ಗಂಗಾವತಿ: ಐತಿಹಾಸಿಕ ಹಿನ್ನೆಲೆ ಮತ್ತು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, ಪ್ರವಾಸೋದ್ಯಮ ಇಲಾಖೆಯಿಂದ 6ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದ ಶ್ರೀ ಚನ್ನಮಲ್ಲಿಕಾರ್ಜುನ ಮಠದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರಾದ ಒಂದು ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಚನ್ನಮಲ್ಲಿಕಾರ್ಜುನ ಮಠದ ಸುತ್ತಲೂ ಸಿಸಿ ರಸ್ತೆ ನಿರ್ಮಾಣ, ಶೌಚಗೃಹ ಕಾಮಗಾರಿ, ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಅದಿಶಕ್ತಿ ದೇವಾಲಯ ಬಳಿ 1.10 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ, ಅಂಜನಾದ್ರಿ ಬೆಟ್ಟದ ಬಳಿ 1 ಕೋಟಿ ರೂ.ವೆಚ್ಚದಲ್ಲಿ ವ್ಯಾಖ್ಯಾನ ಕೇಂದ್ರ, ಶುದ್ಧ ಕುಡಿವ ನೀರು, ಪಾರ್ಕಿಂಗ್ ತಡೆಗೋಡೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಪಂಪಾಸರೋವರದಲ್ಲಿ 45ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮತ್ತು ಶೌಚಗೃಹ ನಿರ್ಮಿಸಲಾಗುವುದು. ಮಿನಿವಿಧಾನಸೌಧವನ್ನು ನಗರಕ್ಕೆ ಸ್ಥಳಾಂತರಿಸುವ ಯೋಜನೆ ರೂಪಿಸಲಾಗಿದ್ದು, ನಗರದಲ್ಲಿರುವ ಪ್ರವಾಸಿ ಮಂದಿರ, ಹಳೇ ತಹಸಿಲ್ ಕಚೇರಿ ಆವರಣದಲ್ಲಿ ಹೊಸ ಕಟ್ಟಡಕ್ಕಾಗಿ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಂದೇ ಸೂರಿನಡಿ ಎಲ್ಲ ಇಲಾಖೆಗಳನ್ನು ತರುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಶೀಘ್ರವೇ ಈಡೇರಲಿದೆ. ಆದ್ಯತೆ ಮೇರೆಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಲಾಗಿದೆ ಎಂದರು.
ನಗರಸಭೆ ಸದಸ್ಯರಾದ ಪರಶುರಾಮ ಮಡ್ಡೇರ್, ನೀಲಕಂಠಪ್ಪ ಕಟ್ಟಿಮನಿ, ವಾಸು ನವಲಿ, ಮಾಜಿ ಸದಸ್ಯ ಎಸ್.ರಾಘವೇಂದ್ರ ಶ್ರೇಷ್ಠಿ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಚನ್ನಪ್ಪ ಮಳಗಿ, ದೇವಾಲಯ ಸಮಿತಿ ಮುಖಂಡರಾದ ಕೆ.ಚನ್ನಬಸಯ್ಯಸ್ವಾಮಿ, ಅಕ್ಕಿ ಚಿನ್ನಪ್ಪ, ಎಚ್.ಎಂ.ಸಿದ್ರಾಮಯ್ಯಸ್ವಾಮಿ, ರಾಚಪ್ಪ ಸಿದ್ದಾಪುರ, ಡಾ.ಎ.ಜಿ.ಜೀಡಿ, ಬಾವಿಕಟ್ಟಿ ರಾಜಶೇಖರ್, ಅಕ್ಕಿ ಪ್ರಕಾಶ, ಕನಕರಾಯ ಇತರರಿದ್ದರು. ಆನೆಗೊಂದಿ ಮತ್ತು ಅಂಜನಾದ್ರಿ ಬೆಟ್ಟದಲ್ಲೂ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.