ಮಂಗಳೂರು: ತಮ್ಮ ವಿಭಿನ್ನ ಮ್ಯಾನರಿಸಂ ಹಾಗೂ ನಿರ್ದೇಶನದ ಮೂಲಕ ಸಿನಿ ರಸಿಕರನ್ನು ರಂಜಿಸುತ್ತ ಬಂದಿರುವ ನಟ ರಿಷಭ್ ಶೆಟ್ಟಿ ಆಗಿಂದಾಗೆ ತಮ್ಮ ಕೆಲಸ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಇದಕ್ಕೆ ಪೂರಕವೆಂಬಂತೆ ಅವರ ಈ ಒಂದು ಕೆಲಸವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಿನಿಮಾದಲ್ಲಿ ನೀಡಿದ ಸಂದೇಶ ಒಂದನ್ನು ನಿಜಜೀವನದಲ್ಲಿ ಮಾಡಿತೋರಿಸಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಮೂಲಕ ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ಜಾಗೃತಿ ಮೂಡಿಸಿದ್ದ ನಟ, ನಿರ್ದೇಶಕ ರಿಷಭ್ ಶೆಟ್ಟಿ ಸಿನಿಮಾದಲ್ಲಿ ಮಾತ್ರವಲ್ಲದೆ ನಿಜಜೀವನದಲ್ಲಿ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ತಾವು ಓದಿದ ಕೆರಾಡಿ ಸರ್ಕಾರಿ ಕನ್ನಡ ಶಾಲೆಯನ್ನು ದತ್ತು ಪಡೆದಿದ್ಧಾರೆ.
ಇತ್ತೀಚಿಗೆ ಕೆರಾಡಿಗೆ ಭೇಟಿ ನೀಡಿದ್ದ ಅವರು, ಸರ್ಕಾರಿ ಶಾಲೆಗಳನ್ನು ಉಳಿಸುವ ಮತ್ತು ಬೆಳೆಸುವ ಬಗ್ಗೆ ಮಾತನಾಡಿದ್ದರು. ಈ ವೇಳೆ ಗ್ರಾಮದ ಪ್ರಮುಖರು ರಿಷಭ್ ಶೆಟ್ಟಿ ಅವರನ್ನು ಅಭಿನಂದಿಸಿ ಶುಭಹಾರೈಸಿದ್ದಾರೆ. ತಾವು ಓದಿದ ಶಾಲೆಯನ್ನೇ ದತ್ತು ಪಡೆದಿರುವ ನಟನ ನಡೆಗೆ ಮೆಚ್ಚುಗೆಯೆ ಮಹಾಪೂರವೇ ಹರಿದು ಬರುತ್ತಿದ್ದು, ನೀವು ಎಲ್ಲರಿಗೂ ಮಾದರಿಯಾಗಿದ್ದೀರಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಕಾಂತಾರದಲ್ಲಿ ಬ್ಯುಸಿ
ರಿಷಭ್ ಶೆಟ್ಟಿ ಕಾಂತಾರ ಅಧ್ಯಾಯ-1ರ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಟೀಸರ್ ಮಿಲಿಯನ್ಗೂ ಅಧಿಕ ವೀವ್ಸ್ ಪಡೆದಿದ್ದು, ರಿಷಭ್ ಶೆಟ್ಟಿ ಲುಕ್ಗೆ ಸ್ಟಾರ್ ನಟರು ಫಿದಾ ಆಗಿದ್ದಾರೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಅನೇಕ ಸ್ಟಾರ್ ನಟರು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.