ಚಿಕ್ಕಮಗಳೂರು: ಆನೆ ದಂತದಲ್ಲಿ ಕೆತ್ತನೆ ಮಾಡಿದ ಚೆಸ್ಪಾನ್ ಮತ್ತು ಬುರುಡೆ ಸಹಿತ ಜಿಂಕೆ ಕೊಂಬುಗಳನ್ನು ಮಾರಾಟ ಮಾಡಲೆತ್ನಿಸುತ್ತಿದ್ದ ಆರೋಪಿಯನ್ನು ವಿಶೇಷ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ಸಕಲೇಶಪುರದ ಮೆಲ್ವಿನ್ ಬಂಧಿತ. ಚಿಕ್ಕಮಗಳೂರು ಮಿಲನ್ ಚಿತ್ರಮಂದಿರದ ಬಳಿ ಗಿರಾಕಿಗೆ ಕಾಯುತ್ತಿದ್ದಾಗ ಖಚಿತ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳ ಪೊಲೀಸರು ಮಾರುವೇಷದಲ್ಲಿ ತೆರಳಿ ಮೆಲ್ವಿನ್ನನ್ನು ವಶಕ್ಕೆ ಪಡೆದರು. ಕೈಲಿದ್ದ ಚೀಲವನ್ನು ಪರಿಶೀಲಿಸಿದಾಗ ಆನೆ ದಂತದಲ್ಲಿ ಕೆತ್ತನೆ ಮಾಡಿದ ಚದುರಂಗದ 16 ಬಿಳಿ ಪಾನ್, ಕಪ್ಪು ಬಣ್ಣ ಹಚ್ಚಿರುವ 16 ಪಾನ್ಗಳು, ಜಿಂಕೆ ಬುರುಡೆ ಸಹಿತ ಕೊಂಬುಗಳು ಪತ್ತೆಯಾಗಿವೆ. ಆರೋಪಿ ಪೊಲೀಸರ ಬಲೆಗೆ ಬಿದ್ದ ಮಾಹಿತಿ ಅರಿತ ಖರೀದಿದಾರ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಅಪರೂಪದ ಪ್ರಕರಣ: ರಾಜರ ಕಾಲದಲ್ಲಿ ಆನೆ ದಂತದಿಂದ ತಯಾರಿಸಿದ ಸಾಮಗ್ರಿಗಳಿಂದ ಆಟವಾಡುತ್ತಿದ್ದರು. ಹುಲಿ, ಚಿರತೆ, ಜಿಂಕೆ ಸೇರಿದಂತೆ ವನ್ಯಪ್ರಾಣಿಗಳ ಅಂಗಾಂಗಗಳನ್ನು ಮನೆಯಲ್ಲಿ ಅಲಂಕಾರಿಕ ವಸ್ತುಗಳಾಗಿ ಬಳಸುತ್ತಿದ್ದರು. ಶ್ರೀಮಂತರು ಪ್ರತಿಷ್ಠೆಗಾಗಿ ಮನೆಗಳಲ್ಲಿ ಇಂತಹ ಬೆಲೆಬಾಳುವ ವಸ್ತುಗಳನ್ನು ಇಟ್ಟುಕೊಳ್ಳುತ್ತಾರೆ. ಈಗ ಅರಣ್ಯ ಕಾಯ್ದೆಗಳು ಬಿಗಿಯಾಗಿ ಅದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲದ ಕಾರಣ ಕಡಿವಾಣ ಬಿದ್ದಿದೆ. ಇದರ ನಡುವೆಯೂ ಆನೆ ದಂತದಿಂದ ತಯಾರಿಸಿದ 32 ಚೆಸ್ ಪಾನ್ಗಳು ಮಾರಾಟ ಮಾಡಲು ಯತ್ನಿಸುತ್ತಿದ್ದ ಅಪರೂಪದ ಪ್ರಕರಣ ಬೆಳಕಿಗೆ ಬಂದಿದ್ದು ಇದರ ಹಿಂದೆ ಯಾರ್ಯಾರು ಇದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕಿದೆ.
ಅಜ್ಜನ ಕಾಲದಿಂದಲೂ 32 ಚೆಸ್ ಪಾನ್ ಮತ್ತು ಜಿಂಕೆ ಕೊಂಬು ಮನೆಯಲ್ಲಿತ್ತು. ಹಾಸನದ ವ್ಯಕ್ತಿಯೊಬ್ಬ ಆನೆ ದಂತದ ಚೆಸ್ಪಾನ್ ಖರೀದಿಸಲು ಮುಂದಾಗಿದ್ದ ಎಂಬ ಮಾಹಿತಿಯನ್ನು ಆರೋಪಿ ಅಧಿಕಾರಿಗಳ ಬಳಿ ಹೇಳಿದ್ದಾನೆ ಎಂದು ತಿಳಿದುಬಂದಿದೆ.
ಸಿಐಡಿ ಅರಣ್ಯ ಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ.ಶರತ್ಚಂದ್ರ, ಮಡಿಕೇರಿ ಪೊಲೀಸ್ ಅಧೀಕ್ಷಕ ಎಂ.ಎ.ಚಂದ್ರಕಾಂತ್, ಉಪಾಧೀಕ್ಷಕ ಶ್ರೀನಿವಾಸ ರೆಡ್ಡಿ ಸಹಕಾರದಲ್ಲಿ ಪೊಲೀಸ್ ಉಪ ನಿರೀಕ್ಷಕ ಎಲ್.ಎಂ.ಶರತ್, ಸಿಬ್ಬಂದಿ ಎಚ್.ದೇವರಾಜ್, ಡಿ.ಎಚ್.ದಿನೇಶ್, ಎಸ್.ಕೆ.ದಿವಾಕರ, ಕೆ.ಎಸ್.ದಿಲೀಪ್, ಎ.ಜಿ.ಹಾಲೇಶ್, ಹೇಮಾವತಿ, ತಿಮ್ಮ ಶೆಟ್ಟಿ ಕಾರ್ಯಾಚರಣೆಯಲ್ಲಿದ್ದರು.
ಥೂ ಇದೆಂಥಾ ಅಸಹ್ಯ? ಶಿಕ್ಷಕಿ ಜೊತೆ ಶಾಲೆಯಲ್ಲೇ ಸಂಭೋಗ ನಡೆಸಿದ ಪ್ರಿನ್ಸಿಪಾಲ್! ವಿಡಿಯೋ ವೈರಲ್