ಬೇಲೂರು ಹರೀಶ
ಬೆಂಗಳೂರು: ಆರ್ಥಿಕ ಹೊರೆ ತಗ್ಗಿಸಲು ಮೂರು ತಿಂಗಳ ಹಿಂದಷ್ಟೇ ಅನ್ನಭಾಗ್ಯ ಯೋಜನೆ ಅಕ್ಕಿ ಕಡಿತಗೊಳಿಸಿದ್ದ ರಾಜ್ಯ ಸರ್ಕಾರ, ಇದೀಗ ಮತ್ತೆ 2 ಕೆ.ಜಿ. ಕಡಿತಕ್ಕೆ ಮುಂದಾಗಿದೆ. ಪ್ರತಿ ತಿಂಗಳು ಬಿಪಿಎಲ್ ಕಾರ್ಡ್ದಾರರಿಗೆ ವಿತರಿಸುವ 5 ಕೆ.ಜಿ. ಅಕ್ಕಿ ಪ್ರಮಾಣವನ್ನು 3 ಕೆ.ಜಿ.ಗೆ ಇಳಿಸಿ, ಬದಲಿಗೆ ತಲಾ 2 ಕೆ.ಜಿ. ರಾಗಿ ಅಥವಾ ಜೋಳ ನೀಡಲು ಆಹಾರ ಇಲಾಖೆ ನಿರ್ಧರಿಸಿದೆ. ಆಯಾ ಜಿಲ್ಲೆಯ ಜಂಟಿ ನಿರ್ದೇಶಕರಿಗೆ ಈಗಾಗಲೇ ಮೌಖಿಕ ಸೂಚನೆ ನೀಡಿರುವ ಇಲಾಖೆ, ಜು.1ರಿಂದ ಫಲಾನಭವಿಗಳಿಗೆ ಹೊಸ ನಿಯಮದಡಿ ಪಡಿತರ ವಿತರಿಸಲು ಪೂರ್ವಸಿದ್ಧತೆ ಮಾಡಿಕೊಳ್ಳಿ ಎಂದಿದೆ.
ಕಾರ್ಡ್ದಾರರಿಗೆ 2017ರ ಜೂನ್- ಜುಲೈನಲ್ಲಿ ಅಕ್ಕಿ ಪ್ರಮಾಣವನ್ನು 7 ಕೆ.ಜಿ.ಗೇರಿಸಿ 2 ಕೆ.ಜಿ. ನೀಡುತ್ತಿದ್ದ ಗೋಧಿಯನ್ನು ಆಗಿನ ಸರ್ಕಾರ ನಿಲ್ಲಿಸಿತ್ತು. ಪ್ರತಿ ಸದಸ್ಯನಿಗೆ ನೀಡುವ 5 ಕೆ.ಜಿ. ಜತೆಗೆ ಹೆಚ್ಚುವರಿಯಾಗಿ 2 ಕೆ.ಜಿ. ಅಕ್ಕಿ ನೀಡುವುದರಿಂದ ಪ್ರತಿ ವರ್ಷ ಸರ್ಕಾರಕ್ಕೆ ಅಂದಾಜು 500-600 ಕೋಟಿ ರೂ. ಆರ್ಥಿಕ ಹೊರೆಯಾಗು ತ್ತಿತ್ತು. ಹೀಗಾಗಿ, ಈಗಿನ ಸರ್ಕಾರ 7ರಿಂದ 5 ಕೆಜಿಗೆ ಇಳಿಸುವ ಬದಲು 2 ಕೆ.ಜಿ. ಗೋಧಿ ನೀಡಲಾಗುತ್ತಿತ್ತು.ದಕ್ಷಿಣಕ್ಕೆ ರಾಗಿ, ಉತ್ತರಕ್ಕೆ ಜೋಳ: ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 3 ಕೆಜಿ ಅಕ್ಕಿ, 2 ಕೆಜಿ ರಾಗಿ ಹಾಗೂ ಪ್ರತಿ ಕಾರ್ಡ್ಗೆ 2 ಕೆಜಿ ಗೋಧಿ ವಿತರಿಸಲಾಗುತ್ತಿದೆ. ಅದೇ ರೀತಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರತಿ ಸದಸ್ಯನಿಗೆ 3 ಕೆಜಿ ಅಕ್ಕಿ, 2 ಕೆಜಿ ಜೋಳ ಹಾಗೂ ಪ್ರತಿ ಕಾರ್ಡ್ಗೆ 2 ಕೆಜಿ ಗೋಧಿ ವಿತರಿಸಲು ನಿರ್ಧರಿಸಿದೆ. ಈಗಾಗಲೇ ಭಾರತ ಆಹಾರ ನಿಗಮ (ಎಫ್ಸಿಐ) ಗೋದಾಮುಗಳಿಂದ ಇಲಾಖೆಯ ಸಗಟು ಮಳಿಗೆಗಳಿಗೆ ಹೊಸ ನಿಯಮದಡಿ ರೇಷನ್ ಎತ್ತುವಳಿ ಮಾಡಲಾಗುತ್ತಿದೆ.
ದಕ್ಷಿಣ ಕರ್ನಾಟಕದ ಭಾಗದಲ್ಲಿ ಕಾರ್ಡ್ ದಾರರಿಗೆ ಅಕ್ಕಿ ಬದಲು 2 ಕೆ.ಜಿ. ರಾಗಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ 2 ಕೆ.ಜಿ. ಜೋಳ ವಿತರಿಸಲು ನಿರ್ಧರಿಸಲಾಗಿದೆ. ಜು.1ರಿಂದ ಪ್ರಕ್ರಿಯೆ ಆರಂಭವಾಗಲಿದೆ.
| ಕೆ. ಗೋಪಾಲಯ್ಯ ಆಹಾರ ಸಚಿವ
ಅನ್ನಬಾಗ್ಯ ಯೋಜನೆಯ ಅಕ್ಕಿ ಪ್ರಮಾಣ ಕಡಿತಗೊಳಿ ಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಿದ್ದೇವೆ.
| ಶ್ಯಾಮ್ಲಾ ಇಕ್ಬಾಲ್
ಆಯುಕ್ತೆ, ಆಹಾರ ಇಲಾಖೆ
ವರ್ಷಕ್ಕೆ 800 ಕೋಟಿ ರೂಪಾಯಿ ಉಳಿಕೆ: ಮೂರು ತಿಂಗಳ ಹಿಂದಷ್ಟೇ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ವಿತರಿಸುತ್ತಿದ್ದ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ 400 ಕೋಟಿ ರೂ. ಉಳಿತಾಯವಾಗಿತ್ತು. ಇದೀಗ 3 ಕೆಜಿಗೆ ಇಳಿಸಿದ್ದರಿಂದ ಮತ್ತೆ 400 ಕೋಟಿ ರೂ. ಉಳಿತಾಯವಾಗಲಿದೆ.