ಮಡಿಕೇರಿ: ಸಂಕ್ರಾಂತಿ ಹಬ್ಬದ ಖುಷಿಯ ಬೆನ್ನಲ್ಲೇ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಅವರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಗುರುವಾರ ಬೆಳ್ಳಂಬೆಳಗ್ಗೆ ರಶ್ಮಿಕಾ ಮನೆ ಮೇಲೆ ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ- ಮಡಿಕೇರಿ ಮಾರ್ಗದ ಕುಕ್ಲೂರು ಗ್ರಾಮದಲ್ಲಿರುವ ಮನೆಯಲ್ಲಿ ಐಟಿ ಶೋಧಾ ನಡೆದಿದೆ. ಬೆಂಗಳೂರಿನಿಂದ ಮೂರು ಬಾಡಿಗೆ ವಾಹನದಲ್ಲಿ ಆಗಮಿಸಿದ 15 ಜನರ ಅಧಿಕಾರಿಗಳ ತಂಡ ಪರಿಶೀಲನೆ ಮಾಡುತ್ತಿದೆ. ಮುಂಜಾನೆ 7.30 ರಿಂದ ಕಾರ್ಯಾಚರಣೆ ಪ್ರಾರಂಭವಾಗಿದೆ.
ದಾಳಿ ನಡೆಸಿದ ವೇಳೆಯಲ್ಲಿ ಮನೆಯಲ್ಲಿ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ, ತಂದೆ ಮದನ್ ಮಂದಣ್ಣ ಮಾತ್ರ ಇದ್ದರು. ಮದನ್ ಮಂದಣ್ಣ ವಿರಾಜಪೇಟೆ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾಗಿದ್ದಾರೆ. ಮದನ್ ಮಂದಣ್ಣ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರೊಂದಿಗೆ ಒಡನಾಟ ಹೊಂದಿದ್ದಾರೆ ಎನ್ನಲಾಗಿದೆ. ಆ ಕಾರಣಕ್ಕಾಗಿ ಐಟಿ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಸಂಕ್ರಾಂತಿ ಹಬ್ಬ ಮುಗಿಸಿ ವಿರಾಮದ ಖುಷಿಯಲ್ಲಿದ್ದ ಮನೆಯವರಿಗೆ ಐಟಿ ದಾಳಿ ಶಾಕ್ ನೀಡಿದೆ.
ಅಂದಹಾಗೆ ಕರುನಾಡು ಕ್ರಶ್ ಎಂದೇ ಹೆಸರಾಗಿರುವ ರಶ್ಮಿಕಾ ಸಾಲು ಸಾಲು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ತೆಲುಗು ಸೂಪರ್ಸ್ಟಾರ್ ಮಹೇಶ್ ಬಾಬು ಅವರೊಟ್ಟಿಗೆ ನಟಿಸಿರುವ ‘ಸರಿಲೇರು ನೀಕೆವರು’ ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ.
ಇದರೊಟ್ಟಿಗೆ ಸ್ಯಾಂಡಲ್ವುಡ್ನಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜತೆಗೆ ಪೊಗರು ಚಿತ್ರದಲ್ಲಿ ನಟಿಸಿದ್ದು, ಬಿಡುಗಡೆಗೆ ಸಜ್ಜಾಗಿದೆ. ನಿನ್ನೆಯಷ್ಟೇ ನಾನೇನು ಹೆಚ್ಚು ಸಂಭಾವನೆ ಪಡೆಯುವ ನಟಿಯಲ್ಲ ಎಂದು ರಶ್ಮಿಕಾ ಹೇಳಿದ್ದರು. ಇದೀಗ ಐಟಿ ದಾಳಿ ನಿಜಕ್ಕೂ ರಶ್ಮಿಕಾಗೆ ಶಾಕ್ ನೀಡಿದೆ. (ದಿಗ್ವಿಜಯ ನ್ಯೂಸ್)