ಸಿಂಧನೂರು: ಬಾಗಲಕೋಟೆ ತಾಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿ ಕೊಲೆಮಾಡಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿ ನಗರದಲ್ಲಿ ಕ್ರಾಂತಿಕಾರಿ ಯುವಜನ ರಂಗ(ಆರ್ವೈಎಫ್) ಮಂಗಳವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ಗೆ ಮನವಿ ಸಲ್ಲಿಸಿತು.
ಜ. 12 ಅಪ್ರಾಪ್ತೆ ಮೇಲೆ ಯಾರೋ ದುಷ್ಕರ್ಮಿಗಳು ಅತ್ಯಾಚಾರ ನಡೆಸಿದ್ದಾರೆ. ಶೆಡ್ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ನೇತು ಹಾಕಲಾಗಿದೆ. ಈ ಘಟನೆ ಭಯದ ವಾತಾವರಣವ ಮೂಡಿಸಿದೆ. ಅಪ್ರಾಪ್ತೆ ಅತ್ಯಾಚಾರ ಹಾಗೂ ಕೊಲೆ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಬಾಲಕಿಯ ಸಾವಿಗೆ ನೈಜ ಕಾರಣ ತಿಳಿಯಲು ಎಫ್ಎಸ್ಎಲ್ ವರದಿ ತಯಾರಿಸಿ ತನಿಖೆ ಚುರುಕುಗೊಳಿಸಿ, ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಬಾಲಕಿಯ ಕುಟುಂಬದವರಿಗೆ 10 ಲಕ್ಷ ರೂ. ಪರಿಹಾರ ಒದಗಿಸಬೇಕು, ಇಂಥ ಘಟನೆಗಳು ಮರುಕಳಿಸದಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಲಾಯಿತು.
ಆರ್ವೈಎಫ್ ರಾಜ್ಯ ಸಂಚಾಲಕ ನಾಗರಾಜ ಪೂಜಾರ್, ಬಸವರಾಜ ಎಕ್ಕಿ, ಬಿ.ಎನ್.ಯರದಿಹಾಳ, ಬಸವರಾಜ ಬೆಳಗುರ್ಕಿ, ಆರ್.ಎಚ್.ಕಲಮಂಗಿ, ಮಹಾದೇವ ಅಮರಾಪುರ, ಮಲ್ಲಿಕಾರ್ಜುನ ಹೂಗಾರ, ಕಿರಣಕುಮಾರ, ಶಾಮೀದ್, ಮಲ್ಲಿಕಾರ್ಜುನ ದೀನಸಮುದ್ರ ಇದ್ದರು.