ಅಗರ್ತಲ: ನಾಳೆಯಿಂದ ಆರು ದಿನ ಎಲ್ಲ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳು ಬಂದ್ ಇರಲಿವೆ. ಈ ಕುರಿತು ಸರ್ಕಾರವೇ ಪ್ರಕಟಣೆಯನ್ನು ಹೊರಡಿಸಿದ್ದು, ಕಾರಣವನ್ನೂ ತಿಳಿಸಿದೆ. ಅತಿಯಾದ ಬಿಸಿಲಿನ ತಾಪದಿಂದಾಗಿ ಇಂಥದ್ದೊಂದು ನಿರ್ಧಾರ ತಳೆದಿದ್ದಾಗಿ ಸರ್ಕಾರ ಹೇಳಿದೆ.
ಶಾಲಾ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಏ. 18ರಿಂದ ಏ. 23ರ ವರೆಗೆ ಎಲ್ಲ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳು ಮುಚ್ಚಿರಲಿವೆ ಎಂದು ಆದೇಶವನ್ನು ಹೊರಡಿಸಲಾಗಿದೆ. ಅಂದಹಾಗೆ ಇಂಥದ್ದೊಂದು ಆದೇಶವನ್ನು ಮಾಡಿರುವುದು ತ್ರಿಪುರ ರಾಜ್ಯ ಸರ್ಕಾರ.
ಇದನ್ನೂ ಓದಿ: ಪಕ್ಷಕ್ಕಾಗಿ ದುಡಿದಿದ್ದಾನಂತೆ ಸೈಲೆಂಟ್ ಸುನೀಲ್; ಆತ ಪಕ್ಷದ ಸದಸ್ಯನೇ ಅಲ್ಲ ಎಂದ ಕಟೀಲ್
ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಇದೇ ಅವಧಿಯಲ್ಲಿ ಮುಚ್ಚಿರಬೇಕು ಎಂದೂ ಸರ್ಕಾರ ಸೂಚಿಸಿದೆ. ಬೇಸಿಗೆಯಲ್ಲಿ ಇಲ್ಲಿ ಸಾಮಾನ್ಯವಾಗಿ ಇರುವ ಗರಿಷ್ಠ ಉಷ್ಣಾಂಶಗಿಂತ 5-6 ಡಿ.ಸೆ. ಅಧಿಕ ತಾಪಮಾನವಿದ್ದು, ಸದ್ಯ 39ರಿಂದ 40 ಡಿ.ಸೆ. ಗರಿಷ್ಠ ಉಷ್ಣಾಂಶ ಇದೆ ಎಂದು ಮೂಲಗಳು ತಿಳಿಸಿವೆ.