ಬೆಂಗಳೂರು: ರಾಜ್ಯದಲ್ಲಿ ವಿದ್ವಂಸಕ ಕೃತ್ಯ ಎಸಗಲು ಸಂಚು ಹಾಕಿದ್ದ ಆರು ಉಗ್ರರ ಪೈಕಿ ಪೊಲೀಸರು ಐವರನ್ನು ಬಂಧಿಸಿದ್ದು, ಓರ್ವ ತಲೆಮಾರಿಸಿಕೊಂಡಿದ್ದಾನೆ. ಉಗ್ರರನ್ನು ಪೊಲೀಸರು ಸೆದೆ ಬಡಿಯುವ ಮೂಲಕ ನಡೆಯಬೇಕಾಗಿದ್ದ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ.
ಬಂಧಿತರನ್ನು ಸೈಯದ್ ಸುಹೇಲ್, ಉಮರ್, ಜುನೈದ್, ಮುದಾಸಿರ್ ಮತ್ತು ಜಾಹಿದ್ ಎಂದು ಗುರುತಿಸಲಾಗಿದ್ದು, ಆರೋಪಿಗಳ ಬಳಿ ಇದ್ದ 4 ವಾಕಿಟಾಕಿ, 7 ಕಂಟ್ರಿ ಮೇಡ್ ಪಿಸ್ತೂಲ್, 42 ಸಜೀವ ಗುಂಡುಗಳು, ಮದ್ದುಗುಂಡು, 2 ಡ್ರ್ಯಾಗರ್, 2 ಸೆಟಲೈಟ್ ಫೋನ್ ಹಾಗೂ 4 ಗ್ರೆನೈಡ್ ವಶಕ್ಕೆ ಪಡೆಯಲಾಗಿದೆ.
ಈ ಆರೋಪಿಗಳು 2017ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದ ವೇಳೆ ಜಮಾತ್-ಎ-ಇಸ್ಲಾಮಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಜೈಲಿನಲ್ಲಿ ತಾವೂ ಸಂಘಟನೆ ಸೇರುವುದರ ಬಗ್ಗೆ ಮಾತುಕತೆ ನಡೆಸಿದ್ದರು ಎನ್ನಲಾಗಿದ್ದು, ತಾವು ಎಲ್ಲದಕ್ಕೂ ರೆಡಿ ಎಂದು ಉಗ್ರರಿಗೆ ಹೇಳಿದ್ದರು.
ಇದನ್ನೂ ಓದಿ: ಎಸ್.ಆರ್. ಪಾಟೀಲ್, ಶ್ರೀಕಂಠೇಗೌಡಗೆ ವಿಧಾನ ಪರಿಷತ್ತಿನ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ
ಹಿಂದಿದೆ ಆ ಒಂದು ದ್ವೇಷ
ಸಿಸಿಬಿ ಅಧಿಕಾರಿಗಳ ತನಿಖೆ ವೇಳೆ ಹಲವು ಸ್ಪೋಟಕ ಮಾಹಿತಿ ಹೊರಬೀಳುತ್ತಿದ್ದು, ಬೆಂಗಳೂರು ಸ್ಪೋಟ ಸಂಚಿನ ಹಿಂದೆ ಆ ಒಂದು ರಿವೇಂಜ್ ಇತ್ತು ಎಂದು ಹೇಳಲಾಗಿದೆ. ಭಾರತದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಂಘಟನೆಯನ್ನು ನಿಷೇಧಿಸಿದ್ದಕ್ಕಾಗಿ ವಿದ್ವಂಸಕ- ಕೃತ್ಯ ಎಸಗಲು ಸಂಚು ರೂಪಿಸಿದ್ದರು.
2008ರ ಬೆಂಗಳೂರು ಸರಣಿ ಸ್ಪೋಟದ ಪ್ರಮುಖ ಆರೋಪಿ ನಾಜೀರ್ ಬಂಧಿತ ಆರೋಪಿಗಳಿಗೆ ಜೈಲಿನಲ್ಲಿರಬೇಕಾದ ಸಮಯದಲ್ಲಿ ಬ್ರೈನ್ ವಾಷ್ ಮಾಡಿದ್ದ. 2008ರಲ್ಲಿ ಬೆಂಗಳೂರಿನಲ್ಲಿ 9 ಕಡೆ ಬಾಂಬ್ ಬ್ಲ್ಯಾಸ್ಟ್ ಮಾಡಿದ್ದು ಸಿಮಿ ಸಂಘಟನೆ. ಆದರೆ, ಆ ಸಂಘಟನೆಯನ್ನು ಬ್ಯಾನ್ ಮಾಡಿದ ನಂತರ ಹುಟ್ಟಿಕೊಂಡಿದೆ ಈ PFI ಎಂದು ಆರೋಪಿಗಳಿಗೆ ನಾಜೀರ್ ಹೇಳಿದ್ದ.
ಈಗ PFI ಸಂಘಟನೆಯನ್ನು ಸಹ ನಿಷೇಧಿಸಲಾಗಿದ್ದು ಈ ನಿಟ್ಟಿನಲ್ಲಿ ನಾವು ನಮ್ಮ ಸೇಡು ತೀರಿಸಿಕೊಳ್ಳಬೇಕಿದೆ ಎಂದು 2008ರ ಸರಣಿ ಬಾಂಬ್ ಸ್ಪೋಟದ ಆರೋಪಿ ನಾಜೀರ್ ಆರೋಪಿಗಳ ಬ್ರೈನ್ ವಾಶ್ ಮಾಡಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಉಗ್ರರು ವಿದ್ವಂಸಕ ಕೃತ್ಯ ಎಸಗಲು ತಯಾರಿ ನಡೆಸುತ್ತಿರುವ ಕುರಿತು ಗುಪ್ತಚರ ದಳ ಈ ಹಿಂದೆ ಮಾಹಿತಿ ನೀಡಿತ್ತು.