ಮಂಗಳೂರು: ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡುತ್ತ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಹಾಗೂ ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ದ.ಕ. ಜಿಲ್ಲಾ ರೆಡ್ಕ್ರಾಸ್ ಸೊಸೈಟಿ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.
ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಸಮಿತಿ, ಶ್ರೀದೇವಿ ಮೂಕಾಂಬಿಕಾ ದೇವಸ್ಥಾನ ಕೊಲ್ಯ, ಯೂತ್ ರೆಡ್ಕ್ರಾಸ್ ಘಟಕ ನಿಟ್ಟೆ ವಿಶ್ವವಿದ್ಯಾಲಯ, ಕ್ಷೇಮ ದೇರಳಕಟ್ಟೆ, ರೋಟರಿ ಕ್ಲಬ್ ಮಂಗಳೂರು, ರೋಟರಿ ಸಮುದಾಯ ದಳ ಕುಂಪಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಲ್ಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೊಲ್ಯ ಶ್ರೀ ದೇವಿ ಮೂಕಾಂಬಿಕಾ ದೇವಸ್ಥಾನದಲ್ಲಿ ಇತ್ತೀಚೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಕ್ಯಾನ್ಸರ್ ರೋಗ ಮಾಹಿತಿ ಕಾರ್ಯಾಗಾರ, ಉಚಿತ ಕಣ್ಣು ಪರೀಕ್ಷೆ, ಉಚಿತ ಕನ್ನಡಕ ವಿತರಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ.ಕೃಷ್ಣಶರಣ್ ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆಹಚ್ಚುವಿಕೆ ಬಗ್ಗೆ ಮಾಹಿತಿ ನೀಡಿದರು. ಶ್ರೀದೇವಿ ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿ ವಾಸುದೇವ ಗೌಡ ಅಧ್ಯಕ್ಷತೆ ವಹಿಸಿದ್ದರು. ಎಚ್ಡಿಎಫ್ಸಿ ಬ್ಯಾಂಕ್ನ ಅಧಿಕಾರಿ ಅರವಿಂದ, ರೋಟರಿ ಸಂಘಟಕ ಸಂಜೀವ ಪೂಜಾರಿ, ರೆಡ್ಕ್ರಾಸ್ ಆಡಳಿತ ಸಮಿತಿ ಸದಸ್ಯ ಪಿ.ಬಿ.ಹರೀಶ್ ರೈ, ನಿಟ್ಟೆ ವಿವಿ ಯೂತ್ ರೆಡ್ಕ್ರಾಸ್ನ ನೋಡಲ್ ಅಧಿಕಾರಿ ಡಾ.ಶಂತನು ಸಹಾ, ಯೂತ್ ರೆಡ್ಕ್ರಾಸ್ ನಿರ್ದೇಶಕ ಸಚೇತ್ ಸುವರ್ಣ, ರೋಟರಿ ಸಮುದಾಯ ದಳ ಸಂಚಾಲಕ ನಾರಾಯಣ ಕುಂಪಲ, ರವಿ ಕನೀರ್ತೋಟ, ಫ್ರೆಂಡ್ಸ್ ಕ್ಲಬ್ ಕೊಲ್ಯ ಸಂಚಾಲಕ ಅಶ್ವಿನ್ ಕೊಲ್ಯ, ಶ್ರೀಲತಾ ಉಳ್ಳಾಲ್ ಮುಖ್ಯ ಅತಿಥಿಗಳಾಗಿದ್ದರು.