾರಮ್ಯ ಮೆರೆದಿದ್ದಾರೆ. ಸಂಭಾಷಣೆ, ಕಲಾ ನಿರ್ದೇಶನ ಎಲ್ಲ ವಿಭಾಗಗಳು ಸಹ ಮೆಚ್ಚುಗೆ ಗಳಿಸುತ್ತವೆ.

    ಇದೆಲ್ಲ ಒಂದು ತೂಕವಾದರೆ, ಇನ್ನೊಂದು ತೂಕ ದರ್ಶನ್. ಎರಡು ಶೇಡ್​ಗಳ ಪಾತ್ರವನ್ನು ಅವರು ಚೆನ್ನಾಗಿ ತೂಗಿಸಿಕೊಂಡು ಹೋಗುತ್ತಾರೆ. ಹಾಡು, ಫೈಟುಗಳಲ್ಲಂತೂ ಅವರ ಬಗ್ಗೆ ಹೇಳುವುದೇ ಬೇಡ. ಆಶಾ ಭಟ್​ಗೆ ಹೆಚ್ಚು ಕೆಲಸವೇನಿಲ್ಲ. ಶಿವರಾಜ್ ಕೆ.ಆರ್.ಪೇಟೆ ಅವರಿಗೊಂದು ವಿಭಿನ್ನ ಪಾತ್ರ ಸಿಕ್ಕಿದೆ ಮತ್ತು ಅವರು ತಮಗೆ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಜಗಪತಿ ಬಾಬು, ರವಿಶಂಕರ್, ರವಿಕಿಶನ್ ಹೀಗೆ ಹಲವು ವಿಲನ್​ಗಳು ಚಿತ್ರದಲ್ಲಿದ್ದು, ಎಲ್ಲರೂ ತಮ್ಮದೇ ರೀತಿಯಲ್ಲಿ ದರ್ಶನ್​ಗೆ ಸವಾಲೆಸೆೆಯುತ್ತಾರೆ. ಪ್ರಮುಖ ಪಾತ್ರದಲ್ಲಿ ವಿನೋದ್ ಪ್ರಭಾಕರ್ ಗಮನಸೆಳೆಯುತ್ತಾರೆ. (ಚೇತನ್ ನಾಡಿಗೇರ್)

    ಶ್ರದ್ಧಾ ಕಪೂರ್​ ಹಾಕಿರುವ ಈ ಬಿಕಿನಿ ರೇಟ್ ಕೇಳಿದ್ರೆ ನೀವು ಹೌಹಾರೋದು ಗ್ಯಾರಂಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts