More

    ಅಕ್ಕಿ ರಫ್ತು ನಿಷೇಧ; ಪರಿಣಾಮ ಅಗಾಧ

    ಭಾರತದಿಂದ ಒಟ್ಟಾರೆಯಾಗಿ ರಫ್ತು ಮಾಡುವ ಅಕ್ಕಿಯ ಪೈಕಿ ಈಗ ನಿಷೇಧಿಸಲಾಗಿರುವ ಬಿಳಿ ಅಕ್ಕಿಯ ಪ್ರಮಾಣವು ಶೇಕಡಾ 25 ರಷ್ಟಿದೆ. ಇದರ ರಫ್ತು ನಿಷೇಧದಿಂದಾಗಿ ಜಾಗತಿಕ ಅಕ್ಕಿ ವ್ಯಾಪಾರದಲ್ಲಿ 45-50 ಲಕ್ಷ ಟನ್​ ಅಕ್ಕಿ ಕೊರತೆಯಾಗಲಿದೆ ಎನ್ನಲಾಗಿದೆ. 

    ಕಪ್ಪು ಸಮುದ್ರ ಧಾನ್ಯ ಒಪ್ಪಂದದಿಂದ ರಷ್ಯಾ ಹಿಂದೆಗೆದ ನಂತರ ಈಗ ಜಾಗತಿಕ ಆಹಾರ ಬೆಲೆಗಳು ಮತ್ತಷ್ಟು ಹೆಚ್ಚಳವಾಗುವ ಅಪಾಯ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಭಾರತ ಸರ್ಕಾರವು ಬಾಸ್ಮತಿ ಹೊರತುಪಡಿಸಿದ ಬಿಳಿ ಅಕ್ಕಿಯ ರಫ್ತು ನಿಷೇಧ ಕ್ರಮ ಕೈಗೊಂಡಿದೆ. ಬಾಸ್ಮತಿ ಹೊರತುಪಡಿಸಿದ ಬಿಳಿ ಅಕ್ಕಿಯ ರಫ್ತು ನೀತಿ ಪರಿಷ್ಕರಿಸಲಾಗಿದ್ದು, ಇದರ ರಫ್ತಿನ ಮೇಲೆ ನಿಷೇಧ ಹೇರಲಾಗಿದೆ ಎಂದು ಡಿಜಿಎಫ್​ಟಿ (ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ) ಅಧಿಸೂಚನೆಯಲ್ಲಿ ತಿಳಿಸಿದೆ.

    ಕಪ್ಪು ಸಮುದ್ರದ ಮೂಲಕ ಯೂಕ್ರೇನ್​ನ ಧಾನ್ಯ ಸಾಗಣೆಗೆ ಅವಕಾಶ ನೀಡುವ ಒಪ್ಪಂದದಿಂದ ರಷ್ಯಾದ ನಿರ್ಗಮಿಸಿರುವುದು ಜಾಗತಿಕ ಆಹಾರ ಭದ್ರತೆಗೆ ಬೆದರಿಕೆ ಒಡ್ಡಿದೆ. ಅದರಲ್ಲೂ ವಿಶೇಷವಾಗಿ ಕಡಿಮೆ ಆದಾಯದ ದೇಶಗಳಲ್ಲಿ ಆಹಾರದ ಬೆಲೆಗಳು ಇದರಿಂದಾಗಿ ಹೆಚ್ಚಾಗಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಎಚ್ಚರಿಸಿದೆ.

