ಬೆಂಗಳೂರು: ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಎಬ್ಬಿಸಿರುವ ಹವಾ ನೋಡಿ ಬಾಲಿವುಡ್ ದಂಗಾಗಿದೆ. ಸರಿಯಾದ ಪ್ರಚಾರ ಇಲ್ಲದಿದ್ದರೂ, ‘ಪುಷ್ಪ’ ಚಿತ್ರದ ಹಿಂದಿ ಅವತರಣಿಕೆಯು ಉತ್ತರ ಭಾರತದಲ್ಲಿ ಬಿಡುಗಡೆಯಾಗಿ 80ಕ್ಕೂ ಹೆಚ್ಚು ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಅಷ್ಟೇ ಅಲ್ಲ, ಗಳಿಕೆಯ ವಿಷಯದಲ್ಲಿ ‘83’ ಚಿತ್ರವನ್ನು ಹಿಂದಿಕ್ಕಿದೆ. ಇದರಿಂದ ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಚಿತ್ರಗಳನ್ನು ಕಂಡರೆ ಬಾಲಿವುಡ್ ಹೆದರುವಂತಾಗಿದೆ.
ಆ ಭಯ ಎಷ್ಟರ ಮಟ್ಟಿಗೆ ಹೆಚ್ಚಿದೆ ಎಂದರೆ, ‘ಕೆಜಿಎಫ್ 2’ಗೆ ಹೆದರಿ ‘ಲಾಲ್ ಸಿಂಗ್ ಛಡ್ಡಾ’ ಚಿತ್ರವನ್ನು ಮುಂದೂಡಲಾಗಿದೆ ಎಂಬ ಸುದ್ದಿಯೊಂದು ಹಬ್ಬಿದೆ. ‘ಪುಷ್ಪ’ ಮತ್ತು ‘83’ ಚಿತ್ರಗಳು ಒಂದು ವಾರದ ಅಂತರದಲ್ಲಿ ಬಿಡುಗಡೆಯಾಗಿದ್ದವು. ಆದರೂ ‘ಪುಷ್ಪ’ ಕೊಟ್ಟ ಹೊಡೆತಕ್ಕೆ ‘83’ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಹೀಗಿರುವಾಗ ‘ಕೆಜಿಎಫ್ 2’ ಮತ್ತು ‘ಲಾಲ್ ಸಿಂಗ್ ಛಡ್ಡಾ’ ಒಂದೇ ದಿನ ಬಿಡುಗಡೆಯಾಗುತ್ತಿವೆ. ಈ ಎರಡೂ ಚಿತ್ರಗಳ ಪೈಕಿ, ಪ್ರೇಕ್ಷಕರಿಗೆ ದೊಡ್ಡ ಮಟ್ಟದಲ್ಲಿ ಕುತೂಹಲವಿರುವುದು ‘ಕೆಜಿಎಫ್ 2’ ಚಿತ್ರದ ಬಗ್ಗೆ. ಏಕೆಂದರೆ, ಅವರು ಈಗಾಗಲೇ ‘ಕೆಜಿಎಫ್ 1’ ಚಿತ್ರವನ್ನು ನೋಡಿದ್ದಾರೆ. ಅಷ್ಟೇ ಅಲ್ಲ, ಅದರ ಮುಂದುವರಿದ ಭಾಗವನ್ನು ನೋಡುವುದಕ್ಕೆ ಕಾತರರಾಗಿದ್ದಾರೆ. ಹೀಗಿರುವಾಗ, ‘ಕೆಜಿಎಫ್ 2’ ನೋಡುವ ಭರದಲ್ಲಿ ಎಲ್ಲಿ ‘ಲಾಲ್ ಸಿಂಗ್ ಛಡ್ಡಾ’ ಚಿತ್ರವನ್ನು ಕೈಬಿಡುತ್ತಾರೋ ಎಂಬ ಭಯ ಚಿತ್ರತಂಡಕ್ಕೆ ಎದುರಾಗಿದೆ.
ಇದರ ಜತೆಗೆ, ಯಶ್ ಚಿತ್ರಕ್ಕಿರುವ ಕ್ರೇಜ್ ನೋಡಿದರೆ ಅದಕ್ಕೆ ಅತೀ ಹೆಚ್ಚಿನ ಸಂಖ್ಯೆಯ ಚಿತ್ರಮಂದಿರಗಳು ಸಿಗುವ ಸಾಧ್ಯತೆ ಹೆಚ್ಚಿದೆ. ಆ ಕಡೆ ಜನರೂ ಇಲ್ಲ, ಈ ಕಡೆ ಚಿತ್ರಮಂದಿರಗಳೂ ಇಲ್ಲ ಎನ್ನುವ ಪರಿಸ್ಥಿತಿ ಎದುರಾಗುವ ಬದಲು ಚಿತ್ರವನ್ನು ಏಕೆ ಮುಂದೂಡಬಾರದು ಎಂಬ ಚರ್ಚೆ ಚಿತ್ರತಂಡದಲ್ಲಿ ನಡೆಯುತ್ತಿದೆಯಂತೆ. ಹೇಗೂ ಚಿತ್ರ ಎರಡು ಬಾರಿ ಮುಂದೂಡಲ್ಪಟ್ಟಿದ್ದು, ಮೂರನೆಯ ಬಾರಿಯೂ ಮುಂದೂಡಿ, ಕೊನೆಗೊಂದು ಒಳ್ಳೆಯ ದಿನ ನೋಡಿಕೊಂಡು ಚಿತ್ರ ಬಿಡುಗಡೆ ಮಾಡಿದರಾಯಿತು ಎಂದು ಚಿತ್ರತಂಡ ಯೋಚಿಸುತ್ತಿದೆಯಂತೆ. ಹಾಗಾದರೆ, ‘ಲಾಲ್ ಸಿಂಗ್ ಛಡ್ಡಾ’ ಚಿತ್ರ ಮುಂದಕ್ಕೆ ಹೋಗುತ್ತದಾ? ಉತ್ತರಕ್ಕಾಗಿ ಇನ್ನಷ್ಟು ದಿನ ಕಾಯಬೇಕು.
ಅಮ್ಮ ಕೋವಿಡ್ನಿಂದ ಮೃತಪಟ್ಟರೂ ನೋಡಲು ಬರದ ಮಗಳು-ಅಳಿಯ; ಕೊನೆಗೆ ಅಂತ್ಯಸಂಸ್ಕಾರದ್ದೇ ದೊಡ್ಡ ಕಥೆ…