ಪಟ್ನಾ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ಸಿದ್ದತೆ ನಡೆಸಿದ್ದು, ಈ ಮಧ್ಯೆ ಹಿರಿಯ ರಾಜಕಾರಣಿಗಳು ತಮ್ಮ ಬದಲಾಗಿ ಮಕ್ಕಳನ್ನು ಚುನಾವಣಾ ಕಣಕ್ಕೆ ಇಳಿಸಲು ಸಿದ್ದತೆ ನಡೆಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಪುತ್ರಿ ಅವರನ್ನು ರಾಜಕೀಯಕ್ಕೆ ಕರೆತರಲು ಸಿದ್ದತೆಗಳು ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಇದಕ್ಕೆ ಪೂರಕವೆಂಬಂತೆ ಲಾಲು ಪ್ರಸಾದ್ ಅವರ ಕಿರಿಯ ಪುತ್ರಿ ರೋಹಿಣಿ ಆಚಾರ್ಯ ಮಾರ್ಮಿಕವಾಗಿ ನುಡಿದಿದ್ದು, ರಾಜಕೀಯ ಪ್ರವೇಶ ಸುದ್ದಿಗೆ ರೆಕ್ಕೆ ಬಂದಂತಾಗಿದೆ. ತಮ್ಮ ತಂದೆಗೆ ಕಿಡ್ನಿ ದಾನ ಮಾಡುವ ಮೂಲಕ ರೋಹಿಣಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಈ ಕುರಿತು ಮಾತನಾಡಿರುವ ರೋಹಿಣಿ ಭವಿಷ್ಯದಲ್ಲಿ ಏನಾಗಲಿದೆ ಎಂದು ಯಾರಿಂದಲೂ ನಿರೀಕ್ಷಿಸಲು ಸಾಧ್ಯವಿಲ್ಲ. ಅದರ ಬಗ್ಗೆ ನನಗೆ ಏನೂ ತಿಳಿದಿಲ್ಲ. ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿಯುವ ಮೂಲಕ ರಾಜಕೀಯ ಪ್ರವೇಶದ ಸುಳಿವನ್ನು ನೀಡಿದ್ದಾರೆ. ಒಂದು ವೇಳೆ ರೋಹಿಣಿ ಸಕ್ರಿಯ ರಾಜಕೀಯವನ್ನು ಪ್ರವೇಶಿಸಿದರೆ ಲಾಲು ಕುಟುಂಬದ ಆರನೇ ಸದಸ್ಯೆ ಇವರಾಗಲಿದ್ದಾರೆ.
ನಮಗೆ ಲಾಭ ಎಂದ ಬಿಜೆಪಿ
ಈ ಕುರಿತು ಪ್ರತಿಕ್ರಿಯಿಸಿರುವ ಆರ್ಜೆಡಿಯ ಹಿರಿಯ ನಾಯಕರೊಬ್ಬರು, ರೋಹಿಣಿ ತಮ್ಮ ಕಿಡ್ನಿಯನ್ನು ದಾನ ಮಾಡುವ ಮೂಲಕ ಸಮಾಜದಲ್ಲಿ ಒಬ್ಬ ಆದರ್ಶ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಬಗ್ಗೆ ನಮಗೆ ಹೆಮ್ಮೆಯಿದ್ದು, ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಗೆಲುವು ಖಚಿತ ಎಂದು ಆರ್ಜೆಡಿ ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಲಾಲು ಕಿರಿಯ ಪುತ್ರಿ ರಾಜಕೀಯ ಪ್ರವೇಶದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಮನೋಜ್ ಶರ್ಮಾ, ರಾಷ್ಟ್ರೀಯ ಜನತಾ ದಳ (RJD) ಕುಟುಂಬ ಆಧಾರಿತ ಒಕ್ಷವಾಗಿದ್ದು, ರೋಹಿಣಿ ಅವರು ರಾಜಕೀಯ ಪ್ರವೇಶಿಸುತ್ತಿರುವುದು ಅಚ್ಚರಿ ಪಡುವಂತಹ ವಿಚಾರವೇನಲ್ಲ. ಇದರಿಂದ ಬಿಜೆಪಿಗೆ ಲಾಭವಾಗಲಿದೆ ಹೊರತು ನಾವು ತಲೆಕೆಡಿಸಿಕೊಳ್ಳುವಂತಹ ವಿಚಾರವೇನಲ್ಲ ಎಂದು ಹೇಳಿದ್ದಾರೆ.