    ವಿಯೆಟ್ನಾಂ, ಥೈಲ್ಯಾಂಡ್ ಮತ್ತು ಪಾಕಿಸ್ತಾನದಿಂದ ಮಾರಾಟವಾಗುವ ಅಕ್ಕಿಗಿಂತಲೂ ಭಾರತದ ಅಕ್ಕಿ ಬೆಲೆಗಳು ಸಾಮಾನ್ಯವಾಗಿ ಅಗ್ಗವಾಗಿರುತ್ತವೆ. ಹೀಗಾಗಿ, ಭಾರತದ ಅಕ್ಕಿಯ ಮೇಲೆ ಹೆಚ್ಚು ಅವಲಂಬಿತವಾಗಿರುವ ಆಫ್ರಿಕಾದ ಬಡ ದೇಶಗಳಿಗೆ ಇದರಿಂದ ಮುಂದಿನ ದಿನಗಳಲ್ಲಿ ತೊಂದರೆ ಎದುರಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಭಾರತದಿಂದ ಒಟ್ಟಾರೆ ರಫ್ತು ಮಾಡುವ ಅಕ್ಕಿಯ ಪೈಕಿ ಈಗ ನಿಷೇಧಿಸಲಾಗಿರುವ ಬಿಳಿ ಅಕ್ಕಿಯ ಪ್ರಮಾಣವು ಶೇಕಡಾ 25ರಷ್ಟಿದೆ. ಇದರ ರಫ್ತು ನಿಷೇಧದಿಂದಾಗಿ ಜಾಗತಿಕ ಅಕ್ಕಿ ವ್ಯಾಪಾರದಲ್ಲಿ 40-50 ಲಕ್ಷ ಟನ್ ಅಕ್ಕಿ ಕೊರತೆಯಾಗಲಿದೆ ಎನ್ನಲಾಗಿದೆ.

    ಜಾಗತಿಕ ಅಕ್ಕಿ ವ್ಯಾಪಾರದಲ್ಲಿ ಪ್ರಮುಖ ಪಾಲು ಹೊಂದಿರುವ ಭಾರತವು ಕೆಲವು ಅಕ್ಕಿ ತಳಿಗಳ ವ್ಯಾಪಾರದ ಮೇಲೆ ನಿಯಂತ್ರಣವನ್ನು ಬಲಪಡಿಸಲು ಇತ್ತೀಚಿನ ತಿಂಗಳುಗಳಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ 2022ರ ಸೆಪ್ಟೆಂಬರ್​ನಲ್ಲಿ ತುಂಡಾದ ಅಕ್ಕಿಯ ರಫ್ತಿನ ಮೇಲೆ ನಿಷೇಧವನ್ನು ಜಾರಿಗೊಳಿಸಿದೆ.

    ಸರ್ಕಾರವು ಕೆಲವು ದಿನಗಳ ಮಟ್ಟಿಗೆ ಒಂದಿಷ್ಟು ಷರತ್ತುಗಳ ಆಧಾರದಲ್ಲಿ ಬಿಳಿ ಅಕ್ಕಿ ರಫ್ತು ಮಾಡಲು ಅನುಮತಿ ನೀಡಿದೆ. ಉದಾಹರಣೆಗೆ, ರಫ್ತು ನಿಷೇಧಿಸುವ ಅಧಿಸೂಚನೆ ಹೊರಡಿಸುವ ಮೊದಲೇ ಹಡಗಿನಲ್ಲಿ ಅಕ್ಕಿ ಸರಕನ್ನು ಲೋಡ್ ಮಾಡಲು ಪ್ರಾರಂಭಿಸಿದ್ದರೆ ರಫ್ತಿಗೆ ಅವಕಾಶ ನೀಡಲಾಗುತ್ತದೆ.

    ಬಾಸ್ಮತಿ ಹೊರತುಪಡಿಸಿದ ಕಚ್ಚಾ ಮತ್ತು ಸ್ಟೀಮ್ ಅಕ್ಕಿಯ ಮೇಲಿನ ಪ್ರಸ್ತುತ ನಿಷೇಧವು ಕಡಿಮೆ ಬೆಲೆಯ ದಪ್ಪ ಧಾನ್ಯದ ಅಕ್ಕಿ (ಐಆರ್64/ರತ್ನ) ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಈ ಅಕ್ಕಿಯನ್ನು ಕಚ್ಚಾ ರೂಪದಲ್ಲಿ ಆಫ್ರಿಕಾದಂತಹ ಬಡ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಇದೇ ತಳಿಯ ಅಕ್ಕಿಯನ್ನು ಸರ್ಕಾರವು ಪಡಿತರಕ್ಕಾಗಿ (ಸಾರ್ವಜನಿಕ ವಿತರಣಾ ವ್ಯವಸ್ಥೆ) ಖರೀದಿಸುತ್ತದೆ. ಬಾಸ್ಮತಿ ಹೊರತುಪಡಿಸಿದ ಅರೆಬೆಯಿಸಿದ (ಪ್ಯಾರಾಬಾಯಿಲ್ಡ್ ರೈಸ್) ರೂಪದಲ್ಲಿ ಅಕ್ಕಿಯನ್ನು ರಫ್ತು ಮಾಡಲು ಈಗಲೂ ಅವಕಾಶವಿದೆ. ಹೀಗಾಗಿ, ಬಾಸ್ಮತಿ ಹೊರತುಡಿಸಿದ ಅಕ್ಕಿಯ ಒಟ್ಟಾರೆ ರಫ್ತಿನ ಮೇಲೆ ತೀವ್ರ ಪರಿಣಾಮ ಉಂಟಾಗುವುದಿಲ್ಲ ಎಂಬುದು ಕೆಲ ಅಕ್ಕಿ ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.

    ಬೆಲೆ ನಿಯಂತ್ರಣದ ಲೆಕ್ಕಾಚಾರ 

    ಕೇಂದ್ರ ಸರ್ಕಾರವು ಅಕ್ಕಿ ರಫ್ತು ಮಾಡುವುದರ ಮೇಲೆ ನಿರ್ಬಂಧ ಹಾಗೂ ಹೊರೆಯಾಗುವ ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ರಫ್ತು ಪ್ರಮಾಣ ಕಡಿಮೆಯಾಗದೆ ಹೆಚ್ಚಳವನ್ನೇ ಕಂಡಿದೆ. ಕಳೆದ ಹಣಕಾಸು ವರ್ಷದಲ್ಲಿ ರಫ್ತಿಗೆ ಪ್ರತಿಕೂಲವಾದ ಎರಡು ಕ್ರಮಗಳನ್ನು ಕೈಗೊಳ್ಳಲಾಗಿದೆ. ತುಂಡಾದ ಅಕ್ಕಿ ರಫ್ತಿನ ಮೇಲಿನ ನಿಷೇಧ ಮತ್ತು ಬಾಸ್ಮತಿ ಹೊರತುಪಡಿಸಿದ ಅಕ್ಕಿ ರಫ್ತಿನ ಮೇಲೆ ಶೇಕಡಾ 20 ಸುಂಕ ವಿಧಿಸಲಾಗಿತ್ತು. ಅಲ್ಲದೆ, ಅಕ್ಕಿ ಉತ್ಪಾದನೆಯು ಕುಸಿದಿದ್ದರೂ ಭಾರತದ ಒಟ್ಟಾರೆ ಅಕ್ಕಿ ರಫ್ತು ಶೇಕಡಾ 5-6 ರಷ್ಟು ಏರಿಕೆ ದಾಖಲಿಸಿದೆ. ಇದರ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆ ವ್ಯತ್ಯಯವಾಗಿ ಕಳೆದ ಹಣಕಾಸು ವರ್ಷದಲ್ಲಿ ಅಕ್ಕಿ ಬೆಲೆಗಳಲ್ಲಿ ಶೇಕಡಾ 14-15ರಷ್ಟು ಏರಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ. ದೇಶೀಯ ಆಹಾರ ಭದ್ರತೆ ಮತ್ತು ಬೆಲೆ ಏರಿಕೆ ನಿಯಂತ್ರಿಸುವ ದೃಷ್ಟಿಕೋನದಿಂದ ಸರ್ಕಾರವು ರಫ್ತು ನಿರ್ಬಂಧ ಕ್ರಮಗಳನ್ನು ಕೈಗೊಂಡಿದೆ. ಪ್ರಸ್ತುತ ನಿಷೇಧದಿಂದಾಗಿ ದೇಶೀಯ ಮಾರುಟಕ್ಟೆಗೆ 40-50 ಲಕ್ಷ ಟನ್, ಅಂದರೆ ಕಳೆದ ಹಣಕಾಸು ವರ್ಷದಲ್ಲಿ ರಫ್ತು ಮಾಡಲಾದ ಶೇ. 20ರಷ್ಟು ಅಕ್ಕಿಯು ದೇಶೀಯ ಮಾರುಕಟ್ಟೆಗೆ ಸರಬರಾಜಾಗುತ್ತದೆ. ಈ ಮೂಲಕ ಅಕ್ಕಿ ಚಿಲ್ಲರೆ ಮಾರಾಟ ಬೆಲೆಯು ನಿಯಂತ್ರಣಕ್ಕೆ ಬರುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.

    ಎಕ್ಸ್​ಪೋರ್ಟ್ ಕಿಂಗ್ ಇಂಡಿಯಾ

    ವಿಶ್ವದಲ್ಲಿಯೇ ಅತಿಹೆಚ್ಚು ಅಕ್ಕಿ ರಫ್ತು ಮಾಡುವ ದೇಶ ಭಾರತವಾಗಿದೆ. ಒಟ್ಟಾರೆ ಜಾಗತಿಕ ಅಕ್ಕಿ ರಫ್ತು ವ್ಯಾಪಾರದಲ್ಲಿ ಭಾರತದ ಪಾಲು ಶೇಕಡಾ 40ರಷ್ಟಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತಿಂಗಳಲ್ಲಿ 15.5 ಲಕ್ಷ ಟನ್ ಬಾಸ್ಮತಿ ಹೊರತುಪಡಿಸಿದ ಬಿಳಿ ಅಕ್ಕಿಯನ್ನು ಭಾರತ ರಫ್ತು ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 11.5 ಲಕ್ಷ ಟನ್ ಅಕ್ಕಿಯನ್ನು ರಫ್ತು ಮಾಡಲಾಗಿತ್ತು. ಇದೇ ಅವಧಿಯಲ್ಲಿ ಬಾಸ್ಮತಿ ಹೊರತುಪಡಿಸಿದ ಎಲ್ಲ ತಳಿಗಳ ಅಕ್ಕಿ ರಫ್ತು ಕಳೆದ ವರ್ಷ 43 ಲಕ್ಷ ಟನ್ ಆಗಿದ್ದರೆ, ಈ ವರ್ಷ 45 ಲಕ್ಷ ಟನ್​ಗೆ ಏರಿದೆ. 2022ರ ಸೆಪ್ಟೆಂಬರ್​ನಿಂದ ಶೇಕಡಾ 20ರಷ್ಟು ರಫ್ತು ಸುಂಕವನ್ನು ವಿಧಿಸಲಾಗಿದ್ದರೂ ಅಕ್ಕಿ ರಫ್ತು ಪ್ರಮಾಣ ಹೆಚ್ಚಳ ಕಂಡಿದೆ.

    ಬೆಲೆ ಏರಿದ್ದೇಕೆ?

    ಭಾರತದಲ್ಲಿ ಅಕ್ಕಿಯ ಬೆಲೆಗಳು ಕಳೆದ ಮೂರು ತಿಂಗಳಲ್ಲಿ ಶೇಕಡಾ 20-30ರಷ್ಟು ಮತ್ತು ಕಳೆದ 10-12 ದಿನಗಳಲ್ಲಿ ಅಂದಾಜು ಶೇಕಡಾ 10ರಷ್ಟು ಏರಿಕೆ ಕಂಡಿವೆ. ಏಕೆಂದರೆ ಕಳೆದ ಚಳಿಗಾಲದ ಋತುವಿನಲ್ಲಿ ಅಕ್ಕಿ ಕೊಯ್ಲು ಕಳಪೆಯಾಗಿದೆ. ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಮಳೆ ಕೊರತೆ ಮತ್ತು ಉತ್ತರ ಭಾರತದಲ್ಲಿ ಮಳೆಯ ಪ್ರವಾಹದ ನಡುವೆ ಮುಂಗಾರು ಬೆಳೆಯ ಬಿತ್ತನೆಯು ಕಡಿಮೆಯಾಗಿದೆ. ಅಲ್ಲದೆ, ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಶೇ.7ರಷ್ಟು ಏರಿಕೆ ಮಾಡಿದೆ. ಈ ಎಲ್ಲ ಕಾರಣಗಳಿಂದಾಗಿ ಅಕ್ಕಿ ಬೆಲೆ ಏರಿಕೆಯಾಗಿದೆ. ಭಾರತದ ಚಿಲ್ಲರೆ ಹಣದುಬ್ಬರವು ಮೇ ತಿಂಗಳಲ್ಲಿ ಶೇಕಡಾ 4.31ರಷ್ಟು ಇದ್ದುದು ಜೂನ್​ನಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟವಾದ ಶೇಕಡಾ 4.81ರಷ್ಟು ಹೆಚ್ಚಳ ಕಂಡಿದೆ. ಆಹಾರದ ಬೆಲೆ ಹಣದುಬ್ಬರವು ಹಿಂದಿನ ತಿಂಗಳಲ್ಲಿ ಶೇಕಡಾ 3ಕ್ಕಿಂತ ಕಡಿಮೆ ಇದ್ದುದು ಶೇಕಡಾ 4.5ಕ್ಕೆ ಏರಿಕೆಯಾಗಿದೆ. ಏಕೆಂದರೆ ಧಾನ್ಯಗಳು, ದ್ವಿದಳ ಧಾನ್ಯಗಳು, ಹಾಲು ಮತ್ತು ಟೊಮ್ಯಾಟೊಗಳಂತಹ ಸಾಮಗ್ರಿಗಳ ಬೆಲೆ ಏರಿಕೆ ಕಂಡಿವೆ.

    ಏನಿದು ಕಪು್ಪ ಸಮುದ್ರ ಧಾನ್ಯ ಒಪ್ಪಂದ?

    2022ರ ಜುಲೈನಲ್ಲಿ ರಷ್ಯಾ, ಟರ್ಕಿ ಹಾಗೂ ವಿಶ್ವ ಸಂಸ್ಥೆಯ ನಡುವೆ ಕಪು್ಪ ಸಮುದ್ರ ಧಾನ್ಯ ಒಪ್ಪಂದ ಏರ್ಪಟ್ಟಿತ್ತು. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಜಾಗತಿಕವಾಗಿ ಯೂಕ್ರೇನ್ ಮುಂಚೂಣಿಯಲ್ಲಿದೆ. ಆದರೆ, ರಷ್ಯಾ ಜತೆಗಿನ ಯುದ್ಧದಿಂದಾಗಿ ಯೂಕ್ರೇನ್​ನಿಂದ ಧಾನ್ಯಗಳ ರಫ್ತು ಮಾಡುವುದು ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ಯೂಕ್ರೇನ್​ನ ದಕ್ಷಿಣ ಭಾಗದ ಬಂದರುಗಳ ಮೂಲಕ ಧಾನ್ಯಗಳನ್ನು ಇತರೆ ದೇಶಗಳಿಗೆ ರವಾನಿಸುವ ನಿಟ್ಟಿನಲ್ಲಿ ರಷ್ಯಾ ಜತೆಗೆ ಈ ಒಪ್ಪಂದಕ್ಕೆ ಬರಲಾಗಿತ್ತು. ‘ಈ ಒಪ್ಪದಿಂದ ರಷ್ಯಾ ಹಿಂದೆಗೆದ ಪರಿಣಾಮವಾಗಿ ಯೂಕ್ರೇನ್​ನಿಂದ ಧಾನ್ಯ ಪೂರೈಕೆಗೆ ಅಡಚಣೆಯಾಗಿರುವುದು ತೀವ್ರ ನಿರಾಶಾದಾಯಕ ಸಂಗತಿಯಾಗಿದೆ. ಕಪ್ಪು ಸಮುದ್ರದ ವ್ಯಾಪಾರವು ಆಹಾರ ಮತ್ತು ರಸಗೊಬ್ಬರಗಳ ಜಾಗತಿಕ ಬೆಲೆಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ನಿರ್ಣಾಯಕವಾಗಿದೆ’ ಎಂದು ವಿಶ್ವ ವ್ಯಾಪಾರ ಸಂಸ್ಥೆಯ ಮುಖ್ಯಸ್ಥ ಎನ್ಗೋಜಿ ಒಕೊಂಜೊ-ಐವೆಲ್ಡ್ ಬೇಸರ ವ್ಯಕ್ತಪಡಿಸುತ್ತಾರೆ.

    ರಫ್ತು ನಿಷೇಧ ಪರಿಣಾಮ…

    • ದೇಶದಲ್ಲಿ ಅಕ್ಕಿ ಬೆಲೆಗಳನ್ನು ನಿಯಂತ್ರಿಸಲು ಅನುಕೂಲ
    • ಜಾಗತಿಕ ಬೆಲೆಗಳು ಮತ್ತಷ್ಟು ಹೆಚ್ಚಳ ಸಾಧ್ಯತೆ
    • ಆಫ್ರಿಕಾದ ಕೆಲವು ರಾಷ್ಟ್ರಗಳಿಗೆ ಸಂಕಷ್ಟ
    • ಜಾಗತಿಕ ರಫ್ತಿನಲ್ಲಿ 40-50 ಟನ್ ಅಕ್ಕಿ ಕೊರತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts